Tomato Price: ಟೊಮೆಟೊ ಬೆಳೆದ ರೈತರು ಈಗ ನಷ್ಟದ ಸುಳಿಯಲ್ಲಿ?
ಟೊಮೆಟೊ ಬೆಲೆ ಆಕಾಶಕ್ಕೆ ಏರುತ್ತಿದ್ದಂತೆ ಅನ್ನದಾತ ಪ್ರಭು, ದೇಶದ ಬೆನ್ನೆಲುಬು ರೈತರು ಖುಷಿಯಾಗಿದ್ದರು. ಇಷ್ಟುದಿನ ಬರೀ ನಷ್ಟ ನಷ್ಟ ಎಂದು ಪರದಾಡುತ್ತಿದ್ದ ರೈತರು ಇದೀಗ ಲಕ್ಷ ಲಕ್ಷ ಲಾಭ ನೋಡುವ ಕಾಲ ಬಂದಿತ್ತು. ಆದರೆ ಖುಷಿ ಕೆಲ ದಿನಕ್ಕೆ ಮೀಸಲಾದಂತೆ ಕಾಣುತ್ತಿದ್ದು, ಟೊಮೆಟೊ ಬೆಳೆದ ರೈತರು ಈಗ ಮತ್ತೆ ನಷ್ಟ ಎನ್ನುತ್ತಿದ್ದಾರೆ. ಅರೆ ಯಾಕೆ ಅಂದ್ರಾ? ಟೊಮೆಟೊ ಬೆಲೆಯ ಕುಸಿತದ ಮಾಹಿತಿಗಾಗಿ ಮುಂದೆ ಓದಿ.
ಹೌದು, ಟೊಮೆಟೊ ರೇಟ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅದರಲ್ಲೂ ಉತ್ತರ ಭಾರತ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಜನರು ದಕ್ಷಿಣ ಭಾರತದ ಟೊಮೆಟೊ ಬೆಳೆಯನ್ನೇ ನಂಬಿದ್ದರು. ಹೀಗಾಗಿಯೇ ಕಳೆದ ಕೆಲ ವಾರದಿಂದ ಟೊಮೆಟೊ ಚಿನ್ನದ ಬೆಲೆಗೆ ಮಾರಾಟ ಆಗುತ್ತಿತ್ತು. ಆದರೆ ಈಗ ಮತ್ತೆ ಪರಿಸ್ಥಿತಿ ಹಳೇ ದಾರಿಗೆ ಬಂದಿದ್ದು, ರೈತರು ನಷ್ಟದ ಬಲೆಗೆ ಸಿಲುಕುತ್ತಿದ್ದಾರೆ. ಹಾಗಾದರೆ ಇದೀಗ ಟೊಮೆಟೊ ಬೆಲೆ ಎಷ್ಟಿದೆ? ರೈತರಿಗೆ ಆಗುತ್ತಿರುವ ಆ ನಷ್ಟವಾದರೂ ಎಷ್ಟು? ಬನ್ನಿ ತಿಳಿಯೋಣ.

ಟೊಮೆಟೊ ಬೆಳೆದು ಕೈಸುಟ್ಟುಕೊಂಡ ರೈತ?
ಅಂದಹಾಗೆ ಟೊಮೆಟೊ ಬೆಳೆಗೆ ಭಾರಿ ರೇಟ್ ಬಂದಿದ್ದೆ ತಡ ಅದೆಷ್ಟೋ ರೈತ ಕುಟುಂಬಕ್ಕೆ ಖುಷಿ ಆಗಿತ್ತು. ಇನ್ನಾದರೂ ತಮ್ಮ ಕಷ್ಟ ಬಗೆಹರಿಯುತ್ತೆ ಎಂಬ ನಿರೀಕ್ಷೆ ಇತ್ತು. ಆದ್ರೆ ಈ ನಿರೀಕ್ಷೆ ಇದೀಗ ಸುಳ್ಳಾಗುತ್ತಿದೆ. ಟೊಮೆಟೊ ಬೆಲೆ ಮತ್ತೆ ಪಾತಾಳ ಸೇರುವ ಮುನ್ಸೂಚನೆ ನೀಡುತ್ತಿದೆ. 14 ಕೆಜಿ ತೂಕದ ಬಾಕ್ಸ್ಗೆ ಕಳೆದ ಕೆಲವು ವಾರದಿಂದ 2500 ರೂಪಾಯಿಯ ಬೆಲೆ ಇತ್ತು. ಆದರೆ ದಿಢೀರ್ ಬೆಲೆ ಕುಸಿತ ಕಾಣುತ್ತಿದ್ದು, ರೈತರು ಕಂಗಾಲಾಗಿ ಹೋಗಿದ್ದಾರೆ. ಇದೇ ಸೋಮವಾರ ಕುಸಿತದ ಹಾದಿ ಹಿಡಿದ ಟೊಮೆಟೊ ಬೆಳೆ, ಮೊದಲಿಗೆ ₹1700 ರೂಪಾಯಿಗೆ ಕುಸಿದಿತ್ತು. ಇದಾದ ಮರುದಿನ ಬೆಲೆ ₹1550ಕ್ಕೆ ಕುಸಿತ ಕಂಡಿತ್ತು. ಇದು ಸಾಲದು ಎಂಬಂತೆ 1200 ರೂಪಾಯಿಗೆ ಬಿದ್ದ ಬೆಲೆ ಇದೀಗ 800 ರೂಪಾಯಿಗೆ ಬಂದು ನಿಂತಿದೆ.
ಲಾಭ ಇರಲಿ ಬಂಡವಾಳ ಬರುತ್ತಿಲ್ಲ!
ಟೊಮೆಟೊ ಅಂದ್ರೆ ಕೆಂಪು ಚಿನ್ನ ಅನ್ನೋ ಮಾತು ಕೇಳಿಬರುತ್ತೆ. ಹೀಗಾಗಿಯೇ ಕೆಲ ವಾರದಿಂದ ಟೊಮೆಟೊಗೆ ನಿಜವಾಗಿಯೂ ಚಿನ್ನದ ಬೆಲೆ ಬಂದಿತ್ತು. ಟೊಮೆಟೊ ಮಾರುಕಟ್ಟೆಗೆ ಬರುವುದು ತಡವಾದ ಕಾರಣ, ಪ್ರಾಕೃತಿಕ ವಿಕೋಪ ಹಿನ್ನೆಲೆ ಟೊಮೆಟೊ ಬೆಲೆ ಗಗನಕ್ಕೆ ಜಿಗಿದಿತ್ತು ಅಂತಾ ಹೇಳಾಲಾಗುತ್ತಿದೆ. ಆದ್ರೆ ಈಗ ಪರಿಸ್ಥಿತಿ ಸರಿಯಾಗುತ್ತಿದ್ದು ಬೇರೆ ಬೇರೆ ಭಾಗದಿಂದ ಟೊಮೆಟೊ ಮಾರುಕಟ್ಟೆಗೆ ತಲುಪುತ್ತಿದೆ. ಈ ಕಾರಣದಿಂದ ಭಾರಿ ಬೆಲೆಗೆ ಮಾರಾಟವಾಗುತ್ತಿದ್ದ ಟೊಮೆಟೊ ಇದೀಗ ಹಿಂದೆ ಉಳಿದಿದೆ. ದಿನದಿಂದ ದಿನಕ್ಕೆ ಟೊಮೆಟೊ ಬೆಲೆಯು ಕುಸಿದು ಪಾತಾಳ ಸೇರುವ ಮುನ್ಸೂಚನೆ ನೀಡುತ್ತಿದೆ. ಹಾಗೆ ಲಾಭ ಇರಲಿ ಬಂಡವಾಳ ಕೂಡ ಬರುತ್ತಿಲ್ಲ ಎಂದು ಕೆಲ ರೈತರು ಆರೋಪಿಸಿದ್ದಾರೆ.

ಟೊಮೆಟೊ ಬೆಳೆದು 30 ಸಾವಿರ ನಷ್ಟ?
ಇನ್ನು ರೈತನೊಬ್ಬ ಟೊಮೆಟೊ ಬೆಳೆದು ನಷ್ಟ ಅನುಭವಿಸಿದ ಸುದ್ದಿ ವೈರಲ್ ಆಗುತ್ತಿದೆ. ಕೋಲಾರ ಎಪಿಎಂಸಿಗೆ ಟೊಮೆಟೊ ತಂದಿದ್ದ ಚಾಮರಾಜನಗರದ ರೈತನಿಗೆ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ. ಸುಮಾರು 100 ಬಾಕ್ಸ್ ಟೊಮೆಟೊ ತಂದು 30 ಸಾವಿರ ನಷ್ಟ ಅನುಭವಿಸಿದ್ದಾರೆ ಚಾಮರಾಜನಗರದ ರೈತ ಎನ್ನಲಾಗಿದೆ. ಈ ಮೂಲಕ ಲಕ್ಷ ಲಕ್ಷ ಲಾಭ ನೀಡುತ್ತಿದ್ದ ಟೊಮೆಟೊ ಇದೀಗ ರೈತರನ್ನ ಬೇರೆ ಬೇರೆ ರೀತಿಯ ಸಂಕಷ್ಟಕ್ಕೆ ಸಿಲುಕಿಸುವ ಮುನ್ಸೂಚನೆ ನೀಡಿದೆ. ಹೀಗಾಗಿ ರೈತರು ಕೂಡ ಆದಷ್ಟು ಬೇಗ ತಮ್ಮ ಟೊಮೆಟೊ ಬೆಳೆ ಮಾರಲು ಚಿಂತಿಸುತ್ತಿದ್ದಾರೆ. ಮುಂದೆ ಬೆಲೆ ಮತ್ತಷ್ಟು ಕುಸಿಯುವ ಆತಂಕ ಆವರಿಸಿದೆ.
ಒಟ್ನಲ್ಲಿ ರೈತರಿಗೆ ಬೆಲೆ ಬಂದಾಗ ಬೆಳೆ ಇರಲ್ಲ, ಬೆಳೆ ಬಂದಾಗ ಬೆಲೆಯೇ ಸಿಗಲ್ಲ. ಹೀಗಾಗಿ ಭಾರತದ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಇದೀಗ ಟೊಮೆಟೊ ಬೆಲೆಯಲ್ಲಿ ಕೂಡ ಇದೇ ರೀತಿ ಏರುಪೇರಾಗಿದೆ. ಇನ್ನೇನು ತಮ್ಮ ಕಷ್ಟ ಟೊಮೆಟೊ ಬೆಳೆಯ ಮೂಲಕ ಬಗೆಹರಿಯುತ್ತೆ ಎಂದು ಕನಸು ಕಂಡಿದ್ದ ರೈತರಿಗೆ ಶಾಕ್ ಸಿಕ್ಕಿದೆ. ಹೀಗಾಗಿ ಮುಂದೆ ಇದೇ ರೀತಿ ಬೆಲೆ ಕುಸಿತ ಕಂಡರೆ ಏನು ಮಾಡುವುದು? ಎಂಬ ಚಿಂತೆ ಕೃಷಿಕರಲ್ಲಿ ಶುರುವಾಗಿದ್ದು ಸರ್ಕಾರ ಇದಕ್ಕೆ ಸೂಕ್ತ ದಾರಿ ಹುಡಕಬೇಕಿದೆ.












Click it and Unblock the Notifications