ಬೀದರ್ ನಲ್ಲಿ ಇಂದು ಕಾಂಗ್ರೆಸ್ ಶಕ್ತಿ ಪ್ರದರ್ಶನ
ಬೀದರ್, ಮಾ. 20 : ಬೀದರ್ ನಲ್ಲಿ ಲೋಕಸಭಾ ಚುನಾವಣೆ ಕಣ ರಂಗೇರುತ್ತಿದೆ. ಗುರುವಾರ ಕ್ಷೇತ್ರದ ಹಾಲಿ ಸಂಸದ ಮತ್ತು ಮತ್ತು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ನಾಮಪತ್ರ ಸಲ್ಲಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹ ಬೀದರ್ ಪ್ರವಾಸ ಕೈಗೊಂಡಿದ್ದು, ನಾಮಪತ್ರ ಸಲ್ಲಿಸುವ ವೇಳೆ ಧರ್ಮಸಿಂಗ್ ಜೊತೆ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಬೀದರ್ ನಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 12.45ಕ್ಕೆ ನಾಮಪತ್ರ ಸಲ್ಲಿಸಲಿರುವ ಧರ್ಮಸಿಂಗ್, ನಂತರ ನಗರದ ಗಣೇಶ ಮೈದಾನದಲ್ಲಿ ನಡೆಯಲಿರುವ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶದ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡುತ್ತಿದೆ. ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಬೀದರ್ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಗುಲ್ಬರ್ಗ ಜಿಲ್ಲೆಯ 2 ಕ್ಷೇತ್ರಗಳಿ ಬೀದರ್ ವ್ಯಾಪ್ತಿಗೆ ಸೇರುತ್ತವೆ.
ಕ್ಷೇತ್ರದ ವ್ಯಾಪ್ತಿಗೆ ಬರುವ ಚಿಂಚೋಳಿ, ಕಮಲಾಪುರ, ಬಸವಕಲ್ಯಾಣ, ಹುಮ್ನಾಬಾದ್, ಬೀದರ್ ದಕ್ಷಿಣ, ಬೀದರ್, ಬಾಲ್ಕಿ, ಔರಾದ್ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರು ಇಂದಿನ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದ ಮೂಲಕ ಕಾಂಗ್ರೆಸ್ ಅಧಿಕೃತವಾಗಿ ಚುನಾವಣೆ ಅಖಾಡಕ್ಕೆ ಧುಮುಕುತ್ತಿದೆ.
ಧರ್ಮಸಿಂಗ್ ಅವರಿಗೆ ಎದುರಾಳಿಯಾಗಿ ಜೆಡಿಎಸ್ ನಿಂದ ಬಂಡೆಪ್ಪ ಕಾಶೆಂಪುರ್ ಸ್ಪರ್ಧಿಸುತ್ತಿದ್ದಾರೆ. ಗುರುಪಾದಪ್ಪ ನಾಗಮಾರಪಲ್ಲಿ ಮತ್ತು ಸೂರ್ಯಕಾಂತ್ ನಾಗಮಾರಪಲ್ಲಿ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು ಮುಳುಗಿದ್ದು, ಅಭ್ಯರ್ಥಿಗಳು ಅಂತಿಮವಾಗಿಲ್ಲ. [ಬಿಜೆಪಿ 3 ಕ್ಷೇತ್ರ ಕಗ್ಗಂಟು]
ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ತಯಾರಾಗಿದ್ದರೂ ಸಹ, ಬಿಜೆಪಿ ಅಭ್ಯರ್ಥಿ ಯಾರು ಎಂಬುದು ನಿಗೂಢವಾಗಿರುವುದರಿಂದ ಕಾರ್ಯಕರ್ತರು ಸಹ ಗೊಂದಲ ಗೊಂಡಿದ್ದಾರೆ. ಯಾರ ಪರ ಪ್ರಚಾರ ಮಾಡಬೇಕು ಎಂಬುದು ಕಾರ್ಯಕರ್ತರ ಗೊಂದಲಕ್ಕೆ ಕಾರಣವಾಗಿದೆ. ಬುಧವಾರ ಬಿಜೆಪಿ ಕೇಂದ್ರ ಚುನಾವಣೆ ಸಮಿತಿ ಸಭೆ ನಡೆದರೂ ಬೀದರ್ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.
ಹಿನ್ನೋಟ : ಮೊದಲ ಬಾರಿಗೆ 2009ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಧರ್ಮಸಿಂಗ್, ಬಿಜೆಪಿಯ ಗುರುಪಾದಪ್ಪ ನಾಗಮಾರಪಲ್ಲಿ ವಿರುದ್ಧ 337,957 ಮತಗಳನ್ನು ಪಡೆದು ಜಯಗಳಿಸಿದ್ದರು. ನಾಗಮಾರಪಲ್ಲಿ 298,338 ಮತಗಳನ್ನು ಸೋಲು ಕಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿಯೂ ನಾಗಮಾರಪಲ್ಲಿ ಅಥವ ಸೂರ್ಯಕಾಂತ್ ನಾಗಮಾರಪಲ್ಲಿ ಧರ್ಮಸಿಂಗ್ ಗೆ ಪ್ರತಿಸ್ಪರ್ಧೆ ನೀಡಲಿದ್ದಾರೆ. [ಮಾಹಿತಿ : ಇಂಡಿಯಾವೋಟ್ಸ್.ಕಾಮ್]