ಅತೃಪ್ತ ಶಾಸಕರ ಸೇರ್ಪಡೆಗೆ ಬಿಜೆಪಿಯಲ್ಲೇ ವಿರೋಧ
Recommended Video
ಬೆಂಗಳೂರು, ಜುಲೈ 09: ಕಾಂಗ್ರೆಸ್-ಜೆಡಿಎಸ್ನಿಂದ ಅತೃಪ್ತಗೊಂಡು ರಾಜೀನಾಮೆ ನೀಡಿರುವ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದೆ.
ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಕೆಲವು ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಅತೃಪ್ತ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಕ್ಕೆ ತಮ್ಮ ತಕರಾರು ಎತ್ತಿದ್ದಾರೆ. ಅಲ್ಲದೆ ಆರ್ಎಸ್ಎಸ್ ಸಹ ಕೆಲವು ಶಾಸಕರ ಸೇರ್ಪಡೆಗೆ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರು ರಾಜೀನಾಮೆ ನೀಡಿದ್ದು ಅವರ ಸೇರ್ಪಡೆಗೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಕೆ.ಆರ್.ಪುರ ಶಾಸಕ ಭೈರತಿ ಬಸವರಾಜು, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಹಿರೆಕೆರೂರು ಶಾಸಕ ಬಿ.ಸಿ.ಪಾಟೀಲ್, ರಮೇಶ್ ಜಾರಕಿಹೊಳಿ ಇವರುಗಳ ಸೇರ್ಪಡೆಗೆ ಬಿಜೆಪಿಯ ಕೆಲವು ಶಾಸಕರು ಬೇಸರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯೇ ಸಮೀಪದ ಸ್ಪರ್ಧಿಯಾಗಿ ಚುನಾವಣೆಯಲ್ಲಿ ಹೋರಾಡಿರುವ ಶಾಸಕರನ್ನು ಈಗ ನಮ್ಮದೇ ಪಕ್ಷಕ್ಕೆ ಸೇರಿಸಿಕೊಂಡರೆ, ನಮ್ಮ ಪಕ್ಷದ ಸೋತ ಅಭ್ಯರ್ಥಿಗಳಿಗೆ ಅವಮಾನ ಮಾಡಿದಂತೆ ಆಗುತ್ತದೆ ಎಂದು ಕೆಲವು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಸಹ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅವರ ಸೇರ್ಪಡೆಗೆ ಈಗಾಗಲೇ ಪ್ರತಿಭಟನೆ ಸಹ ಮಾಡಲಾಗಿದೆ.












Click it and Unblock the Notifications