ಶಾಲೆಗಳಲ್ಲಿ ಸಮಸ್ಯೆ ಇದೆಯೇ? ಸಚಿವರಿಗೆ ಪತ್ರ ಕಳಿಸಿ!
ಬೆಂಗಳೂರು, ನ. 22 : ಶಾಲೆಗಳಲ್ಲಿ ಕುಡಿಯುವ ನೀರು, ಆಟದ ಮೈದಾನ, ಶೌಚಾಲಯ, ಗ್ರಂಥಾಲಯ ಸೇರಿದಂತೆ ಏನೇ ಸಮಸ್ಯೆಗಳಿದ್ದರೂ ಪತ್ರ ಬರೆಯಿರಿ, ನಾನು ಸಮಸ್ಯೆ ಬಗೆಹರಿಸುತ್ತೇನೆ ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಶಾಲಾ ಮಕ್ಕಳಿಗೆ ಭರವಸೆ ನೀಡಿದ್ದಾರೆ. ಮುಂದಿನ ವರ್ಷದಿಂದ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆಯಲ್ಲಿ ಗೊಂದಲಗಳಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂಸತ್ ಕಲಾಪದಲ್ಲಿ ಭಾಗವಹಿಸಿದ್ದ ಅವರು, ನಿಮ್ಮ ಶಾಲೆಯಲ್ಲಿ ಕುಡಿಯುವ ನೀರು, ಆಟದ ಮೈದಾನ, ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ, ನನಗೆ ನೇರವಾಗಿ ಪತ್ರ ಬರೆಯಿರಿ. ನಾನು ನಿಮ್ಮ ಪತ್ರಕ್ಕೆ ಉತ್ತರ ನೀಡುವುದು ಮಾತ್ರವಲ್ಲ ಸಮಸ್ಯೆ ಪರಿಹಾರ ಮಾಡಲು ಪ್ರಯತ್ನ ನಡೆಸುತ್ತೇನೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
ಮುಂದಿನ ವರ್ಷದಿಂದ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಶಾಲೆ ಆರಂಭವಾಗುವಾಗ ಉಂಟಾಗುವ ಗೊಂದಲಗಳು ಬಗೆಹರಿಸುತ್ತೇನೆ. ಜನವರಿಯಲ್ಲಿಯೇ ಪಠ್ಯಪುಸ್ತಕ ಮುದ್ರಣ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಮೇ 15ರೊಳಗೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಪಠ್ಯ ಪುಸ್ತಕ, ಸಮವಸ್ತ್ರ ಎಲ್ಲವನ್ನೂ ಪೂರೈಕೆ ಮಾಡುತ್ತೇವೆ ಎಂದು ಸಚಿವರ ಮಕ್ಕಳಿಗೆ ಭರವಸೆ ನೀಡಿದರು.
ಸಂಸತ್ ಕಲಾಪದಲ್ಲಿ ಭಾಗವಹಿಸಿದ್ದ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ವಿರುದ್ಧ ಮಕ್ಕಳೇ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಬೇಕು. ಇಂತಹ ಚಟುವಟಿಕೆ ನಡೆಯಲು ಯಾರು ಅವಕಾಶ ನೀಡಬಾರದು ಎಂದು ಕರೆ ನೀಡಿದರು. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಸಮಸ್ಯೆ ಇದೆಯೇ ಪತ್ರ ಬರೆಯಿರಿ
ಶಾಲೆಗಳಲ್ಲಿ ಕುಡಿಯುವ ನೀರು, ಆಟದ ಮೈದಾನ, ಶೌಚಾಲಯ, ಗ್ರಂಥಾಲಯ ಸೇರಿದಂತೆ ಏನೇ ಸಮಸ್ಯೆಗಳಿದ್ದರೂ ಪತ್ರ ಬರೆಯಿರಿ, ನಾನು ಪತ್ರಕ್ಕೆ ಉತ್ತರ ಬರೆಯುವುದು ಮಾತ್ರವಲ್ಲ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಶಾಲಾ ಮಕ್ಕಳಿಗೆ ಭರವಸೆ ನೀಡಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂಸತ್ ಕಲಾಪದಲ್ಲಿ ಭಾಗವಹಿಸಿದ್ದ ಅವರು, ನಿಮ್ಮ ಶಾಲೆಯ ಸಮಸ್ಯೆಗಳ ಬಗ್ಗೆ ಪತ್ರ ಬರೆಯಿರಿ ಎಂದು ಕರೆ ನೀಡಿದರು. ಮುಂದಿನ ವರ್ಷದಿಂದ ಪುಸ್ತಕ ಮತ್ತು ಸಮವಸ್ತ್ರ ವ್ಯವಸ್ಥೆಯಲ್ಲಿ ಗೊಂದಲಗಳಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ಟಿಬಿ ಡ್ಯಾಂ ಮೇಲೆ ಗಣ್ಯರ ಸಂಚಾರ ಬಂದ್
ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾಶಯ ಅಣೆಕಟ್ಟೆ ಮೇಲೆ (ಕ್ರಸ್ಟ್ಗೇಟ್ಗಳಿಗೆ ನಿರ್ಮಿಸಿದ ಸ್ಪೀಲ್ವೇ) ಸಚಿವರು, ಶಾಸಕರು ಸೇರಿದಂತೆ ಗಣ್ಯರ ವಾಹನಗಳ ಪ್ರವೇಶಕ್ಕೂ ನಿರ್ಭಂದ ಹೇರಲಾಗಿದೆ. ಇಷ್ಟು ದಿನ ಅಣೆಕಟ್ಟಿನ ಮೇಲೆ ಸಾರ್ವಜನಿಕ ಸಂಚಾರಕ್ಕೂ ನಿರ್ಭಂಧ ವಿಧಿಸಲಾಗಿತ್ತು. ಸಚಿವರು, ಗಣ್ಯರು, ಅಧಿಕಾರಿಗಳ ಶಿಫಾರಸಿನ ಮೇರೆಗೆ ತುಂಗಭದ್ರಾ ಬೋರ್ಡ್ನಿಂದ ಪಾಸ್ ಪಡೆದವರು ಇಲ್ಲಿ ಸಂಚರಿಬಹಹುದಿತ್ತು. ಇನ್ನು ಮುಂದೆ ಎಲ್ಲಾ ರೀತಿಯ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗುತ್ತದೆ.

ಕೊಳ್ಳೇಗಾಲ-ಚಾಮರಾಜನರ ರೈಲು ಶೀಘ್ರ
ಫೆಬ್ರವರಿಯಲ್ಲಿ ಕನಕಪುರ ಮಾರ್ಗವಾಗಿ ಕೊಳ್ಳೇಗಾಲ- ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ನೂತನ ರೇಲ್ವೆ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ ಹೇಳಿದ್ದಾರೆ. ಮಾರ್ಗಗಳ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜು ಖರ್ಗೆ ರೈಲ್ವೆ ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ರಸ್ತೆ ನಿಧಿ ಯೋಜನೆಯಡಿ ರಾಜ್ಯ ಸರ್ಕಾರಕ್ಕೆ ಒಂದು ಸಾವಿರ ಕೋಟಿ ಅನುದಾನ ನೀಡಿದೆ. ಇದರಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ 300 ಕೋಟಿ ಬಳಕೆ ಮಾಡಲಾಗುವುದು ಎಂದರು.

ಡಿ, 1ರಂದು ಸರ್ವಧರ್ಮ ಸಮ್ಮೇಳನ
ಬೆಳ್ತಂಗಡಿಯಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ನಡೆಯುವ ಸರ್ವಧರ್ಮ ಸಮ್ಮೇಳನದ 81ನೇ ಅಧಿವೇಶನವು ಡಿ.1ರಂದು ನಡೆಯಲಿದ್ದು, ಕಾನೂನು ಸಚಿವ ಟಿ.ಬಿ. ಜಯಚಂದ್ರ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಳೆಹೊಸೂರು ಶ್ರೀ ದಿಂಗಾಲೇಶ್ವರ ಮಠದ ಶ್ರೀ ಮ.ನಿ.ಪ್ರ. ಶ್ರೀ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿ ಸಮ್ಮೇಳದ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಧರ್ಮಗಳ ಬಗ್ಗೆ ಮೈಸೂರಿನ ನಿವೃತ್ತ ಪ್ರಾಧ್ಯಾಪಕಿ ಡಾ. ಸರಸ್ವತಿ ವಿಜಯಕುಮಾರ್ ಮಾತನಾಡಲಿದ್ದಾರೆ.

ಎರಡು ದಿನದಲ್ಲಿ ಒಂಟಿ ಸಲಗ ಸೆರೆ
ಹಾನಸ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಇಬ್ಬರ ಪ್ರಾಣ ತೆಗೆದಿರುವ ಒಂಟಿ ಸಲಗವನ್ನು ಗುರುತಿಸಲಾಗಿದ್ದು, ಮಾಗಡಿಹಳ್ಳಿ ಗ್ರಾಮದಿಮದ ಕೇವಲ 2 ಕಿ.ಮೀ ದೂರದಲ್ಲಿ ಸಲಗ ಬೀಡು ಬಿಟ್ಟಿದೆ. ಅದರ ಚಲನವಲನಗಳ ಮೇಲೆ ನಿಗಾವಹಿಸಲಾಗಿದ್ದು ಎರಡು ದಿನದಲ್ಲಿ ಸಲಗವನ್ನು ಸೆರೆಹಿಡಿಯಲಾಗುವುದು ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಲಕ್ಷ್ಮಣ್ ಶುಕ್ರವಾರ ತಿಳಿಸಿದ್ದಾರೆ. ಹಾಸನ ಮತ್ತು ಕೊಡಗು ಜಿಲ್ಲೆ ಗಡಿಭಾಗದ ಮಾಗಡಿಹಳ್ಳಿ ಬಳಿ, ಕಾಡಾನೆಗಳನ್ನು ಹಿಡಿಯಲು ಕ್ಯಾಂಪ್ ಆರಂಭಿಸಲಾಗಿದೆ. ಎಲ್ಲಾ ಆನೆಗಳನ್ನು ಒಂದೇ ಸಲಕ್ಕೆ ಹಿಡಿಯಲು ಸಾಧ್ಯವಿಲ್ಲ. ಮೊದಲು ಒಂಟಿ ಸಲಗಗಳನ್ನು ಹಿಡಿದು, ನಂತರ ಕುಟುಂಬವಾಗಿರುವ ಆನೆಗಳನ್ನು ಹಿಡಿದು ಸಾಗಿಸಲಾಗುವುದು ಎಂದು ಹೇಳಿದರು.

ಸೋನಿಯಾ ಗಾಂಧಿಗೆ ಪತ್ರ
ಮಂಡ್ಯ ನಗರದಲ್ಲಿ ರಸ್ತೆಬದಿ ವ್ಯಾಪಾರಿಗಳನ್ನು ಎತ್ತಗಂಡಿ ಮಾಡುವುದನ್ನು ವಿರೋಧಿಸಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆಗೆದುಕೊಂಡು ಹೋಗುವುದು ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯಲು ರಸ್ತೆ ಬದಿ ವ್ಯಾಪಾರಿಗಳ ಬೃಹತ್ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮಂಡ್ಯ ನಗರ ರಸ್ತೆಬದಿ ವ್ಯಾಪಾರಿಗಳ ಸಂಘ ಹಾಗೂ ರಸ್ತೆಬದಿ ವ್ಯಾಪಾರಿಗಳ ಸಮನ್ವಯ ಸಮಿತಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯುವ ಚಳವಳಿ ಆರಂಭಿಸಲಿದೆ.












Click it and Unblock the Notifications