ಶ್ರೀ ಕ್ಷೇತ್ರದಲ್ಲಿ ರಾಜಸ್ಥಾನೀ ಜಾನಪದ ನೃತ್ಯವೈಭವ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶ್ರೀ ಮಂಜುನಾಥ ಸ್ವಾಮಿಯ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ವಾರಾಂತ್ಯದಲ್ಲಿ ಅಮೃತವರ್ಷಿಣಿ ಸಭಾಂಗಣದಲ್ಲಿ ರಾಜಸ್ಥಾನಿ ಜನಪದ ಕಲಾವಿದರು ಸಾಂಸ್ಕೃತಿಕ ಸಿರಿಯನ್ನು ಉಣಬಡಿಸಿದರು.
ರಾಜಸ್ಥಾನ ರಾಜ್ಯದ ಕಲ್ಬೇಲಿಯಾ ಜನಾಂಗದ ಪುರಾತನ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವ, ದಕ್ಷಿಣ ಏಷ್ಯಾದ ಸಾಂಪ್ರದಾಯಿಕ ಜಾನಪದ ನೃತ್ಯಗಳೆಂದು ಹೆಸರಾದ ಚಾರ್ ಡ್ಯಾನ್ಸ್, ಗುಮಾರ್, ಬಂಜಾರ ನೃತ್ಯ, ಚೇರಿನೃತ್ಯ, ಭವಾರಿ ನೃತ್ಯ ಹಾಗೂ ಕಚ್ಚಿಗೋಢಿ ನೃತ್ಯ ಶೈಲಿಗಳನ್ನು ಪ್ರದರ್ಶಿತಗೊಂಡವು.

ನೃತ್ಯಗಳ ಜೊತೆಗೆ ರಾಜಸ್ಥಾನಿ ಕಲಾವಿದರು ಪ್ರಸ್ತುತಪಡಿಸಿದ ಕೌಶಲಭರಿತ ಸಾಹಸ ಪ್ರದರ್ಶನಗಳು ನೋಡುಗರ ಮನಸೂರೆಗೊಂಡವು. ತಲೆಯ ಮೇಲೆ ಗಾಜಿನ ಲೋಟಗಳನ್ನಿಟ್ಟು, ಅದರ ಮೇಲೆ ನೀರು ತುಂಬಿದ ಮಡಿಕೆಯನ್ನಿಟ್ಟು ಸಮತೋಲನ ಕಾಯ್ದುಕೊಂಡು ನೃತ್ಯ ಮಾಡುವ ಶೈಲಿ ಪ್ರೇಕ್ಷಕರಿಂದ ಅಪಾರ ಚಪ್ಪಾಳೆ ಗಿಟ್ಟಿಸಿಕೊಂಡಿತು. [ಗ್ಯಾಲರಿ: ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮ]

ಇದರೊಂದಿಗೆ ಬೆಂಕಿಯೊಂದಿಗಿನ ಸರಸ, ಮುಳ್ಳು, ಖಡ್ಗಗಳ ಅಂಚಿನ ಮೇಲೆ ನೃತ್ಯ ಮಾಡುವ ಸಾಹಸಗಳು ಕಲಾರಸಿಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತು. [ವಿಡಿಯೋ ಸುದ್ದಿ: ಧರ್ಮಸ್ಥಳದಲ್ಲಿ ರುದ್ರಯಾಗ]
ಇದಕ್ಕೂ ಮೊದಲು ಪಂಡಿತ್ ಶ್ರೀ ಮನಿಷ್ ಶರ್ಮಾ ತಂಡದ ವತಿಯಿಂದ ನಡೆದ ಶಿವ ಪಾರ್ವತಿ ಕಲ್ಯಾಣದ ಪ್ರಸಂಗವನ್ನು ಭಜನ್ ಸಂಧ್ಯಾ ಮೂಲಕ ಪ್ರಸ್ತುತ ಪಡಿಸಿದರು. [ವಿಡಿಯೋ ಸುದ್ದಿ: ಧರ್ಮಸ್ಥಳದಲ್ಲಿ ಬ್ರಹ್ಮಕಲಶ ಉತ್ಸವ]

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಷ್ಟಬಂಧ ಹಾಗೂ ಬ್ರಹ್ಮಕಲಶ ಉತ್ಸವ ಪ್ರತಿ 12ವರ್ಷಕ್ಕೊಮ್ಮೆ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಉತ್ಸವವಾಗಿದೆ. ಈ ಬಾರಿ ಮಾರ್ಚ್ 12 ರಿಂದ 18 ರವರೆಗೆ ಬ್ರಹ್ಮ ಕಲಶ ಉತ್ಸವ ನಡೆಯುತ್ತಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳನ್ನು ಸೆಳೆಯಲಿವೆ.

ವರದಿ: ಗೋವಿಂದರಾಜ್, ಅಮರೇಶ್ ಚವ್ಹಾಣ್ & ಹರೀಶ್ ರೆಡ್ಡಿ
ಚಿತ್ರಗಳು: ಮುರಳಿ ಕೃಷ್ಣ ಮತ್ತು ಸಂದೀಪ್ ದೇವ್












Click it and Unblock the Notifications