CV Shivashankar: ಹೃದಯಾಘಾತದಿಂದ ನಿರ್ದೇಶಕ ಸಿವಿ ಶಿವಶಂಕರ್ ನಿಧನ: ಗಣ್ಯರ ಸಂತಾಪ
ಬೆಂಗಳೂರು, ಜೂನ್ 27: ಕನ್ನಡ ಚಿತ್ರರಂಗದ (KFI) ಖ್ಯಾತ ಗೀತ ರಚನಕಾರ, ನಿರ್ಮಾಪಕ ಮತ್ತು ನಿರ್ದೇಶಕರಾದ ಸಿ.ವಿ. ಶಿವಶಂಕರ್ (90) ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಮೃತರ ನಿಧನಕ್ಕೆ ಸಚಿವರು ಸೇರಿದಂತೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇಂದು ಮಂಗಳವಾರ (ಜೂನ್ 27) ಮಧ್ಯಾಹ್ನ 2 ಗಂಟೆ ಹೊತ್ತಿಗೆ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ದಾರಿ ಮಧ್ಯೆಯೆ ಉಸಿರು ಚೆಲ್ಲಿದರು. ಸಿವಿ ಶಿವಶಂಕರ್ ಅವರಿಗೆ 90 ವರ್ಷ ವಯಸ್ಸಾದರೂ ಯಾವುದೇ ಗಂಭೀರ ರೂಪದ ಆರೋಗ್ಯ ಸಮಸ್ಯೆ ಅವರಿಗೆ ಕಾಡುತ್ತಿರಲಿಲ್ಲ. ಮಧ್ಯಾಹ್ನ ಊಟ ಮುಗಿಸಿ ಪೂಜೆ ಮಾಡಿದ ಬಳಿಕ ಹೃದಯಾಘಾತ ಸಂಭವಿಸಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮೃತರ ಸಂತಾಪಕ್ಕೆ ಸಂತಾಪ ವ್ಯಕ್ತಪಡಿಸಿರುವ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು, ರತ್ನಮಂಜರಿ ಚಿತ್ರದ ಮೂಲಕ ನಟರಾಗಿ ,ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಸಿ ವಿ ಶಿವಶಂಕರ್ ಆನಂತರ ಚಲನಚಿತ್ರ ಸಾಹಿತ್ಯ ರಚನೆಯ ಮೂಲಕ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ಕೊಟ್ಟವರು.
ಪದವೀಧರ, ನಮ್ಮ ಊರು ,ಸೇರಿದಂತೆ ಅನೇಕ ಚಿತ್ರಗಳನ್ನ ನಿರ್ದೇಶಿಸಿದ್ದಾರೆ, ಚಿತ್ರರಂಗದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯ ರಾಗಿ ಪಾಲ್ಗೊಳ್ಳುತ್ತಿದ್ದ ಶಿವಶಂಕರ್ ಅವರಿಗೆ 1991ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಸಹ ನೀಡಲಾಗಿತ್ತು.
ಅವರ ನಿಧನದಿಂದಾಗಿ ಕನ್ನಡ ಚಲನಚಿತ್ರ ರಂಗದ ಒಂದು ತಲೆಮಾರಿನ ಕೊಂಡಿ ಕಳಚಿ ದಂತಾಗಿದೆ ಎಂದು ಅವರು ಹೇಳಿದರು.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications