Gruha Lakshmi Scheme: ಗೃಹಲಕ್ಷ್ಮಿ ಹಣ 5000 ಕೊಡ್ತಾರಂತೆ ಕುಮಾರಸ್ವಾಮಿ: ಡಿ ಕೆ ಶಿವಕುಮಾರ್ ರಿಯಾಕ್ಷನ್
ಬೆಂಗಳೂರು, ಜೂ 16: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ಗೃಹಿಣಿಯರಿಗೆ 2000 ರೂಪಾಯಿ ಹಣವನ್ನ ಕಾಂಗ್ರಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನೀಡುತ್ತಿದೆ. ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಕೊಟ್ಟು ಸರ್ಕಾರದ ಬೊಕ್ಕಸವನ್ನ ಬರಿದಾಗಿಸಿದೆ ಎಂದು ಬಹುದಿನಗಳಿಂದ ವಿಪಕ್ಷಗಳು ಆರೋಪ ಮಾಡ್ತಾನೆ ಇದ್ದಾರೆ. ಆದರೆ, ಇದೀಗ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಗೃಹಲಕ್ಷ್ಮಿ ಹಣವನ್ನ 5 ಸಾವಿರ ಕೊಡ್ತೀವಿ ಎಂದಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಗ್ಯಾರಂಟಿ ಸ್ಕೀಮ್ ಗಾಗಿ ಸಿದ್ದರಾಮಯ್ಯ ಕೇಂದ್ರದ ಬಳಿ ಹೋಗಿ ಹಣ ಕೇಳಿದ್ದಾರೆ ಎಂದಿದ್ದಾರೆ. ಮುಂದಿನ ಬಾರಿ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ರು. ಈ ಸರ್ಕಾರ ರಾಜ್ಯದಲ್ಲಿ ಯಾವ ರೀತಿ ನಡೆಯುತ್ತಿದೆ. ಇವರು ಹಾಕಿದ್ದಂತೆ ಟ್ಯಾಕ್ಸ್ ಹಾಕಿದ್ರೆ ಗೃಹ ಲಕ್ಷ್ಮಿಗೆ 2000 ಅಲ್ಲ, ನಾನು 5000 ಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ರು. ಕುಮಾರಸ್ವಾಮಿ ಅವರ ಈ ಹೇಳಿಕೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸರ್ಕಾರ ವಸೂಲಿ ಮಾಡುತ್ತಿರುವ ತೆರಿಗೆ ನೋಡಿದರೆ ನನ್ನ ಸರ್ಕಾರ ಇದ್ದಿದ್ದರೆ ಗೃಹಲಕ್ಷ್ಮಿಗೆ 5 ಸಾವಿರ ಕೊಡುತ್ತಿದ್ದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಬಹಳ ಸಂತೋಷ. ಅವರು ಚೆನ್ನಾಗಿ ಆರೋಗ್ಯಕರವಾಗಿರಲಿ ಎಂದು ತಿಳಿಸಿದರು. ನಾವು ಅಹಮದಾಬಾದ್ ವಿಮಾನ ದುರಂತದ ಬಗ್ಗೆ ರಾಜಕೀಯ ಮಾಡೋದಿಲ್ಲ. ಹೆಣದ ಮೇಲೆ ರಾಜಕೀಯ ಮಾಡುವುದು ಏನಿದ್ದರೂ ಬಿಜೆಪಿ ಹಾಗೂ ಜೆಡಿಎಸ್ ಕೆಲಸ. ನಾವು ಅವರಂತೆ ನೀಚ ರಾಜಕೀಯ ಮಾಡುವುದಿಲ್ಲ ಎಂದು ಡಿ ಕೆ ಶಿವಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಹಮದಾಬಾದ್ ವಿಮಾನ ಅಪಘಾತದಂತಹ ದುರಂತ ದೇಶದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿ ಎಲ್ಲಿಯೂ ನಡೆಯಬಾರದು. ಈ ದುರಂತದಲ್ಲಿ ಅನೇಕರು ಸುಟ್ಟುಹೋಗಿದ್ದಾರೆ. ಆ ದುರಂತದ ಸ್ಥಳ ನೋಡಿದರೆ ಆಘಾತವಾಗುತ್ತದೆ. ಅಕಸ್ಮಾತ್ 500 ಮೀಟರ್ ಮುಂದಕ್ಕೆ ಹೋಗಿ ವಿಮಾನ ಅಪ್ಪಳಿಸಿದ್ದರೂ ಸಾವಿರಾರು ಮಂದಿಯ ಜೀವಹಾನಿಯಾಗುತ್ತಿತ್ತು. ಈಗ ವೈದ್ಯಕೀಯ ಹಾಸ್ಟೆಲ್ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ಮಾನಸಿಕ ಆಘಾತವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಾವು ಕೆಲವರನ್ನು ಭೇಟಿ ಮಾಡಿ ಮಾತನಾಡಿದೆವು. ಈ ಅಪಘಾತ ಕುರಿತು ಬ್ಲಾಕ್ ಬಾಕ್ಸ್ ತನಿಖೆ ವರದಿ ಬರಬೇಕಾಗಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಅಲ್ಲಿ ಹೋಗಿ ಸಾಂತ್ವನ ಹೇಳಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಘಟನೆ ನಂತರ ವಿಮಾನಯಾನ ಸಚಿವರ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮೂಡುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಹೆಣದ ಮೇಲೆ ರಾಜಕೀಯ ಮಾಡುವುದೇ ಕೆಲಸ. ನಾವು ಹಳೇ ಪ್ರಕರಣ ಹಾಗೂ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಟೀಕೆ ಮಾಡಬಹುದು. ಆದರೆ ನಾವು ಅವರ ಮಟ್ಟಕ್ಕೆ ಇಳಿಯುವುದಿಲ್ಲ. ಈ ವಿಚಾರದಲ್ಲಿ ಅನೇಕ ತಾಂತ್ರಿಕ ಅಂಶಗಳಿವೆ. ನಾನು ಅವುಗಳ ತಜ್ಞನಲ್ಲ. ಈ ಎಲ್ಲಾ ವಿಚಾರವಾಗಿ ಚರ್ಚೆ ಆಗುತ್ತಿದೆ. ಆದರೆ ಈ ವಿಚಾರವನ್ನು ರಾಜಕೀಯಗೊಳಿಸುವ ವ್ಯಕ್ತಿ ನಾನಲ್ಲ. ಈ ಸಮಯದಲ್ಲಿ ಕೇಂದ್ರ ಸಚಿವರ ಬಗ್ಗೆ ಟೀಕೆ ಮಾಡುವುದಿಲ್ಲ. ಇದು ದೇಶದ ಗಂಭೀರ ವಿಚಾರ ಎಂದು ತಿಳಿಸಿದರು.












Click it and Unblock the Notifications