ಜ.29ರಂದು ರಾಹುಲ್ ಗಾಂಧಿಗೆ ಗುಲ್ಬರ್ಗದಲ್ಲಿ ಸನ್ಮಾನ
ಗುಲ್ಬರ್ಗ, ಜ.6 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜ.29ರಂದು ಗುಲ್ಬರ್ಗಕ್ಕೆ ಭೇಟಿ ನೀಡಲಿದ್ದಾರೆ. ಅಂದು ಜಿಲ್ಲಾ ಕಾಂಗ್ರೆಸ್ ಅಳಂದಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರಿಗೆ ಸನ್ಮಾನ ಮಾಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣ್ಣ ಗೌಡ ಪಾಟೀಲ್ ಸಂಕನೂರ ಹೇಳಿದ್ದಾರೆ.
ಅಳಂದದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಭಾಗಣ್ಣ ಗೌಡ ಪಾಟೀಲ್ ಸಂಕನೂರ, ಜ.29ರಂದು ರಾಹುಲ್ ಗಾಂಧಿ ಗುಲ್ಬರ್ಗಕ್ಕೆ ಆಗಮಿಸಲಿದ್ದಾರೆ. ಜಿಲ್ಲೆಗೆ ಆಗಮಿಸಿದ ಅವರ ಅಳಂದದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದು, ಅಂದು ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಹೈದರಾಬಾದ್ ಕರ್ನಾಟಕ ಪ್ರದೇಶದಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ 371ನೇ ಜೆ ಕಲಂ ತಿದ್ದುಪಡಿ ತರಲು ಶ್ರಮಿಸಿದ ಅವರಿಗೆ ಸನ್ಮಾನ ಮಾಡಲಾಗುವುದು ಎಂದು ಪಾಟೀಲ್ ಹೇಳಿದರು. ಜನವರಿ ಅಂತ್ಯ ಅಥವ ಫೆಬ್ರವರಿ ಮೊದಲನೆ ವಾರದಲ್ಲಿ ಸೋನಿಯಾ ಗಾಂಧಿ ಸಹ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಗುಲ್ಬರ್ಗದಲ್ಲಿ ನಿರ್ಮಾಣವಾಗುತ್ತಿರುವ ಇಎಸ್ಐ ಆಸ್ಪತ್ರೆ ಕಾಮಗಾರಿ ಜನವರಿ ಅಂತ್ಯ ಅಥವ ಫೆಬ್ರವರಿಯಲ್ಲಿ ನಡೆಯಲಿದೆ. ಆಸ್ಪತ್ರೆಗೆ ಉದ್ಘಾಟನೆಗಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಮಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಆದರೆ, ಸೋನಿಯಾ ಗಾಂಧಿ ಅವರ ಜಿಲ್ಲಾ ಭೇಟಿಯ ದಿನಾಂಕ ನಿಗದಿಯಾಗಿಲ್ಲ ಎಂದು ಅವರು ತಿಳಿಸಿದರು. [ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು]

ಜ.29ರಂದು ಗುಲ್ಬರ್ಗಕ್ಕೆ ರಾಹುಲ್ ಗಾಂಧಿ
ಹೈದರಾಬಾದ್ ಕರ್ನಾಟಕ ಪ್ರದೇಶದಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ 371ನೇ ಜೆ ಕಲಂ ತಿದ್ದುಪಡಿ ತರಲು ಶ್ರಮಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಗುಲ್ಬರ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಸನ್ಮಾನ ಸ್ವೀಕರಿಸಲು ಜ.29ರಂದು ರಾಹುಲ್ ಗಾಂಧಿ ಜಿಲ್ಲೆಗೆ ಆಗಮಿಸಲಿದ್ದಾರೆ.

ಕೃಷ್ಣಾ ನ್ಯಾಯಾಧಿಕರಣದ ಬಗ್ಗೆ ಸಭೆ
ಕೃಷ್ಣಾ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಕಾನೂನು ತಜ್ಞರ ಜತೆಗೆ ಜ.9ರಂದು ದೆಹಲಿಯಲ್ಲಿ ಸಭೆ ಏರ್ಪಡಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಜ.9ರಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾನೂನು ತಜ್ಞರ ತಂಡದ ಮುಖ್ಯಸ್ಥ ನಾರಿಮನ್, ಪ್ರಧಾನ ಸಲಹಾಗಾರ ಡಿ.ಎನ್. ದೇಸಾಯಿ, ಅಡ್ವೋಕೇಟ್ ಜನರಲ್, ತಾಂತ್ರಿಕ ತಜ್ಞರು, ನೀರಾವರಿ ತಜ್ಞರ ಜತೆ ನವದೆಹಲಿಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಪಾಟೀಲ್ ಹೇಳಿದರು.

ಬೀದರ್ ಉತ್ಸವ
ಬೀದರ್ ಉತ್ಸವಕ್ಕೆ ಸಿದ್ಧತೆ ಆರಂಭವಾಗಿದ್ದು, ಫೆಬ್ರವರಿ 1ರಿಂದ 3ರವರೆಗೆ ಮೂರು ದಿನಗಳ ಕಾಲ ಉತ್ಸವ ನಡೆಯಲಿದೆ. ಉತ್ಸವಕ್ಕೆ ಸಂಬಂಧಿಸಿದಂತೆ ವಿವಿಧ ಸಮಿತಿಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಬೀದರ್ ಕೋಟೆಯ ಆವರಣದಲ್ಲಿ ನಡೆಯುವ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಆದ್ಯತೆ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈಗಾಗಲೇ ಅವರು ಉತ್ಸವ ಪೂರ್ವಭಾವಿ ತಯಾರಿ ಸಭೆ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಹೊರಗೆ ಧಂ ಹೊಡೆಯಂಗಿಲ್ಲ
ದಾವಣಗೆರೆ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಹೋಟಲ್ನಲ್ಲಿ ಟೀ ಕುಡಿದು, ಸಿಗರೇಟ್ ಕೊಂಡು ಬೆಂಕಿ ಕಡ್ಡಿ ಗೀರು ವಂತಿಲ್ಲ. ಯಾರಾದ್ರೂ ನೋಡಬಹುದೆಂದು ಎಂದು ಕದ್ದುಮುಚ್ಚಿ ಸೇದುವ ಸ್ಥಿತಿ ಬಂದಿದೆ. ಧೂಮಪಾನ ನಿಷೇಧ ಕಾಯಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವ ಜಿಲ್ಲಾಡಳಿತ ಸಾರ್ವಜನಿಕ ಸ್ಥಳಗಳಾದ ರೈಲ್ವೆ, ಬಸ್ ನಿಲ್ದಾಣ, ರಸ್ತೆ, ಪಾರ್ಕ್, ಹೋಟೆಲ್ ಇತರೆಡೆ ಬೀಡಿ, ಸಿಗರೇಟ್ ಸೇವನೆ ನಿಷೇಧಿಸಿದೆ. ಬೀಡಿ, ಸಿಗರೇಟ್ ಮಾರಾಟ ಮಾಡುವ ಅಂಗಡಿಗಳ ಮುಂದೆ ಕಡ್ಡಾಯವಾಗಿ ಧೂಮಪಾನ ನಿಷೇಧದ ಫಲಕ ಅಳವಡಿಸಿದೆ. ಫಲಕ ಹಾಕರ ಅಂಗಡಿ ಮಾಲೀಕರಿಗೆ ಮೊದಲ ಬಾರಿ 200 ರೂ., ಎರಡನೇ ಬಾರಿಗೆ 5000 ರೂ., ಮೂರನೇ ಬಾರಿಯೂ ಫಲಕ ಅಳವಡಿಸದಿದ್ದರೆ 10 ಸಾವಿರ ರೂ. ದಂಡ ಹಾಗೂ ಎರಡು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

ಮುಂಬಡ್ತಿ ತಡೆಹಿಡಿಯಲು ಆಗ್ರಹ
ಸಂವಿಧಾನದ 371(ಜೆ) ವಿಧಿ ಪರಿಗಣಿಸದೇ ವಾಣಿಜ್ಯ ತೆರಿಗೆ ಅಧಿಕಾರಿಗಳ ಹುದ್ದೆಗಳಿಗೆ ನೀಡಿರುವ ಮುಂಬಡ್ತಿ ತಡೆಹಿಡಿಯಬೇಕು ಎಂದು ಗುಲ್ಬರ್ಗದಲ್ಲಿ ನಡೆದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಸಭೆ ಒತ್ತಾಯಿಸಿದೆ. 371(ಜೆ) ವಿಧಿ ಪರಿಗಣಿಸದೇ 2013 ಡಿ.30ರಂದು ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಯಿಂದ ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗೆ ನಿಯಮ-32ರ ಅಡಿಯಲ್ಲಿ ಬಡ್ತಿ ನೀಡಲಾಗಿದೆ. ಪ್ರಸ್ತುತ ಹೈಕ ಪ್ರಾಂತ್ಯದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳ 47 ಹುದ್ದೆಗಳಿದ್ದು, ಅವುಗಳಲ್ಲಿ ಹೈಕ ಪ್ರಾಂತ್ಯದ ನೌಕರರಿಗೆ 35 ಹುದ್ದೆಗಳು ಸ್ಥಳೀಯ ನೌಕರರಿಗೆ ಮೀಸಲಾತಿ ಕಲ್ಪಿಸಬೇಕಾಗಿತ್ತು. ಆದರೆ, ಈ ಯಾವ ನಿಯಮಾವಳಿಗಳನ್ನು ಪಾಲಿಸದೆ ಬಡ್ತಿ ನೀಡಲಾಗಿದೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಯಡಿಯೂರಪ್ಪ ವಿರುದ್ಧ 2 ದೂರು ದಾಖಲು
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತೆ ಕೋರ್ಟ್ ಮೆಟ್ಟಿಲೇರಬೇಕಾಗಿದೆ. ಸೋಮವಾರ ಶಿವಮೊಗ್ಗ ಲೋಕಾಯುಕ್ತ ಕೋರ್ಟ್ ನಲ್ಲಿ ಯಡಿಯೂರಪ್ಪ ವಿರುದ್ದ 2 ಖಾಸಗಿ ದೂರು ದಾಖಲಾಗಿವೆ. ಭದ್ರಾವತಿಯ ಹುಣಸಘಟ್ಟ ಬಳಿಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೈಗಾರಿಕಾ ಉದ್ದೇಶಕ್ಕೆ 69 ಎಕರೆ ಜಮೀನು ಖರೀದಿಗೆ ಅನುಮತಿ ನೀಡಿದ ಆರೋಪದಡಿ ವಕೀಲ ಬಿ. ವಿನೋದ್ ದೂರು ದಾಖಲಿಸಿದ್ದಾರೆ. ಅರಣ್ಯಾಧಿಕಾರಿ ನಾಗರಾಜ್, ಐಎಎಸ್ ಅಧಿಕಾರಿ ಮೀರಾ ಸಕ್ಸೇನ ವಿರುದ್ದವೂ ದೂರು ದಾಖಲಿಸಲಾಗಿದೆ.











Click it and Unblock the Notifications