ಸಂಪುಟ ವಿಸ್ತರಣೆ: ಮತ್ತೆ ತಮ್ಮ ಪಟ್ಟು ಸ್ಪಷ್ಟ ಪಡಿಸಿದ ಯಡಿಯೂರಪ್ಪ?
ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಯಾವಾಗ ಮಹೂರ್ತ ಸಿಗಲಿದೆ ಎನ್ನುವುದರ ಬಗ್ಗೆ ಖುದ್ದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಸ್ಪಷ್ಟನೆಯಿಲ್ಲ. ಇನ್ನೆರಡು ದಿನದೊಳಗಾಗಿ ಬೊಮ್ಮಾಯಿ ಮತ್ತೊಮ್ಮೆ ದೆಹಲಿಗೆ ಪ್ರಯಾಣಿಸುವ ಸಾಧ್ಯತೆಯಿದೆ.
"ನಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ವರಿಷ್ಠರ ಸಂದೇಶಕ್ಕಾಗಿ ಕಾಯಬೇಕಾಗುತ್ತದೆ"ಎಂದಿರುವ ಸಿಎಂ ಬೊಮ್ಮಾಯಿ, ಹೈಕಮಾಂಡ್ ದೂರವಾಣಿ ಕರೆಯ ನಿರೀಕ್ಷೆಯಲ್ಲಿದ್ದಾರೆ. ಸಿಎಂ ಆದ ನಂತರ ಮೊದಲ ದೆಹಲಿ ಭೇಟಿಯ ವೇಳೆ ಸಚಿವ ಸ್ಥಾನಕ್ಕೆ ಸಂಭಾವ್ಯ ಹೆಸರು ಇರುವ ಪಟ್ಟಿಯನ್ನು ಬೊಮ್ಮಾಯಿ ತೆಗೆದುಕೊಂಡು ಹೋಗಿದ್ದಾರೆಂದು ಹೇಳಲಾಗುತ್ತಿದೆ.
ಇನ್ನು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೆಲವರನ್ನು ಕಡ್ಡಾಯವಾಗಿ ಸಚಿವರನ್ನಾಗಿ ಮಾಡಬೇಕೆನ್ನುವ ಷರತ್ತನ್ನು ಹಾಕಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಈ ರೀತಿಯ ಯಾವುದೇ ಒತ್ತಡವನ್ನು ಯಡಿಯೂರಪ್ಪನವರು ಹಾಕುತ್ತಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.
ಸಚಿವ ಸ್ಥಾನಕ್ಕಾಗಿ ಕೆಲವರು ದೆಹಲಿಯಲ್ಲಿ, ಇನ್ನಷ್ಟು ಜನ ಬೆಂಗಳೂರಿನಲ್ಲಿ ಕೂತು ಲಾಬಿ ಮಾಡುತ್ತಿದ್ದಾರೆ. ಇದರ ಜೊತೆಗೆ, ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡಾ ಮೂಲ ಬಿಜೆಪಿಗರಿಗೆ ಹೆಚ್ಚಿನ ಪಾಲನ್ನು ನೀಡಬೇಕೆಂದು ಪಟ್ಟು ಹಿಡಿದಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವನ್ನು ಕೂಡಾ ಸಿಎಂ ಬೊಮ್ಮಾಯಿ ನಿರಾಕರಿಸಿದ್ದಾರೆ.

ಯಾರೂ ನನ್ನ ಬಳಿ ಸಚಿವ ಸ್ಥಾನದ ಆಕಾಂಕ್ಷಿಯಾಗಿ ಬರಬೇಡಿ, ಯಡಿಯೂರಪ್ಪ
ಒಂದು ದಿನದ ಹಿಂದೆ, "ಯಾರೂ ನನ್ನ ಬಳಿ ಸಚಿವ ಸ್ಥಾನದ ಆಕಾಂಕ್ಷಿಯಾಗಿ ಬರಬೇಡಿ, ನಾನೀಗ ಮಾಜಿ ಮುಖ್ಯಮಂತ್ರಿ. ನಿಮ್ಮ ಡಿಮಾಂಡ್ ಏನಿದ್ದರೂ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ. ನನ್ನ ಬಳಿ ಬಂದು ಲಾಬಿ ನಡೆಸಿದರೆ ಪ್ರಯೋಜನವಿಲ್ಲ"ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ, ತಮ್ಮ ನಿಲುವನ್ನು ಈಗಾಗಲೇ ಬಿಎಸ್ವೈಯವರು ಬೊಮ್ಮಾಯಿ ಮತ್ತು ಹೈಕಮಾಂಡಿಗೆ ತಿಳಿಸಿದ್ದಾರೆ ಎನ್ನುವ ಮಾಹಿತಿಯಿದೆ. ತಮ್ಮ ನಿಲುವಿನಿಂದ ಹಿಂದಕ್ಕೆ ಸರಿಯುವುದಿಲ್ಲ ಎನ್ನುವ ಸ್ಪಷ್ಟ ನಿಲುವನ್ನು ಯಡಿಯೂರಪ್ಪ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಧರ್ಮೇಂದ್ರ ಪ್ರಧಾನ್ ಬಳಿ ಸಂಪುಟ ವಿಸ್ತರಣೆಯ ಸಂಬಂಧ ನಿಲುವು
ಬೊಮ್ಮಾಯಿಯವರು ಪ್ರಮಾಣವಚನ ಸ್ವೀಕರಿಸುವ ಮುನ್ನವೇ, ವೀಕ್ಷಕರಾಗಿ ಬಂದಿದ್ದ ಧರ್ಮೇಂದ್ರ ಪ್ರಧಾನ್ ಬಳಿ ಸಂಪುಟ ವಿಸ್ತರಣೆಯ ಸಂಬಂಧ ತಮ್ಮ ನಿಲುವನ್ನು ಹೇಳಿದ್ದರು. ಈ ವಿಚಾರವನ್ನು ಹೈಕಮಾಂಡ್ ಬಳಿಯೂ ಪ್ರಧಾನ್ ಚರ್ಚಿಸಿದ್ದಾರೆ. ಒಂದು ದಿನಗಳ ಹಿಂದೆ ಬೊಮ್ಮಾಯಿಯವರ ಬಳಿಯೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣೀಕರ್ತರನ್ನು ಯಾವ ಕಾರಣಕ್ಕೂ ಕೈಬಿಡಬಾರದು ಎನ್ನುವ ಒತ್ತಡವನ್ನು ಬಿಎಸ್ವೈ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಹದಿನೇಳು ಶಾಸಕರಿಗೆ ಸಚಿವ ಸ್ಥಾನ
ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಹದಿನೇಳು ಶಾಸಕರನ್ನು ಮತ್ತೆ ಸಚಿವರನ್ನಾಗಿ ಮಾಡಬೇಕು. ಇದರ ಜೊತೆ ಆರ್.ಆರ್.ನಗರದ ಶಾಸಕರಾದ ಮುನಿರತ್ನ ಅವರನ್ನೂ ಸಚಿವ ಸ್ಥಾನಕ್ಕೆ ಪರಿಗಣಿಸಬೇಕು. ಇದರಲ್ಲಿ ಯಾವುದೇ ಬದಲಾವಣೆಯಾಗಬಾರದು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ ಎಂದು ವರದಿಯಾಗಿದೆ.
Recommended Video

ಇಂತದ್ದೇ ಖಾತೆಯನ್ನು ನೀಡಬೇಕು ಎನ್ನುವ ಷರತ್ತನ್ನು ಏನಾದರೂ ಯಡಿಯುರಪ್ಪ ಇಟ್ಟಿದ್ದಾರಾ?
ಅವರೆಲ್ಲರೂ ಕೋರ್ಟ್ ನಲ್ಲಿ ಸ್ಟೇ ಪಡೆದಿದ್ದರೂ ಅವರಿಗೆ ಸಚಿವ ಸ್ಥಾನ ನೀಡಬೇಕು, ಇದು ಅವರನ್ನು ಪರಿಗಣಿಸದೇ ಇರಲು ಮಾನದಂಡ ಆಗಬಾರದು ಎಂದು ಬಿಎಸ್ವೈ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಸಚಿವ ಸ್ಥಾನದ ಜೊತೆಗೆ, ಇಂತದ್ದೇ ಖಾತೆಯನ್ನು ನೀಡಬೇಕು ಎನ್ನುವ ಷರತ್ತನ್ನು ಏನಾದರೂ ಯಡಿಯುರಪ್ಪ ಇಟ್ಟಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ.












Click it and Unblock the Notifications