ಸಂಪುಟ ವಿಸ್ತರಣೆ ಸಮಯ ಅಸಮಾಧಾನ ಸಾಮಾನ್ಯ: ಕುಮಾರಸ್ವಾಮಿ
ಬೆಂಗಳೂರು, ಜೂನ್ 06: ಸಂಪುಟ ವಿಸ್ತರಣೆ ಸಮಯದಲ್ಲಿ ಕೆಲವು ಅಸಮಾಧಾನಗಳು ಸಾಮಾನ್ಯ ಆದರೆ ಸರ್ಕಾರದಲ್ಲಿ ಯಾವುದೇ ಒಡಕು ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದರು.
ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, 2008ರಲ್ಲಿ ಬಿಜೆಪಿ ಸ್ವತಂತ್ರ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟ ವಿಸ್ತರಣೆ ವೇಳೆ ಅತೃಪ್ತರು ಬಸ್ಸುಗಳನ್ನು ಸುಟ್ಟರು, ಆದರೆ ನಮ್ಮಲ್ಲಿ ಆ ಮಟ್ಟದ ಅಶಿಸ್ತು ಯಾರೂ ಪ್ರದರ್ಶಿಸಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನೂತನ ಸಚಿವರ ಪಟ್ಟಿ
ಸಚಿವ ಸ್ಥಾನ ತಪ್ಪಿದಾಗ ಅಸಮಾಧಾನ ಸಾಮಾನ್ಯವೇ ಆದರೆ ಇದರಿಂದ ಮೈತ್ರಿಯಲ್ಲಿ ಒಡಕು ಉಂಟಾಗುತ್ತದೆ ಎಂಬ ವಾದ ಸುಳ್ಳು, ಮಾಧ್ಯಮಗಳಲ್ಲಿ ಈ ಬಗ್ಗೆ ಅತಿರಂಜಿತವಾದ ವರದಿಗಳು ಬರುತ್ತಿವೆ ಎಂದು ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಂಪುಟ ವಿಸ್ತರಣೆ ಮಾಡುವ ಮುನ್ನವೇ ನಾನು ಮತ್ತು ಉಪಮುಖ್ಯಮಂತ್ರಿಗಳು ಕಾರ್ಯವನ್ನು ಪ್ರಾರಂಭ ಮಾಡಿದ್ದೇವೆ. ಬೆಂಗಳೂರಿನಲ್ಲಿ 3800 ರಸ್ತೆ ಗುಂಡಿಗಳನ್ನು ಮುಚ್ಚಬೇಕಿದ್ದು, ಬಿಬಿಎಂಪಿ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡಿದ್ದೇವೆ ಎಂದರು.
ನಮ್ಮ ಸಚಿವ ಸಂಪುಟ ಸಮಯೋಲನದಿಂದ ಕೂಡಿದ್ದು, ಅನುಭವಿ ಮತ್ತು ಹೊಸ ಉತ್ಸಾಹಿಗಳನ್ನು ಸಮ ಪ್ರಮಾಣದಲ್ಲಿ ಹೊಂದಿದೆ. ಇಂದು ಕ್ಯಾಬಿನೆಟ್ ಸದಸ್ಯರೊಮಂದಿಗೆ ಅನೌಪಚಾರಿಕ ಚರ್ಚೆ ನಡೆಸಿದ್ದು ಎಲ್ಲರೂ ಕೆಲಸ ಮಾಡಲು ಉತ್ಸುಕರಾಗಿದ್ದೇನೆ ಎಂದರು.