ಡಿ.ಕೆ. ಶಿವಕುಮಾರ್ ಬಂಧನ : ಸಿದ್ದರಾಮಯ್ಯ ಹೇಳಿದ್ದೇನು?
Recommended Video
ಬೆಂಗಳೂರು, ಸೆಪ್ಟೆಂಬರ್ 04 : "ನಾಲ್ಕು ದಿನ ವಿಚಾರಣೆ ನಡೆಸಿ ಬಂಧಿಸುವುದು ಸರಿಯಲ್ಲ. ಡಿ. ಕೆ. ಶಿವಕುಮಾರ್ ಬಂಧನ ದ್ವೇಷದ ರಾಜಕಾರಣ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬಂಧಿಸಿದೆ. ಬೆಂಗಳೂರಿನಲ್ಲಿ ಬುಧವಾರ ಸಿದ್ದರಾಮಯ್ಯ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
"ಸಾಕ್ಷ್ಯಾಧಾರ ನಾಶ ಮಾಡಿದರೆ, ಕಣ್ಮರೆಯಾದರೆ ಅಂಥವರನ್ನು ದಸ್ತಗಿರಿ ಮಾಡಲಿ. ಆದರೆ, ನಾಲ್ಕು ದಿನ ವಿಚಾರಣೆ ಮಾಡಿ ದಸ್ತಗಿರಿ ಮಾಡುವುದು ಸರಿಯಲ್ಲ. ಇದು ದ್ವೇಷದ ರಾಜಕಾರಣ" ಎಂದು ಸಿದ್ದರಾಮಯ್ಯ ದೂರಿದರು.

"30-40 ವರ್ಷಗಳಿಂದ ಡಿ. ಕೆ. ಶಿವಕುಮಾರ್ ರಾಜಕೀಯದಲ್ಲಿದ್ದಾರೆ. ಹಬ್ಬದ ದಿನವೂ ಅವರನ್ನು ಬಿಡದೆ ವಿಚಾರಣೆ ಮಾಡಿದ್ದಾರೆ. ತಂದೆಯ ಕಾರ್ಯಕ್ರಮಕ್ಕೂ ಹೋಗಲು ಬಿಟ್ಟಿಲ್ಲ. ಮನುಷ್ಯತ್ವ ಇರುವವರು ಹೀಗೆ ಮಾಡೋಲ್ಲ" ಎಂದರು.
"ಚಿದಂಬರಂ ಮತ್ತು ಡಿ. ಕೆ. ಶಿವಕುಮಾರ್ ವಿಚಾರದಲ್ಲಿ ಹೀಗೆ ಮಾಡಿದ್ದಾರೆ. ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ನಾವು ಡಿ. ಕೆ. ಶಿವಕುಮಾರ್ ಜೊತೆ ಇದ್ದೇವೆ" ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಮಂಗಳವಾರ ರಾತ್ರಿ ನವದೆಹಲಿಯಲ್ಲಿ ಇಡಿ ಅಧಿಕಾರಿಗಳು ಡಿ. ಕೆ. ಶಿವಕುಮಾರ್ ಬಂಧಿಸಿದ್ದಾರೆ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಅವರು ಇದ್ದು, ಇಂದು ಇಡಿ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಿದೆ.
ಡಿ. ಕೆ. ಶಿವಕುಮಾರ್ ಬಂಧನ ಬಿಜೆಪಿಯ ದ್ವೇಷದ ರಾಜಕಾರಣ ಎಂದು ಕರ್ನಾಟಕದ ಹಲವು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಬುಧವಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕರೆ ನೀಡಿದೆ.












Click it and Unblock the Notifications