ಸಂಸತ್ತಿನಲ್ಲಿ ಕೆಣಕಿದ ಮೋದಿಗೆ ಟ್ವಿಟ್ಟರ್ನಲ್ಲಿ ದೇವೇಗೌಡ ಉತ್ತರ
ಬೆಂಗಳೂರು, ಫೆಬ್ರವರಿ 07: ಸಂಸತ್ತಿನಲ್ಲಿ ಇಂದು ಸುಧೀರ್ಘ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು, ಸಂಸತ್ನಲ್ಲಿ ಸೋನಿಯಾ ಗಾಂಧಿ ಪಕ್ಕ ಕೂತಿದ್ದ ದೇವೇಗೌಡ ಅವರನ್ನು ತಮ್ಮ ಭಾಷಣದ ಮಧ್ಯೆ ಒಮ್ಮೆ ಕೆಣಕಿದರು. ಆದರೆ ಆ ಸಮಯದಲ್ಲಿ ಗಂಭೀರವಾಗಿ ಕೂತಿದ್ದ ದೇವೇಗೌಡ ಅವರು ಮೋದಿ ಅವರಿಗೆ ಟ್ವಿಟ್ಟರ್ನಲ್ಲಿ ಉತ್ತರಿಸಿದ್ದಾರೆ.
ಸಂಸತ್ತಿನಲ್ಲಿ ಮಾತನಾಡುತ್ತಾ ಮೋದಿ ಅವರು, 'ದೇವೇಗೌಡ ಅವರು ಇಂದು ಇಲ್ಲಿ ಕೂತಿದ್ದಾರೆ. ಅವರನ್ನು ಮಣ್ಣಿನ ಮಗ ಎಂದು ಕರೆಯಲಾಗುತ್ತದೆ. ಅವರ ರಾಜ್ಯದ ಕತೆ ಏನಾಗಿದೆ ಎಂದು ಹೇಳುತ್ತೇನೆ ಕೇಳಿ' ಎಂದು ರಾಜ್ಯದಲ್ಲಿ ಸಾಲಮನ್ನಾ ಯೋಜನೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರು.
48 ಸಾವಿರ ಕೋಟಿ ಸಾಲಮನ್ನಾ ಮಾಡುತ್ತೇವೆ ಎಂದು ಅವರು ಹೇಳಿದ್ದರು ಆದರೆ ಈ ವರೆಗೆ ಕೇವಲ 7000 ರೈತರ ಸಾಲ ಮನ್ನಾ ಆಗಿದೆ ಎಂದು ಮೋದಿ, ರಾಜ್ಯದಲ್ಲಿನ ರೈತರ ಸಾಲಮನ್ನಾ ಯೋಜನೆಯನ್ನು ಟೀಕಿಸಿದರು.

ಮೋದಿ ಅವರು ಮಾತನಾಡುವಾಗ ದೇವೇಗೌಡರು ಗಂಭೀರವಾಗಿ ಕೂತಿದ್ದರು. ಖರ್ಗೆ ಅವರು ತಾವು ಕೂತಿದ್ದ ಜಾಗದಿಂದಲೇ ಮೋದಿ ಅವರಿಗೆ ಉತ್ತರ ನೀಡಲು ಯತ್ನಿಸಿದರು ಆದರೆ ದೇವೇಗೌಡ ಅವರು ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಸಂಸತ್ ಕಲಾಪ ಮುಗಿದ ನಂತರ ಈಗ ಟ್ವಿಟ್ಟರ್ನಲ್ಲಿ ದೇವೇಗೌಡ ಅವರು ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.
ನಾವು ಕೊಟ್ಟಿದ್ದ ಭರವಸೆ ರೈತರ ಸಾಲಮನ್ನಾ; ಅದು ಜಾರಿಯಲ್ಲಿದೆ. ಆದರೆ ಮೋದಿ ಭರವಸೆ ನೀಡಿದ್ದ ರಾಮ ಮಂದಿರ ನಿರ್ಮಾಣ, ಸ್ವಚ್ಛ ಗಂಗಾ, ಖಾತೆಗೆ 15 ಲಕ್ಷ ಭರವಸೆಗಳು ಇನ್ನೂ ಈಡೇರಿಲ್ಲ. ಭರವಸೆ ಈಡೇರಿಸದೇ ಇರುವುದಕ್ಕಿಂತಲೂ ಜಾರಿಯಲ್ಲಿರುವುದು ಉತ್ತಮ ಅಲ್ಲವೇ ಎಂದು ದೇವೇಗೌಡ ಅವರು ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಜಾರಿಯಲ್ಲಿರುವ ಒಂದೇ ಕಾರ್ಯವೆಂದರೆ 'ಆಪರೇಷನ್ ಕಮಲ' ಮಾತ್ರ. ಅದನ್ನು ಅವರು ಕರ್ನಾಟಕದಲ್ಲಿ ಬಳಸುತ್ತಿದ್ದಾರೆ ಎಂದು ದೇವೇಗೌಡ ಅವರು ವ್ಯಂಗ್ಯ ಮಾಡಿದ್ದಾರೆ.












Click it and Unblock the Notifications