ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ನೇಮಕ
ಬೆಂಗಳೂರು, ಮೇ 14; ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸಿಬಿಐನ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರದಿಂದ ಈ ಕುರಿತು ಆದೇಶ ಹೊರಡಿಸಲಾಗಿದೆ. ಪ್ರವೀಣ್ ಸೂದ್ 1986ನೇ ಬ್ಯಾಚ್ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿ.
ಈ ತಿಂಗಳ ಅಂತ್ಯಕ್ಕೆ ಸಿಬಿಐನ ಹಾಲಿ ನಿರ್ದೇಶಕರಾಗಿರುವ ಸುಭೋದ್ ಕುಮಾರ್ ಜೈಸ್ವಾಲ್ ಅಧಿಕಾರಾವಧಿ ಅಂತ್ಯಗೊಳ್ಳಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಮುಂದಿನ ಕೇಂದ್ರ ತನಿಖಾ ದಳ ( ಸಿಬಿಐ) ನಿರ್ದೇಶಕರ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆಸಿದೆ.

ಶನಿವಾರ ನಡೆದ ತ್ರಿ ಸದಸ್ಯ ಸಮಿತಿ ಸಭೆಯಲ್ಲಿ ಪ್ರವೀಣ್ ಸೂದ್ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂಬ ಮಾಹಿತಿ ಇತ್ತು. ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಎರಡು ವರ್ಷಗಳ ಅವಧಿ; ಕೇಂದ್ರ ಸರ್ಕಾರದ ಹೊಸ ನಿಯಮಗಳ ಪ್ರಕಾರ ಸಿಬಿಐ ನಿರ್ದೇಶಕರ ಅಧಿಕಾರಾವಧಿ 2 ವರ್ಷಗಳು. ಪ್ರವೀಣ್ ಸೂದ್ ಜೊತೆಗೆ ಮಧ್ಯ ಪ್ರದೇಶದ ಡಿಜಿಪಿ ಸುಧೀರ್ ಸಕ್ಸೇನಾ, ದೆಹಲಿಯ ಸಿಡಿಎಚ್ಜಿ ಮುಖ್ಯಸ್ಥ ತಾಜ್ ಹಸನ್ ಹೆಸರುಗಳು ಸಹ ಕೇಳಿ ಬರುತ್ತಿದ್ದವು.

1984ನೇ ಬ್ಯಾಚ್ ಐಪಿಎಸ್ ಅಧಿಕಾರಿ ಸಮಂತ್ ಗೋಯಲ್ ಹೆಸರು ಸಹ ಕೇಳಿ ಬರುತ್ತಿತ್ತು. ರಾ ಮುಖ್ಯಸ್ಥರಾಗಿರುವ ಅವರ ಅಧಿಕಾರಾವಧಿಯನ್ನು ಜೂನ್ 30ರ ತನಕ ವಿಸ್ತರಣೆ ಮಾಡಲಾಗಿತ್ತು. ಆದರೆ ಈಗ ಪ್ರವೀಣ್ ಸೂದ್ ನೇಮಿಸಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಕೇಡರ್ನ ಇಬ್ಬರು ಈಗಾಗಲೇ ಸಿಬಿಐನ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. 1996ರ ಜುಲೈ 31 ರಿಂದ 1997 ಜೂನ್ 30ರ ತನಕ ಜೋಗಿಂದರ್ ಸಿಂಗ್ ಮತ್ತು 1998ರ ಜನವರಿ 31 ರಿಂದ 1998ರ ಮಾರ್ಚ್ 31ರ ತನಕ ಡಿ. ಆರ್. ಕಾರ್ತಿಕೇಯನ್ ಕಾರ್ಯ ನಿರ್ವಹಿಸಿದ್ದರು.
ಪ್ರವೀಣ್ ಸೂದ್ ಮೂಲತಃ ಹಿಮಾಚಲ ಪ್ರದೇಶದವರು. ಫೆಬ್ರವರಿ 1, 2020ರಂದು ಕರ್ನಾಟಕದ ಡಿಜಿ & ಐಜಿಪಿಯಾಗಿ ನೇಮಕಗೊಂಡರು. ದೆಹಲಿ ಐಐಟಿಯಲ್ಲಿ ವ್ಯಾಸಂಗ ಮಾಡಿರುವ ಅವರು ಸೈಬರ್ ಕ್ರೈಂ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ.
ಪ್ರವೀಣ್ ಸೂದ್ ಕ್ರಿಕೆಟಿಗ ಮಾಯಾಂಕ್ ಅರ್ಗವಾಲ್ ಅವರ ಮಾವ. ಸದ್ಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿರುವ ಅವರ ಅಧಿಕಾರಾವಧಿ ಇನ್ನೂ ಒಂದು ವರ್ಷ ವಿತ್ತು. ಈಗ ಅವರು ಸಿಬಿಐ ಮುಖ್ಯಸ್ಥರಾಗಿ ನೇಮಕಗೊಂಡಿದ್ದು, ರಾಜ್ಯಕ್ಕೆ ಹೊಸ ಪೊಲೀಸ್ ಮಹಾ ನಿರ್ದೇಶಕರ ನೇಮಕವಾಗಬೇಕಿದೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪ್ರವೀಣ್ ಸೂದ್ ವಿರುದ್ಧ ಡಿ. ಕೆ. ಶಿವಕುಮಾರ್ ಬಹಿರಂಗಾಗಿ ಅಸಮಾಧಾನ ಹೊರಹಾಕಿದ್ದರು. ಬಿಜೆಪಿ ಸರ್ಕಾರ ಕಾಪಾಡುತ್ತಿರುವುದೇ ಪ್ರವೀಣ್ ಸೂದ್ ಎಂದು ವಾಗ್ದಾಳಿ ನಡೆಸಿದ್ದರು.












Click it and Unblock the Notifications