ಡಿಕೆ ರವಿ ಸಾವು : ಮಧ್ಯಂತರ ವರದಿ ಮಂಡಿಸಲು ಕೋರ್ಟ್ ತಡೆ
ಬೆಂಗಳೂರು, ಮಾ. 23 : ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಅಸಹಜ ಸಾವಿನ ಕುರಿತ ಸಿಐಡಿ ಮಧ್ಯಂತರ ವರದಿಯನ್ನು ಪ್ರಕಟಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಭಾನುವಾರ ಆದೇಶ ನೀಡಿದೆ. ಇದರಿಂದ ಸದನದಲ್ಲಿ ವರದಿ ಮಂಡಿಸುವ ಸರ್ಕಾರದ ಚಿಂತನೆಗೆ ಹಿನ್ನಡೆ ಉಂಟಾಗಿದೆ.
ಡಿಕೆ ರವಿ ಅವರ ಜೊತೆ ಸ್ನೇಹ ಹೊಂದಿದ್ದರು ಎನ್ನಲಾದ ಐಎಎಸ್ ಅಧಿಕಾರಿ ಅವರ ಪತಿ ಸಲ್ಲಿಸಿದ್ದ ಅರ್ಜಿಯನ್ನು ಭಾನುವಾರ ತಮ್ಮ ನಿವಾಸದಲ್ಲಿ ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು, ಮಧ್ಯಂತರ ವರದಿ ಮಂಡಿಸುವಂತಿಲ್ಲ ಎಂದು ಆದೇಶ ನೀಡಿದ್ದಾರೆ. [ಮೃತ ಡಿಕೆ ರವಿಯ ಖಾಸಗಿ ವಿಷಯಗಳು ಬಹಿರಂಗ]

ಪ್ರಕರಣದ ತನಿಖೆ ಕುರಿತು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡುವಂತಿಲ್ಲ ಎಂದು ಹೈಕೋರ್ಟ್ ನೀಡಿರುವ ತಡೆಯಾಜ್ಞೆಯಲ್ಲಿ ಸ್ಪಷ್ಟಪಡಿಸಿದ್ದು, ಸಿಐಡಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಗೃಹ ಇಲಾಖೆ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಈ ಕುರಿತು ನೋಟಿಸ್ ಜಾರಿಗೊಳಿಸಲಾಗಿದೆ. [ಡಿಕೆ ರವಿ ಪ್ರಕರಣ, ಸೋಮವಾರ ಮಹತ್ವದ ಸಭೆ]
ಸೋಮವಾರ ಪುನಃ ಅರ್ಜಿ ವಿಚಾರಣೆ : ಡಿಕೆ ರವಿ ಸಾವಿನ ಪ್ರಕರಣದಲ್ಲಿ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿರುವ ಕರ್ನಾಟಕ ಸರ್ಕಾರ ಸೋಮವಾರ ವಿಧಾನಸಭೆ ಕಲಾಪದಲ್ಲಿ ಸಿಐಡಿ ನೀಡುವ ಮಧ್ಯಂತರ ವರದಿಯನ್ನು ಮಂಡಿಸಲಿದೆ ಎಂಬ ಸುದ್ದಿ ಹಬ್ಬಿತ್ತು. ಆದ್ದರಿಂದ ಅರ್ಜಿದಾರರು ತುರ್ತಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. [ಡಿಕೆ ರವಿ ಪ್ರಕರಣ, ಸಿಎಂಗೆ ಬಿಜೆಪಿ ಡೆಡ್ ಲೈನ್]
ಭಾನುವಾರ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆಯಾಜ್ಞೆ ಸೋಮವಾರ ಮಧ್ಯಾಹ್ನ 2.30ರ ವರೆಗೆ ಅನ್ವಯವಾಗಲಿದೆ. ನಂತರ ನ್ಯಾಯಾಲಯದಲ್ಲಿ ಈ ಅರ್ಜಿಯ ವಿಚಾರಣೆ ಪುನಃ ನಡೆಯಲಿದೆ. ಮುಂದಿನ ವಿಚಾರಣೆಗೆ ಮುನ್ನ ಸರ್ಕಾರ ಸದನದಲ್ಲಿ ತನಿಖೆಯನ್ನು ಸಿಬಿಐಗೆ ವಹಿಸುವ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.












Click it and Unblock the Notifications