ಒಂದೇ ಒಂದು ಪಾನ್ ಅಲ್ಲಾಡಿಸಿದ್ದಕ್ಕೆ ಡಿಕೆಶಿ ನೀಡಿದ ಖಡಕ್ ಉತ್ತರ ಇದು!
ಬಳ್ಳಾರಿ, ನವೆಂಬರ್ 06: 'ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ' ಎಂದು ಕೆಲ ದಿನಗಳ ಹಿಂದೆ ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಸವಾಲೆಸೆದಿದ್ದರು. ಪಾನ್ ಅಲ್ಲಾಡಿಸಲು ಹೊರಟಿದ್ದ ಬಿಜೆಪಿಗೆ ಉಪಚುನಾವಣೆಯ ಮೂಲಕ ಡಿಕೆ ಶಿವಕುಮಾರ್ ಖಡಕ್ ಉತ್ತರ ನೀಡಿದರಾ?
ಬಳ್ಳಾರಿ ಮತ್ತು ರಾಮನಗರ ಎರಡೂ ಉಪಚುನಾವಣೆಗಳಲ್ಲೂ ಡಿಕೆ ಶಿವಕುಮಾರ್ ಅವರ ಕರಾಮತ್ತು ಎದ್ದು ಕಾಣುತ್ತಿದೆ. ರಾಮನಗರದಲ್ಲಿ ಕೊನೆಯ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಬಳ್ಳಾರಿಯಲ್ಲಿ ಗಣಿದಣಿಗಳ ಯಾವ ಸ್ಟ್ರಾಟಜಿಯೂ ಫಲನೀಡದೆ ಇದ್ದಿದ್ದು, ಡಿಕೆ ಶಿವಕುಮಾರ್ ಅವರ ರಾಜಕೀಯ ಚದುರಂಗದಾಟದ ಭಾಗವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಫಲಿತಾಂಶ ಹೊರಬರುತ್ತಿದ್ದಂತೆಯೇ ಪತ್ರಿಕಾಗೋಷ್ಠಿ ನಡೆಸಿದ ಬಳ್ಳಾರಿ ಉಸ್ತುವಾರಿ ಸಚಿವರೂ ಆಗಿರುವ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ವಿರೋಧಿಗಳನ್ನು ಹಳಿಯದೆ, ಎಲ್ಲರಿಗೂ ಕೃತಜ್ಞತೆ ಅರ್ಪಿಸಿ, ಬಳ್ಳಾರಿ ಜನರ ವಿಶ್ವಾಸವನ್ನು ಮತ್ತೊಮ್ಮೆ ಗಳಿಸಲು ಯಶಸ್ವಿಯಾದರು. ಇದು ಸಹ ಅವರ ರಾಜಕೀಯ ಚದುರಂಗದಾಟದ ಒಂದು ನಡೆಯೇ ಆಗಿದ್ದರೂ ಅಚ್ಚರಿಯಿಲ್ಲ!

ರಾಮನಗರದಲ್ಲಿ ಕೊನೇ ಕ್ಷಣಗಳಲ್ಲಿ ಬಿಜೆಪಿಗೆ ಶಾಕ್!
ರಾಮನಗರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್, ಚುನಾವಣೆಗೆ ಎರಡೇ ದಿನ ಬಾಕಿ ಇರುವಾಗ ಬಿಜೆಪಿ ತೊರೆದು, ಕಾಂಗ್ರೆಸ್ ಸೇರುವ ಮೂಲಕ ರಾಜ್ಯದ ರಾಜಕೀಯದಲ್ಲಿ ತಲ್ಲಣ ಎಬ್ಬಿಸಿದರು. ಒಂದು ತಿಂಗಳ ಹಿಂದಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಚಂದ್ರಶೇಖರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರೂ, ಕೊನೆಯ ಕ್ಷಣದಲ್ಲಿ ಅವರು ತೆಗೆದುಕೊಂಡ ಅನಿರೀಕ್ಷಿತ ನಿರ್ಧಾರ ಬಿಜೆಪಿಯನ್ನು ಕುಗ್ಗಿಸಿತ್ತು. ಚಂದ್ರಶೇಖರ್ ಬಿಜೆಪಿ ಸೇರ್ಪಡೆ ಮತ್ತು ಕೊನೆಯ ಕ್ಷಣದ ಅನಿರೀಕ್ಷಿತ ಬೆಳವಣಿಗೆ ಎಲ್ಲದರ ಹಿಂದೆಯೂ ಡಿಕೆಶಿ ಸಹೋದರರೇ ಕಾರಣ ಎಂಬ ಮಾತೂ ಈ ಸಮಯದಲ್ಲಿ ಕೇಳಿಬಂತು. ಆದರೆ ಅದನ್ನು ಅವರು ತಳ್ಳಿಹಾಕಿದ್ದನ್ನು ಸಹ ಸ್ಮರಿಸಬಹುದು.

ಗಣಿನಾಡಿನ ರಾಜಕೀಯಕ್ಕೆ ಹೊಸತಿರುವು!
ಗಣಿನಾಡು ಎಂದರೆ ಬಿಜೆಪಿ ಭದ್ರಕೋಟೆ ಎಂಬಂತಾಗಿತ್ತು. ಕಳೆದ ಮೂರು ಅವಧಿಯಲ್ಲಿ ಸತತ ಗೆಲುವು ಸಾಧಿಸಿದ್ದ ಬಿಜೆಪಿಯನ್ನು ಸೋಲಿಸುವುದರಲ್ಲಿ ಡಿಕೆಶಿ ಅವರ ಅವಿರತ ಶ್ರಮವಿದೆ. ಕ್ಷೇತ್ರದ ಮಾಜಿ ಸಂಸದ ಶ್ರೀರಾಮುಲು ಅವರ ಸಹೋದರಿ ಜೆ ಶಾಂತಾ ಅವರೇ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ್ದರಿಂದ ಇಲ್ಲಿ ಸಮರ್ಥ ಪ್ರತಿಸ್ಪರ್ಧಿಯನ್ನು ಆರಿಸುವಲ್ಲಿಯೂ ಜಾಣ ನಡೆಯನ್ನು ಇಟ್ಟರು ಡಿಕೆ ಶಿವಕುಮಾರ್. ಡಿಕೆಶಿ ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿಯ ಹೊಣೆ ನೀಡಿದಾಗ, 'ಬಳ್ಳಾರಿ ರಾಜಕೀಯ ಇವರಿಗೇನು ಗೊತ್ತು' ಎಂದಿದ್ದವರಿಗೆ ಈ ಮೂಲಕ ಸ್ಪಷ್ಟ ಉತ್ತರ ನೀದಿದರು ಡಿಕೆಶಿ.

ಆಪರೇಷನ್ ಕಮಲಕ್ಕೆ ಇದು ಉತ್ತರ?!
ಬಿಜೆಪಿಯ ಆಪರೇಷನ್ ಕಮಲಕ್ಕೆ ಡಿಕೆಶಿ ನೀಡಿದ ಸ್ಪಷ್ಟ ಉತ್ತರವೇ ಇದು? ಇಂದು ಪತ್ರಿಕಾಗೋಷ್ಠಿ ನಡೆಸುವಾಗಲೂ, 'ಬಿಜೆಪಿ ಸುಮಾರು ಡಜನ್ ನಷ್ಟು ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ. ಶಾಸಕರ ಖಾತೆಗೆ ಹಣ ವರ್ಗಾಯಿಸಿದೆ' ಎಂಬ ಹೇಳಿಕೆಯನ್ನು ಡಿಕೆಶಿ ನೀಡಿದ್ದರು. ಜೊತೆಗೆ ಅದಕ್ಕೆ ಪ್ರತಿ ನಡೆ ಏನು ಎಂಬುದು ನಮಗೆ ಗೊತ್ತು ಎಂದೂ ಶಾಂತವಾಗಿಯೇ ಹೇಳಿದರು. ಗೆದ್ದರೂ ಬೀಗದೆ, ಮಾತಿನ ಮೊನಚಿನ ಮೂಲಕವೇ ಪ್ರತಿಪಕ್ಷಕ್ಕೆ ಉತ್ತರ ನೀಡಿ ಸುಮ್ಮನಾದರು.

ಬಳ್ಳಾರಿ ಜನರಿಗೆ ಕೃತಜ್ಞತೆ
ಈ ಗೆಲುವು ನಮ್ಮದಲ್ಲ, ಬಳ್ಳಾರಿಯ ಜನರ ಸ್ವಾಭಿಮಾನದ ಗೆಲುವು, ಆತ್ಮಗೌರವದ ಗೆಲುವು, ಸರ್ವಾಧಿಕಾರಿ ಧೋರಣೆಯ ವಿರುದ್ಧದ ಗೆಲುವು. ಈ ಗೆಲುವಿನ ಮೂಲಕ ನೀವು ನಮ್ಮ ಜವಾಬ್ದಾರಿ ಹೆಚ್ಚಿಸಿದ್ದೀರಿ, ನಿಮ್ಮ ಋಣ ನಮ್ಮ ಮೇಲಿದೆ. ಆ ಋಣವನ್ನು ತೀರಿಸುವ ಜವಾಬ್ದಾರಿ ನಮ್ಮದು ಎಂದು ಬಳ್ಳಾರಿ ಜನರಿಗೆ ಕೈಮುಗಿದು, ಕೋಟಿ ನಮನ ಸಲ್ಲಿಸಿದರು ಡಿಕೆಶಿ. ಈ ಮೂಲಕ ಬಳ್ಳಾರಿ ಜನರ ವಿಶ್ವಾಸ ಗಳಿಸಿದರು. ಒಟ್ಟಿನಲ್ಲಿ ಬೆಂಗಳೂರು, ಬೆಳಗಾವಿ ಅಷ್ಟೇ ಅಲ್ಲದೆ, ಗಣಿನಾಡ ರಾಜಕೀಯ ಚದುರಂಗದಾಟದಲ್ಲೂ ಲೀಲಾಜಾಲವಾಗಿ ಗೆಲ್ಲಬಲ್ಲೆ ಎಂಬುದನ್ನು ಈ ಮೂಲಕ ಡಿಕೆಶಿ ತೋರಿಸಿಕೊಟ್ಟಿದ್ದಾರೆ, ಬಿಜೆಪಿಗೆ ಎಚ್ಚರಿಕೆಯನ್ನೂ ನೀದಿದ್ದಾರೆ.












Click it and Unblock the Notifications