ದೂತ ಯೂಟ್ಯೂಬರ್ ಸಮೀರ್ಗೆ ಫುಲ್ ಡ್ರಿಲ್: ಆದಾಯ ಮೂಲ ಏನು ?
ಧರ್ಮಸ್ಥಳ ಪ್ರಕರಣವು ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಯಾರು ಸುಳ್ಳು ಹೇಳಿದ್ದರು, ಏನೆಲ್ಲಾ ನಡೆದಿದೆ ಹಾಗೂ ಒಂದಕ್ಕೊಂದು ಹೇಗೆ ಸಂಬಂಧಿವಿದೆ ಎನ್ನುವ ಬಗ್ಗೆ ಎಸ್ಐಟಿ ತನಿಖಾಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ನಡುವೆ ದೂತ ಯೂಟ್ಯೂಬ್ ಚಾನೆಲ್ನ ಯೂಟ್ಯೂಬರ್ ಸಮೀರ್ಗೆ ಪೊಲೀಸರಿಂದ ಸಂಕಷ್ಟ ಎದುರಾಗಿದೆ. ಸಮೀರ್ ಅನ್ನು ನಿರಂತರವಾಗಿ ಪೊಲೀಸ್ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಆತನ ಆದಾಯ ಮೂಲವನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸಮೀರ್ ಎಐ ಆಧಾರಿತ ವಿಡಿಯೋವನ್ನು ಮಾಡಿದ ಮೇಲೆ ಕರ್ನಾಟಕದಾದ್ಯಂತ ಸುದ್ದಿಯಾಗಿದ್ದರು. ಸೌಜನ್ಯ ಅವರ ಸಾವಿನ ಕುರಿತಾದ ಈ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ಇದೀಗ ದೂರುದಾರ ಚೆನ್ನಯ್ಯ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಮೀರ್ನ ವಿಚಾರಣೆಯನ್ನೂ ತೀವ್ರಗೊಳಿಸಲಾಗಿದೆ. ದೂತ ಸಮೀರ್ಗೆ ಇದೀಗ ಸಂಕಷ್ಟ ಎದುರಾಗಿದೆ. ಈಗಾಗಲೇ ಸಮೀರ್ಗೆ ಬೆಂಬಲ ಸೂಚಿಸಿದ್ದ ಹಲವರು ಈಗಾಗಲೇ ಯೂಟರ್ನ್ ತೆಗೆದುಕೊಂಡಿದ್ದಾರೆ.

ಸಮೀರ್ ಸೌಜನ್ಯ ಬಗ್ಗೆ ಎಐ ಆಧಾರಿತ ವಿಡಿಯೋ ಮಾಡಿದಾಗ ಹಲವು ಯೂಟ್ಯೂಬರ್ಗಳು ಬೆಂಬಲ ಸೂಚಿಸಿದ್ದರು. ಆದರೆ ಇದೀಗ ಸಮೀರ್ ಒಬ್ಬೊಂಟಿಯಾಗಿದ್ದು, ಈ ವಿಚಾರವಾಗಿ ವಿಚಾರಣೆ ಎದುರಿಸುವಂತೆ ಆಗಿದೆ. ಯೂಟ್ಯೂಬರ್ ಸಮೀರ್ ಎಂ.ಡಿ. ವಿಚಾರಣೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಠಾಣೆಯಲ್ಲಿ ಆಗಸ್ಟ್ 25 (ಸೋಮವಾರ)ರಂದು ನಡೆದಿದ್ದು. 6 ಗಂಟೆಗೂ ಹೆಚ್ಚಿನ ಅವಧಿ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಸಮಯದಲ್ಲಿ ಸರಣಿ ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದು. ಈ ವೇಳೆ ವಕೀಲರೊಂದಿಗೆ ಬಂದಿದ್ದ ಸಮೀರ್ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ.
ಇನ್ನು ಸಮೀರ್ನ ಆದಾಯ ಮೂಲವನ್ನು ಈ ಸಂದರ್ಭದಲ್ಲಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ತನಿಖೆಯನ್ನು ತನಿಖಾಧಿಕಾರಿಗಳಾದ ನಾಗೇಶ್ ಕದ್ರಿ ಹಾಗೂ ಜಿತೇಂದ್ರ ದಯಾಮ ಅವರು ನಡೆಸಿದ್ದಾರೆ. ಮುಖ್ಯವಾಗಿ ವಿಚಾರಣೆಯಲ್ಲಿ ಸಮೀರ್ನ ಆದಾಯ ಮೂಲ ಯಾವುದು ಎನ್ನುವ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಹಣಕಾಸು ಸಾಕ್ಷ್ಯ ಸಂಗ್ರಹದ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಈ ಎಐ ರಚಿತ ವಿಡಿಯೋವನ್ನು ಮಾಡಿರುವ ಉದ್ದೇಶ ಹಣಕಾಸು ಲಾಭದ ಉದ್ದೇಶದಿಂದಲೇ ಮಾಡಲಾಗಿದೆಯೇ ಎನ್ನುವುದನ್ನು ಪರಿಶೀಲನೆ ಮಾಡಿದ್ದಾರೆ ಎನ್ನಲಾಗಿದೆ. ಹೆಚ್ಚು ದುಡ್ಡು ಮಾಡುವ ಉದ್ದೇಶದಿಂದ ತಪ್ಪು ಮತ್ತು ಸುಳ್ಳು ವಿಷಯವನ್ನು ಹಂಚಿಕೊಳ್ಳಲಾಗಿದೆಯೇ ಎನ್ನುವುದನ್ನು ಪರಿಶೀಲನೆ ಮಾಡಲಾಗಿದೆ.
ಇನ್ನು ಇದೇ ಸಂದರ್ಭದಲ್ಲಿ ಯೂಟ್ಯೂಬ್ ಹಾಗೂ ಗೂಗಲ್ ಸಮೀರ್ಗೆ ಬಂದಿರುವ ದುಡ್ಡು ಹಾಗೂ ಬ್ಯಾಂಕ್ ಖಾತೆಯ ಟ್ರಾನ್ಸ್ಫರ್ ಆಗಿರುವ ದುಡ್ಡಿನ ಮೂಲವನ್ನು ಇದೇ ಸಂದರ್ಭದಲ್ಲಿ ಪರಿಶೀಲನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಚಾನಲ್ನ್ನು ಅನ್ನು ಸಮೀರ್ ಅವರೇ ಪ್ರಾರಂಭಿಸಿದ್ದಾರೆಯೇ ಅಥವಾ ಇನ್ಯಾರಾದರೂ ಇವರೊಂದಿಗೆ ಇದ್ದಾರೆಯೇ ಎನ್ನುವುದನ್ನು ಸಹ ಇದೇ ಸಂದರ್ಭದಲ್ಲಿ ಪ್ರಶ್ನಿಸಲಾಗಿದೆ. ರಾಜಕೀಯ ನಂಟು ಇದೆಯೇ ಎನ್ನುವುದು ಸೇರಿದಂತೆ ಕೆಲವೊಂದು ವಿಚಾರಗಳನ್ನೂ ಇದೇ ಸಂದರ್ಭದಲ್ಲಿ ವಿಚಾರಿಸಲಾಗಿದೆ ಎಂದು ಹೇಳಲಾಗಿದೆ.












Click it and Unblock the Notifications