‘ಹುಲಿಯಾ ಕಾಡಿಗೆ, ಬಂಡೆ ಕ್ರಷರ್ ಕೆಳಗೆ’: ಸಿದ್ದು, ಡಿಕೆಶಿ ವಿರುದ್ದ ಪರೋಕ್ಷವಾಗಿ ನಳಿನ್ ಕುಮಾರ್ ಕಟೀಲ್ ವ್ಯಂಗ್ಯ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ.ಶಿವಕುಮಾರ್ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾಲ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ವಿಜಯನಗರ,ಮಾರ್ಚ್16: ರಾಜ್ಯ ವಿಧಾನಸಭಾ ಚುನಾವಣೆ ರಾಜಕೀಯ ಪಕ್ಷಗಳು ರೆಡಿಯಾಗಿದ್ದು ಅಬ್ಬರದ ಪ್ರಚಾರದ ನಡುವೆ ಆರೋಪ ಪ್ರತ್ಯಾರೋಗಳು ಹೆಚ್ಚಾಗುತ್ತಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ.ಶಿವಕುಮಾರ್ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾಲ್ ಕಟೀಲ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ನ ಹುಲಿಯಾ ಕಾಡು ಸೇರಲಿದೆ, ಬಂಡೆ ಕ್ರಷರ್ ಕೆಳಗೆ ಸೇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾಲ್ ಕಟೀಲ್ ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಲೇವಡಿ ಮಾಡಿದರು.

ವಿಜಯನಗರದಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಬಂಡೆ ಒಡೆದು ಹೋಗುತ್ತೆ, ಹುಲಿಯಾ ಕಾಡಿಗೆ ಹೋಗುವ ಕಾಲ ದೂರವಿಲ್ಲ. ಕ್ಷೇತ್ರದಲ್ಲಿ ಬಿಜೆಪಿಯಲ್ಲಿ10 ಆಕಾಂಕ್ಷಿಗಳಿರುವುದು ಪಕ್ಷದ ಹಿರಿಮೆಯಾಗಿದೆ. ಪಕ್ಷದಲ್ಲಿ ಕಾರ್ಯಕರ್ತ ನಾಯಕನಾಗಿದ್ದಾನೆ. ಇದು ಬಿಜೆಪಿಯ ವಿಶೇಷ. ನಮ್ಮ ಪಾರ್ಟಿ ಅಪ್ಪನಿಂದ ಬೆಳೆದಿಲ್ಲ, ಅಜ್ಜನಿಂದ ಬಳುವಳಿಯಾಗಿ ಬಂದಿಲ್ಲ. ಹಾಗಾಗಿ ಪ್ರತಿಯೊಬ್ಬರಿಗೂ ಶಾಸಕನ ಸ್ಥಾನ ಕೇಳುವ ಹಕ್ಕಿದೆ ಎಂದರು.
ಡಿ.ಕೆ.ಶಿವಕುಮಾರ್ ಅವರಿಗೆ ಬೆಳಗಾವಿ ಮತ್ತು ಮಂಗಳೂರು ಕುಕ್ಕರ್ ಮೇಲೆ ಬಹಳ ಪ್ರೀತಿ ಎಂದರು. ಇತ್ತ ಪ್ರೇಕ್ಷಕರು ನಗೆಯಾಡಿದಾಗ ''ಯಾಕ್ರಿ ನಕ್ತೀರಿ. ನಾನು ಹೇಳಿದ್ದು ಕುಕ್ಕರ್ ಅಂತ'' ಎಂದು ಮತ್ತೊಮ್ಮೆ ಮೂದಲಿಸಿದರು. ಜನರಿಂದಲೇ ಲಕ್ಷ್ಮೀ ಹೆಬ್ವಳ್ಕರ್ ಹೆಸರು ಹೇಳಿಸಿದ ಕಟೀಲ್ , ಕಾಂಗ್ರೆಸ್ ಭಯೋತ್ಪಾದಕರ ಪರವಾದ ಪಾರ್ಟಿ, ಭಯತ್ಪಾದರನ್ನು ಬೆಂಬಲಿಸುವ ಪಾರ್ಟಿ. ಕ್ಷೇತ್ರ ಕಾಂಗ್ರೆಸ್ ಮುಕ್ತವಾಗಲಿದೆ. ಶಾಸಕ ಭೀಮನಾಯ್ಕ ಕಾಶಿಯಾತ್ರೆಗೆ ತೆರಳಲಿದ್ದಾರೆ ಎಂದರು.
ಈ ರಾಜ್ಯದಲ್ಲಿಅತಿ ಹೆಚ್ಚು ದಲಿತರಿಗೆ ಅನ್ಯಾಯಮಾಡಿದವರು ಸಿದ್ದರಾಮಯ್ಯ, ಅಪ್ಪನ ದಕ್ಷಿಣೆಯಿಂದ ಸಿಎಂ ಆದ ಕುಮಾರಸ್ವಾಮಿ ತಾಜ್ ಹೋಟೆಲ್ ನಿಂದ ಆಡಳಿತ ನಡೆಸಿದರು. ಯಡಿಯೂರಪ್ಪ ನಿಜವಾದ ಮಣ್ಣಿನ ಮಗ. ರೈತರ ಬಜೆಟ್ ಮಂಡಿಸಿದ ಏಕೈಕ ನಾಯಕ. ಸಿದ್ದರಾಮಣ್ಣ ಈ ರಾಜ್ಯದಲ್ಲಿ ಗೋಹತ್ಯೆ ಕಾನೂನು ಹಿಂತೆಗೆದರು. ಹಿಂದೂ ಮುಸ್ಲಿಮರನ್ನು ಒಡೆದಾಳಿದರು. ಸಿದ್ದರಾಮಣ್ಣ 24 ಜನ ಹಿಂದೂಗಳ ಹತ್ಯೆಗೆ ಕಣ್ಣೀರಡಲಿಲ್ಲ. ವೀರಶೈವ ಲಿಂಗಾಯತರನ್ನು ಒಡೆದಾಳಿದರು. ಅರ್ಕಾವತಿ, ಹಾಸಿಗೆ, ದಿಂಬು, ಮೊಟ್ಟೆ ಹಗರಣ ಸೇರಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಸಿದ್ದೇ ಸಿದ್ದರಾಮಯ್ಯನವರ ಸಾಧನೆ ಎಂದರು.

ರಾಜ್ಯದಲ್ಲಿ ಮೋದಿ ಮತ್ತು ಅಭಿವೃದ್ಧಿ ಮಂತ್ರವಿದೆ. ಪ್ರಜಾಧ್ವನಿ ಬಸ್ ಪಂಕ್ಚರ್ ಆಗಿದೆ. ಪಂಚರತ್ನ ಗಾಡಿ ಸೀಸ್ ಆಗಿದೆ ಎಂದು ಲೇವಡಿ ಮಾಡಿದರು. ಸಿದ್ದರಾಮಣ್ಣ, ಡಿಕೆಶಿಗೆ ತಾಕತ್ತಿದ್ದರೆ ನಮ್ಮ ಸಂಕಲ್ಪ ಯಾತ್ರೆ ನಿಲ್ಲಿಸಲಿ ಎಂದು ಸವಾಲು ಹಾಕಿದರು. ಪಂಚರತ್ನ ಗಾಡಿ ಸೀಸ್ ಆಗಿದೆ. ಸಿದ್ದರಾಮಣ್ಣ ಜನನಾಯಕರಾಗಿಲ್ಲ. ಜನಮಾನಸದಲ್ಲಿಸ್ಥಾನಪಡೆದಿಲ್ಲ. ಕಾಂಗ್ರೆಸ್ ವಿರುದ್ಧ ಅತಿ ಹೆಚ್ಚು ಟೀಕೆ ನಡೆಸುತ್ತಿದ್ದ ಸಿದ್ದರಾಮಯ್ಯ ಇವರು ಸೋನಿಯಾ ಗಾಂಧಿ ಅವರ ಕಾಲಿಗೆ ಬಿದ್ದು ಸಿಎಂ ಆಗಿದ್ದಾರೆ. ಯಡಿಯೂರಪ್ಪ ಹೋರಾಟದಿಂದ ಸಿಎಂ ಆಗಿದ್ದಾರೆ. ಕುಮಾರಸ್ವಾಮಿ ದಕ್ಷಿಣೆಯಿಂದ ಸಿಎಂ ಆಗಿದ್ದಾರೆ ಎಂದು ಕಟಕಿಯಾಡಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಬಸವಕಲ್ಯಾಣದಿಂದ ಚಾಲನೆ ಪಡೆದ ವಿಜಯಸಂಕಲ್ಪ ಯಾತ್ರೆ ಇಂದು ವಿಜಯೋತ್ಸವ ಯಾತ್ರೆಯಂತಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿಅಭಿವೃದ್ಧಿ ಮಹಾಪೂರವೇ ಹರಿದಿದೆ. ದೇಶದಲ್ಲಿಮೋದಿ ಅಗ್ರಗಣ್ಯನಾಯಕರಾಗಿದ್ದಾರೆ. ರಾಜ್ಯದಲ್ಲಿಎಲ್ಲಸೌಲಭ್ಯಗಳನ್ನು ನೀಡುವ ಕೆಲಸವಾಗುತ್ತಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ.ಬಜೆಟ್ನಲ್ಲಿನೀಡಿದೆ ಎಂದರು.
ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸಿಎಂ ಆಗಲು ಸೂಟು ಬೂಟು ಹಾಕಿಕೊಂಡು ರೆಡಿ ಇದಾರೆ. ಕೆಲವರು ಮಂತ್ರಿ ಸೂಟುಹಾಕಿದ್ದಾರೆ. ಇವರು ತಿರುಕನ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಮುಳುಗಿಹೋದ ಹಡಗು. ರಾಜ್ಯದಲ್ಲಿಕಾಂಗ್ರೆಸ್ ದುರ್ಬೀನು ಹಾಕಿ ಹುಡುಕುವಂತಿದೆ. ಐಸಿಯುನಲ್ಲಿರುವ ಕಾಂಗ್ರೆಸ್ ನೇರವಾಗಿ ಅಂತ್ಯಕ್ರಿಯೆಗೆ ಕರೆದೊಯ್ಯಲಾಗುವುದು. ಈ ಬಾರಿ ಬಿಜೆಪಿ 140ಕ್ಕೂ ಹೆಚ್ಚು ಸೀಟು ಬರಲಿವೆ ಎಂದರು.












Click it and Unblock the Notifications