ಅತೃಪ್ತರೆಲ್ಲಾ ಅನರ್ಹ: ಸಿದ್ದರಾಮಯ್ಯಗೆ ಕಾಡಿದ ಹೊಸ ಗುಮಾನಿ
ಬೆಂಗಳೂರು, ಜುಲೈ 29: ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ತೀರ್ಪನ್ನು ಸ್ವಾಗತಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಈ ಸಂಬಂಧ ಸಾಲುಸಾಲು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಇಂದು (ಜು 29) ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು ಹೀಗೆ, ' ಅಧಿಕಾರ ನಷ್ಟ ಅನುಭವಿಸಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು. ಅನರ್ಹಗೊಂಡು ನಷ್ಟ ಅನುಭವಿಸಿದ್ದು ಪಕ್ಷಾಂತರಿ ಶಾಸಕರು. ಇವೆಲ್ಲದರ ಲಾಭ ಪಡೆದದ್ದು ಬಿಜೆಪಿ'.
"ಬಿಜೆಪಿಯವರೇ ಯಡಿಯೂರಪ್ಪ ವಿರುದ್ಧ ಸೋಮವಾರ ಮತ ಹಾಕಬಹುದು"
'ಏನಿದರ ಅರ್ಥ? ಇವೆಲ್ಲವೂ ಬಿಜೆಪಿ ನಾಯಕರ ಪೂರ್ವ ನಿಯೋಜಿತ ಷಡ್ಯಂತರವಾಗಿರಬಹುದೇ? ಅನರ್ಹ ಶಾಸಕರು ಎಚ್ಚೆತ್ತುಕೊಳ್ಳಲು ಸಕಾಲ', ಎಂದು ಸಿದ್ದರಾಮಯ್ಯ ಅನುಮಾನ ಮತ್ತು ಪ್ರಶ್ನೆಯನ್ನು ಟ್ವೀಟ್ ಮೂಲಕ ಎತ್ತಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ಸಿದ್ದರಾಮಯ್ಯ, 'ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪಕ್ಷಾಂತರಿ ಶಾಸಕರನ್ನು ವಿಧಾನಸಭಾ ಅಧ್ಯಕ್ಷರು ಅನರ್ಹಗೊಳಿಸಿದರೆ ಬಿಜೆಪಿ ನಾಯಕರು ಹೊಟ್ಟೆ ಉರ್ಕೊಳ್ಳೋದು ಯಾಕೆ? ಅವರ ಮೇಲೆ ಈ ಪರಿಯ ಕಾಳಜಿ ಯಾಕೆ? ಅವರೇನು ಇವರ ಪಕ್ಷದ ಶಾಸಕರೇ?' ಎಂದು ಪ್ರಶ್ನಿಸಿದ್ದಾರೆ.
ಭಾನುವಾರ (ಜು 28) ಎರಡು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ' ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಪದವಿ, ಅಧಿಕಾರ ರಾಜಕಾರಣದಲ್ಲಿ ಎಂದಿಗೂ ಶಾಶ್ವತವಲ್ಲ. ಮುಂದಿನ ಪೀಳಿಗೆಯ ರಾಜಕಾರಣಕ್ಕೆ ನಾವು ಮಾದರಿಯಾಗಿ ಏನನ್ನು ಬಿಟ್ಟುಹೋಗುತ್ತೇವೆ ಎಂಬುದು ಮುಖ್ಯ. ಸಭಾಧ್ಯಕ್ಷರ ಇಂದಿನ ನಿರ್ಣಯ ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು. ಅವರ ಈ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ' ಎಂದು ಬರೆದಿದ್ದರು.
ಸ್ಪೀಕರ್ ತೀರ್ಪನ್ನು ಸುಪ್ರೀಂ ಎತ್ತಿಹಿಡಿದರೆ ಅತೃಪ್ತರ ರಾಜಕೀಯ ಜೀವನದಲ್ಲಿ ಆಷಾಢ!
ಜೊತೆಗೆ, ಸ್ಪೀಕರ್ ತೀರ್ಮಾನಕ್ಕೆ ತಕ್ಷಣ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, 'ಮಾನ್ಯ ಸಭಾಧ್ಯಕ್ಷರು ಎಲ್ಲ 14 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಯಡಿ ಅನರ್ಹಗೊಳಿಸಿ ಹೊರಡಿಸಿರುವ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ನೈಜ ಗೆಲುವು. ಸ್ವಾರ್ಥ ಸಾಧನೆ, ಅಧಿಕಾರದಾಸೆಯಿಂದ ಜನಾದೇಶವನ್ನು ಧಿಕ್ಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಹೀನ ಸಂಸ್ಕೃತಿಗೆ ಈ ತೀರ್ಪು ಇತಿಶ್ರೀ ಹಾಡಲಿದೆ ಎಂಬುದು ನನ್ನ ನಂಬಿಕೆ' ಎಂದು ಟ್ವೀಟ್ ಮಾಡಿದ್ದರು.