ಜೈಲಿನಲ್ಲಿ ಹೊಸ ನಿಯಮ ಜಾರಿಗೆ ಡಿಜಿಪಿ ಆದೇಶ: ದರ್ಶನ್ ಸೇರಿ ಕೈದಿಗಳ ಹೆಚ್ಚುವರಿ ಸವಲತ್ತುಗಳಿಗೆ ಬ್ರೇಕ್
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಇತ್ತೀಚೆಗೆ ಜೈಲಲ್ಲಿರುವ ಆರೋಪಿ ಪವಿತ್ರಾ ಗೌಡಗೆ ಮನೆ ಊಟದ ಸೌಲಭ್ಯಕ್ಕೆ ಕೋರ್ಟ್ ಬ್ರೇಕ್ ಹಾಕಿತ್ತು. ಇದೀಗ ಆರೋಪಿ, ನಟ ದರ್ಶನ್ ತೂಗುದೀಪಗೆ ಜೈಲಿನಲ್ಲಿ ನೀಡಿರುವ ಹೆಚ್ಚುವರಿ ಬೆಡ್ಶೀಟ್ ಸವಲತ್ತಿಗೂ ಕುತ್ತು ಬರುವ ಸಾಧ್ಯತೆ ಇದೆ. ಏಕೆಂದರೆ ರಾಜ್ಯದ ಎಲ್ಲ ಜೈಲಾಧಿಕಾರಿಗಳಿಗೆ ಕೈದಿಗಳಿಗೆ ನೀಡುವ ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಿಸುವ ಬಗ್ಗೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ. ಇದು ರಾಜ್ಯದ ಎಲ್ಲಾ ಕಾರಾಗೃಹಗಳಿಗೂ ಅನ್ವಯಿಸಲಿದೆ.
ಜೈಲುಗಳಲ್ಲಿ ಜಾರಿಗೆ ಬರಲಿರುವ ಈ ಹೊಸ ನಿಯಮ ಜಾರಿ ಮಾಡಿ ಎಲ್ಲ ಕಾರಾಗೃಹಗಳ ಜೈಲಾಧಿಕಾರಿಗಳಿಗೆ ಡಿಜಿಪಿ ಸೂಚನೆ ನೀಡಿ ಆದೇಶಿಸಿದ್ದಾರೆ. ಈ ಮೂಲಕ ನಟ ದರ್ಶನ್, ಪವಿತ್ರಾ ಗೌಡ ಸೇರಿ ಯಾರೆಲ್ಲ ಜೈಲಿನಲ್ಲಿ ಹೆಚ್ಚುವರಿ ಸವಲತ್ತು ಪಡೆದಿದ್ದರೋ ಅದಕ್ಕೆಲ್ಲ ಬ್ರೇಕ್ ಬೀಳಲಿದೆ. ಕಳೆದ ವರ್ಷ ನಟ ದರ್ಶನ್ಗೆ ಜೈಲಿನಲ್ಲಿ ಸಿಕ್ಕ ವಿಶೇಷ ರಾಜಾತಿಥ್ಯ ಸುದ್ದಿ ಸಖತ್ ಸದ್ದು ಮಾಡಿತ್ತು. ಅದಾದ ಬಳಿಕ ಜೈಲಿನ ವಿಚಾರಗಳು, ನಿಯಮಗಳು ಮುನ್ನೆಲೆಗೆ ಬಂದವು. ಇತ್ತೀಚೆಗೆ ಕೋರ್ಟ್ ಸಹಿತ ರಾಜ್ಯದ ಎಲ್ಲ ಜೈಲುಗಳಲ್ಲಿನ ಕೈದಿಗಳಿಗೆ ಮನೆ ಊಟ, ಇತರ ಸೌಲಭ್ಯಗಳ ಸರಬರಾಜು ಕುರಿತು ಮಾರ್ಗಸೂಚಿ ರೂಪಿಸುವ ಬಗ್ಗೆ ಮೌಖಿಕವಾಗಿ ತಿಳಿಸಿತ್ತು. ಇದರ ಬೆನ್ನಲ್ಲೆ ಕಾರಾಗೃಹ ಡಿಜಿಪಿ ಅವರಿಂದ ಈ ಆದೇಶ ಹೊರ ಬಿದ್ದಿರುವುದು ಕೂತುಹಲ ಮೂಡುವಂತೆ ಮಾಡಿದೆ.

ಜೈಲಿನ ಆಹಾರ ಪ್ರಮಾಣೀಕರಿಸಲಾಗಿದೆ
ಆದೇಶದಲ್ಲಿ ಅಲೋಕ್ ಕುಮಾರ್ ಅವರು, ಬೆಂಗಳೂರು ಕಾರಾಗೃಹದ ಊಟ, ಆಹಾರ ಪದಾರ್ಥಗಳನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪರಿಶೀಲಿಸಿದೆ. ಜೈಲಿನಲ್ಲಿ ಉತ್ತಮ ಆಹಾರ ನೀಡಲಾಗುತ್ತಿದೆ. ಹೊರಗಿನಿಂದ ಕೈದಿಗಳಿಗೆ ಆಹಾರ ಅನುಮತಿಸುವುದಿಲ್ಲ. ಹಾಸಿಗೆ, ಬಟ್ಟೆ ಒದಗಿಸುವ ಬಗ್ಗೆ ಹೊಸ ನಿಯಮಗಳನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೈಲುಗಳಲ್ಲಿ ನಿಯಮಗಳ (ಮ್ಯಾನುವಲ್) ಪ್ರಕಾರ ನೀಡುವ ಬೆಡ್ಶೀಟ್ಗಳನ್ನೇ ವಿಚಾರಣಾಧೀನ ಕೈದಿಗಳು ಬಳಸಬೇಕು. ಇನ್ನೂ ಕೈದಿಗಳ ಆಹಾರ, ಬಟ್ಟೆ, ಹಾಸಿಗೆ ಪೂರೈಕೆ ನಿಯಂತ್ರಣಕ್ಕೆ ಎಲ್ಲ ಜೈಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನೂ ಕುಟುಂಬದವರು ನೋಡಲು (ಸಂದರ್ಶನಕ್ಕೆ) ಬಂದಾಗ ಕೈದಿಗಳಿಗೆ ಖಾಸಗಿ ವ್ಯಕ್ತಿಗಳಿಂದ ನಿರ್ದಿಷ್ಟ ಪ್ರಮಾಣದಲ್ಲಿ ಊಟ ನೀಡಬಹುದಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications