ಅತ್ಯಾಚಾರಿಗೆ ಗಲ್ಲು, ವೈದ್ಯರಿಗೆ ನಿಷೇಧ ಇತರ ಸುದ್ದಿಗಳು
ಮಡಿಕೇರಿ, ಅ.29 : ಕುರುಬರಿಗೂ ವೈಷ್ಣವ ದೀಕ್ಷೆ ನೀಡಲು ಸಿದ್ದ ಎನ್ನುವ ಉಡುಪಿ ಪೇಜಾವರ ಶ್ರೀಗಳ ಹೇಳಿಕೆಯನ್ನು ಮೈಸೂರು ಸಂಸದ ಎಚ್.ವಿಶ್ವನಾಥ್ ಖಂಡಿಸಿದ್ದಾರೆ. ಸ್ವಾಮೀಜಿಗಳಿಗೆ ನಿಜವಾದ ಸಾಮಾಜಿಕ ಕಳಕಳಿ ಇದ್ದರೆ, ಹಿಂದುಳಿದ ವರ್ಗದವರಿಗೆ ಶಿಕ್ಷಣ ನೀಡಲಿ, ದೀಕ್ಷೆ ನೀಡುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ಹೇಳಿದ್ದಾರೆ.
ಮಡಿಕೇರಿಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್, ಹಿಂದುಳಿದ ವರ್ಗಗಳ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಗೆ ಕಾಳಜಿ ಇದ್ದರೆ, ದೀಕ್ಷೆ ಕೊಡುವುದು ಬೇಡ, ಶಿಕ್ಷಣ ನೀಡಿ ಸ್ವಾವಲಂಬಿ ಬದುಕಿಗೆ ಸಹಕಾರ ನೀಡಲಿ ಎಂದು ಒತ್ತಾಯಿಸಿದರು. ಸಮಾಜದಲ್ಲಿ ಸಮಾನತೆ ತರಬೇಕಾದ ಮಠಗಳಲ್ಲೇ ಇಂದಿನ ದಿನಗಳಲ್ಲಿ ಅಸಮಾನತೆ ತಾಂಡವವಾಡುತ್ತಿದೆ ಎಂದು ವಿಶ್ವನಾಥ್ ತಿಳಿಸಿದರು.
ಹಿಂದುಳಿದ ವರ್ಗದವರಿಗೆ ಪೇಜಾವರ ಶ್ರೀಗಳು ದೀಕ್ಷೆ ಕೊಡುವುದರಿಂದ ಯಾವುದೇ ಉಪಯೋಗವಿಲ್ಲ. ಹಿಂದುಳಿದ ವರ್ಗಗಳಿಗೆ ಶಿಕ್ಷಣ ಒದಗಿಸಿದರೆ ಅವರು ಸ್ವಾವಲಂಬಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಆಗ ಸಮಾಜದಲ್ಲಿನ ಅಸಮಾನತೆ ದೂರವಾಗುತ್ತದೆ ಎಂದು ವಿಶ್ವನಾಥ್ ಅಭಿಪ್ರಾಪಟ್ಟರು.
ಇತ್ತೀಚೆಗೆ ಕುರುಬ ಜನಾಂಗದವರಿಗೆ ವೈಷ್ಣವ ದೀಕ್ಷೆ ಕೊಡಲು ಸಿದ್ಧ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದರು. ಕಾಗಿನೆಲೆ ಮಠದ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಾರ್ವಜನಿಕ ವಲಯದಲ್ಲಿ ಈ ವಿವಾದ ತಣ್ಣಗಾಗುವ ಮುನ್ನವೇ ಸಂಸದ ವಿಶ್ವನಾಥ್ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಅತ್ಯಾಚಾರಿಗೆ ಗಲ್ಲು ಶಿಕ್ಷೆ
ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ಬೀದರ್ ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯನ್ನು ಮಹಮದ್ ಸುಲ್ತಾನ್ ಎಂದು ಗುರುತಿನಸಲಾಗಿದೆ. 2011ರ ಆಗಸ್ಟ್ 11ರಂದು ಸುಲ್ತಾನ್ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದರು. ಈ ಆರೋಪ ಸಾಬೀತಾಗಿದ್ದು, ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ವೈದ್ಯರಿಗೆ ನಿಷೇಧ
ಓವರ್ ಡೋಸ್ ಅರವಳಿಕೆ ನೀಡಿ ಮಗುವಿನ ಸಾವಿಗೆ ಕಾರಣವಾದ ವೈದ್ಯರೊಬ್ಬರಿಗೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ 1 ವರ್ಷಗಳ ಕಾಲ ನಿಷೇಧ ಹೇರಿದೆ. ಫೆ.6ರಂದು ಡಾ.ರಾಘವೇಂದ್ರ ಎಚ್ಎಸ್ಆರ್ ಲೇಔಟ್ ನಿವಾಸಿಗಳಾದ ಲೋಕೇಶ್ ಮತ್ತು ಆಶಾ ದಂಪತಿಗಳ ಮಗುವಿಗೆ ಹೆಚ್ಚಿನ ಅರವಳಿಕೆ ನೀಡಿದ್ದರು. ಇದರಿಂದಾಗಿ ಮಗು ಸಾವನ್ನಪ್ಪಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕದ ಮೆಡಿಕಲ್ ಕೌನ್ಸಿಲ್ ಒಂದು ವರ್ಷದ ನಿಷೇಧ ಹೇರಿ ಆದೇಶ ಹೊರಡಿಸಿದೆ.

ದೀಕ್ಷೆ ಬೇಡ ಶಿಕ್ಷಣ ಕೊಡಿ
ಕುರುಬರಿಗೂ ವೈಷ್ಣವ ದೀಕ್ಷೆ ನೀಡಲು ಸಿದ್ದ ಎನ್ನುವ ಉಡುಪಿ ಪೇಜಾವರ ಶ್ರೀಗಳ ಹೇಳಿಕೆಯನ್ನು ಮೈಸೂರು ಸಂಸದ ಎಚ್.ವಿಶ್ವನಾಥ್ ಖಂಡಿಸಿದ್ದಾರೆ. ಸ್ವಾಮೀಜಿಗಳಿಗೆ ನಿಜವಾದ ಸಾಮಾಜಿಕ ಕಳಕಳಿ ಇದ್ದರೆ, ಹಿಂದುಳಿದ ವರ್ಗದವರಿಗೆ ಶಿಕ್ಷಣ ನೀಡಲಿ, ದೀಕ್ಷೆ ನೀಡುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ಹೇಳಿದ್ದಾರೆ. ಮಡಿಕೇರಿಯಲ್ಲಿ ಮಂಗಳವಾರ ಮಾತನಾಡಿದ ಎಚ್.ವಿಶ್ವನಾಥ್, ಹಿಂದುಳಿದ ವರ್ಗಗಳ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಗೆ ಕಾಳಜಿ ಇದ್ದರೆ, ದೀಕ್ಷೆ ಕೊಡುವುದು ಬೇಡ, ಶಿಕ್ಷಣ ನೀಡಿ ಸ್ವಾವಲಂಬಿ ಬದುಕಿಗೆ ಸಹಕಾರ ನೀಡಲಿ ಎಂದು ಒತ್ತಾಯಿಸಿದರು.

ಹಿಂಡಲಗಾ ಜೈಲಿನಲ್ಲಿ ಕೈದಿಗಳ ಪ್ರತಿಭಟನೆ
ಸನ್ನಡತೆ ಆಧಾರದಲ್ಲಿ ಖೈದಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೆಳಗಾವಿ ಹೊರವಲಯದಲ್ಲಿರುವ ಹಿಂಡಲಗಾ ಜೈಲಿನಲ್ಲಿ ಮಂಗಳವಾರ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗ್ಗೆ ಉಪಹಾರವನ್ನು ಸೇವಿನೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ. ಸುಮಾರು 600 ಕ್ಕೂ ಹೆಚ್ಚು ಖೈದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಸರ್ಕಾರ ಸನ್ನಡೆತೆ ಹೊಂದಿರುವ ಕೈದಿಗಳ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದ್ದಾರೆ.

ಮಕ್ಕಳ ಸಮೀಕ್ಷೆ
ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 6ರಿಂದ 14 ವಯೋಮಾನದ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಆದ್ದರಿಂದ ತುಮಕೂರು ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ತಯಾರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಜನವಸತಿ ಪ್ರದೇಶಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಮಕ್ಕಳ ಸಮೀಕ್ಷೆ ನಡೆಸಲು ಯೋಜನೆ ರೂಪಿಸಲಾಗಿದೆ. ಮಕ್ಕಳ ಪೋಷಕರು, ಸಮುದಾಯ, ಸ್ಥಳೀಯ ಸರ್ಕಾರೇತರ ಸಂಸ್ಥೆಗಳು, ಯುವಕ ಸಂಘಗಳು, ಮಹಿಳಾ ಮಂಡಳಿಗಳು, ಸ್ತ್ರೀಶಕ್ತಿ ಸಂಘಗಳು ಸಮೀಕ್ಷೆಗೆ ಸಹಕರಿಸಬೇಕು ಎಂದು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ನಕಲಿ ಪೊಲೀಸರ ಸೆರೆ
ಹುಣಸೂರು ರಾಜ್ಯ ಹೆದ್ದಾರಿಯಲ್ಲಿ ಪೊಲೀಸ್ ವೇಷ ಧರಿಸಿ, ವಾಹನ ಸವಾರರನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ನಕಲಿ ಪೊಲೀಸರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅರಕಲಗೂಡಿನ ಬಂಡೆಪಾಳ್ಯದ ನಿವಾಸಿ ಬಿ.ಎನ್.ಶಿವಕುಮಾರ್ ಹಾಗೂ ಮೈಸೂರಿನ ನಿವಾಸಿ ದಯಾನಂದ ಸಾಗರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮೈಸೂರು-ಬಂಟ್ವಾಳ ರಾಜ್ಯ ಹೆದ್ದಾರಿಯ ಬಿಳಿಕೆರೆ ಸಮೀಪ ಪೊಲೀಸ್ ಸಮವಸ್ತ್ರ ಧರಿಸಿ ಮರಳು ಲಾರಿ, ದ್ವಿಚಕ್ರ ಹಾಗೂ ಮತ್ತಿತರ ವಾಹನ ಸವಾರರನ್ನು ತಡೆದು ಹಣ ವಸೂಲಿ ಮಾಡುತ್ತಿದ್ದರು. ಸೋಮವಾರ ರಾತ್ರಿ ಅಸಲಿ ಪೊಲೀಸರ ಬಳಿಯೇ ತಮ್ಮ ಕೈಚಳಕ ತೋರಲು ಹೋಗಿ ಸಿಕ್ಕಿಹಾಕಿಕೊಂಡಿದ್ದಾರೆ.

ಕಾಡಾನೆಗಳ ಹಾವಳಿ, ಬೆಳೆ ನಾಶ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು ಸೋಮವಾರ ರಾತ್ರಿ 6 ಆನೆಗಳ ಗುಂಪು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಯನ್ನು ನಾಶಪಡಿಸಿವೆ. ಸಕಲೇಶಪುರದ ರಾಯಲುಕೊಪ್ಪಲು ಗ್ರಾಮದಲ್ಲಿ ಕಾಡಾನೆಗಳು ದಾಂಧಲೆ ನಡೆಸುತ್ತಿದ್ದು ಕಾಫಿ, ಬಾಳೆ, ರಾಗಿ ಸೇರಿದಂತೆ ಇತರೆ ತರಕಾರಿ ಬೆಳೆಗಳನ್ನು ನಾಶಪಡಿಸಿವೆ. ಆನೆಗಳು ಗ್ರಾಮದ ಪಕ್ಕದ ಕಾಡಿನಲ್ಲಿ ವಾಸ್ತವ್ಯ ಹೂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಆನೆಗಳನ್ನು ಕಾಡಿಗಟ್ಟಲು ಕಾರ್ಯಾಚರಣೆ ಕೈಗೊಂಡಿದ್ದಾರೆ

ನಮ್ಮ ಜನರು ಏಕೆ ವೋಟು ಕೊಟ್ಟರೋ ತಿಳಿಯದು
ಮಂಡ್ಯದ ಜನರು ಸಿನಿಮಾ ಮಂದಿಗೆ ಏಕೆ ಮತ ನೀಡಿ ಗೆಲ್ಲಿಸಿದರೋ ತಿಳಿಯದು ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸಂಸದೆ ರಮ್ಯಾ ಪುಕ್ಕಟೆ ಹೇಳಿಕೆ ನೀಡುವಲ್ಲಿ ನಿಸ್ಸೀಮರಾಗಿದ್ದಾರೆ. ಇದುವರೆಗೆ ಜನರಿಂದ ಪಡೆದಿರುವ ಎಷ್ಟು ಅರ್ಜಿಗಳಿಗೆ ಯಾವ ರೀತಿ ಪರಿಹಾರ ದೊರಕಿಸಿಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ನನ್ನ ಮಂಡ್ಯದ ಜನ ಸಿನಿಮಾ ಮಂದಿಯನ್ನು ಯಾಕೆ ಆಯ್ಕೆ ಮಾಡಿದರೂ ಗೊತ್ತಿಲ್ಲ. ನಮ್ಮ ಪಕ್ಷದ ಶಾಸಕರು, ಸಂಸದರು ಜಿಲ್ಲೆಯಲ್ಲಿ ಆಯ್ಕೆಯಾದ ಸಂದರ್ಭದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು. ಇದೇ ಸಂದರ್ಭದಲ್ಲಿ ಹೊಳಲು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ ಸಿದ್ಧರಾಜು ಕುಟುಂಬಕ್ಕೆ ಕುಮಾರಸ್ವಾಮಿ ಅವರು 25 ಸಾವಿರ ರೂ. ಪರಿಹಾರ ವಿತರಣೆ ಮಾಡಿದರು.

ಮೇಯರ್ ಹೊಗಳಿದ ಲೋಕಾಯುಕ್ತರು
ಕೆ.ಆರ್.ಮಾರುಕಟ್ಟೆ ಸ್ವಚ್ಛತೆ ಹಾಗೂ ವಾಹನ ನಿಲುಗಡೆ ಕುರಿತಂತೆ ಮೇಯರ್ ಕಟ್ಟೆ ಸತ್ಯನಾರಾಯಣ ಅವರು ಕೈಗೊಂಡಿರುವ ದಿಟ್ಟ ಕ್ರಮಗಳಿಗೆ ಲೋಕಾಯುಕ್ತ ಭಾಸ್ಕರರಾವ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಲೋಕಾಯುಕ್ತರನ್ನು ಭೇಟಿಯಾದ ಸಂದರ್ಭದಲ್ಲಿ ತಮ್ಮ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದಾರೆ ಎಂದು ಮೇಯರ್ ಮಂಗಳವಾರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಹೇಳಿದರು. ಅನಧಿಕೃತ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಎಚ್ಚರ ವಹಿಸುವಂತೆ ಪಾಲಿಕೆಯ ಎಲ್ಲಾ ಸದಸ್ಯರಿಗೆ ಸೂಚಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ಕಟ್ಟೆ ಸತ್ಯನಾರಾಯಣ ಹೇಳಿದ್ದಾರೆ.

ಕರಡಿ ದಾಳಿಯಿಂದ ಸಾವು 5 ಲಕ್ಷ ಪರಿಹಾರ
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಕಲ್ಕೆರೆ ಗ್ರಾಮದಲ್ಲಿ ಕರಡಿ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ತಿಮ್ಮಕ್ಕ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಶಾಸಕ ವೈ.ಎಸ್.ವಿ.ದತ್ತಾ ಹೇಳಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ನಡೆದ ನಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮೊದಲ ಕಂತಾಗಿ 2 ಲಕ್ಷ ರೂ. ಚೆಕ್ ನೀಡಿದ್ದಾರೆ. ಶೀಘ್ರದಲ್ಲೇ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು. ತಾಲೂಕಿನಲ್ಲಿ ಇದುವರೆಗೂ ಸುಮಾರು 30 ಜನ ಕರಡಿ ದಾಳಿಗೆ ತುತ್ತಾಗಿ ಅಂಗವಿಕಲರಾಗಿದ್ದಾರೆ. ಕರಡಿ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ದತ್ತಾ ತಿಳಿಸಿದರು.












Click it and Unblock the Notifications