ಸೌರಾಷ್ಟ್ರದ ವಜುಭಾಯಿ ಕರ್ನಾಟಕದ ಪ್ರಥಮ ಪ್ರಜೆ
ಗುಜರಾತಿನ ಮಾಜಿ ಸ್ಪೀಕರ್ ವಜುಭಾಯಿ ರುಡವಾಲಾ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಸೌರಾಷ್ಟ್ರ ಮೂಲದ ವಜುಭಾಯಿ ಅವರು ಬಿಜೆಪಿಯ ಹಿರಿಯ ಮುಖಂಡರಾಗಿ ಅನೇಕ ವರ್ಷ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ನಿಯೋಜಿತ ರಾಜ್ಯಪಾಲ ವಜುಭಾಯಿ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ...
ಕೇಂದ್ರ ಸರ್ಕಾರ ಮಂಗಳವಾರ (ಆ.26) ನಾಲ್ಕು ರಾಜ್ಯಗಳ ರಾಜ್ಯಪಾಲರ ನೇಮಕ ಪಟ್ಟಿಯನ್ನು ಪ್ರಕಟಿಸಿದೆ. ಈ ಹಿಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವಧಿ ಮುಗಿದ ನಂತರ ತಮಿಳುನಾಡು ರಾಜ್ಯಪಾಲ ರೋಸಯ್ಯ ಅವರಿಗೆ ರಾಜ್ಯದ ಹೆಚ್ಚುವರಿ ಹೊಣೆಯನ್ನು ನೀಡಲಾಗಿತ್ತು. ಹಂಗಾಮಿ ರಾಜ್ಯಪಾಲರಾಗಿ ರೋಸಯ್ಯ ಕಾರ್ಯನಿರ್ವಹಿಸುತ್ತಿದ್ದರು. [ಕರ್ನಾಟಕಕ್ಕೆ ನೂತನ ರಾಜ್ಯಪಾಲರ ನೇಮಕ]
ಪ್ರಧಾನಿ ನರೇಂದ್ರ ಮೋದಿ ಅವರ ಊರಿನ ಹಿರಿಯ ರಾಜಕಾರಣಿ ವಜುಭಾಯಿ ಅವರನ್ನು ಕರ್ನಾಟಕದ ಪ್ರಥಮ ಪ್ರಜೆಯಾಗಿ ಆಯ್ಕೆ ಮಾಡಲಾಗಿದೆ. ಗುಜರಾತಿನಲ್ಲಿ ಸ್ಪೀಕರ್, ವಿತ್ತ ಸಚಿವ, ಕಾರ್ಮಿಕ ಮತ್ತು ಉದ್ಯೋಗ, ರಾಜ್ ಕೋಟ್ ನ ಮೇಯರ್, ಶಾಸಕರಾಗಿ ವಜುಭಾಯಿ ಕಾರ್ಯನಿರ್ವಹಿಸಿದ್ದಾರೆ. ಗುಜರಾತಿನ ಗಾಂಧಿನಗರದ ಬಂಗಲೆಯಿಂದ ಕರ್ನಾಟಕ ರಾಜಭವನಕ್ಕೆ ಯಾವಾಗ ಬರುತ್ತಾರೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ವಜುಭಾಯಿ ಅವರ ಸಂಕ್ಷಿಪ್ತ ಪರಿಚಯ ನಿಮ್ಮ ಮುಂದೆ...

ವಜುಭಾಯಿ ಸಂಕ್ಷಿಪ್ತ ಪರಿಚಯ
ಹುಟ್ಟಿದ ದಿನಾಂಕ : 23/08/1938
ವಿದ್ಯಾರ್ಹತೆ : ಬಿಎಸ್ ಸಿ, ಎಲ್ ಎಲ್ ಬಿ
ಇಬ್ಬರು ಪುತ್ರಿಯರು, ಇಬ್ಬರು ಪುತ್ರರು ಹಾಗೂ ಐವರು ಮೊಮ್ಮಕ್ಕಳು ವಜುಭಾಯಿ ಹೊಂದಿದ್ದಾರೆ.

ವೃತ್ತಿ, ರಾಜಕೀಯ ಜೀವನ ಪರಿಚಯ
* 1971-90: ರಾಜಕೋಟ್ ನಾಗರಿಕ ಸಹಕಾರಿ ಬ್ಯಾಂಕ್ ನಿರ್ದೇಶಕ
* 1975-76, 1981-82, 1987-90: ರಾಜಕೋಟ್ ನಾಗರಿಕ ಸಹಕಾರಿ ಬ್ಯಾಂಕ್ ಚೇರ್ಮನ್
* 1975-93: ರಾಜಕೋಟ್ ಮುನ್ಸಿಪಾಲ್ ಕೌನ್ಸಿಲರ್
* 1983-88, 1991-93: ರಾಜಕೋಟ್ ನಗರದ ಮೇಯರ್
* 1985-2001, 2002 ಇಲ್ಲಿತನಕ: ರಾಜಕೋಟ್ ನ ಶಾಸಕ.
* 1990 : ಗುಜರಾತ್ ನಲ್ಲಿ ನಗರಾಭಿವೃದ್ಧಿ ಸಚಿವ
* 1995- 1996 : ಇಂಧನ, ಸಹಕಾರಿ, ಪೆಟ್ರೋಲಿಯಂ ಸಚಿವ
* 1996-97: ವಿತ್ತ ಹಾಗೂ ಇಂಧನ ಸಚಿವ
* 1998-2001: ವಿತ್ತ ಹಾಗೂ ಕಂದಾಯ ಸಚಿವ
* 2002-2005, 2006-07: ವಿತ್ತ ಸಚಿವ
* 2008-2012: ವಿತ್ತ, ಉದ್ಯೋಗ, ಕಾರ್ಮಿಕ, ಸಾರಿಗೆ ಸಚಿವ
* 2012-2013-ಈ ದಿನದ ವರೆಗೂ : ಗುಜರಾತ್ ಅಸೆಂಬ್ಲಿ ಸ್ಪೀಕರ್
* 1996-98 ಹಾಗೂ 2005-06 : ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ

ಆರೆಸ್ಸೆಸ್ ನ ನಿಷ್ಠಾವಂತ ಸೇವಕ
ಆರೆಸ್ಸೆಸ್ ನ ನಿಷ್ಠಾವಂತ ಸ್ವಯಂ ಸೇವಕರಾಗಿ ವಜುಭಾಯಿ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡರು. ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವದ ಗುಣ ಹೊಂದಿದ್ದರು. ಸಹಪಾಠಿಗಳ ನಡುವೆ ಉಂಟಾಗುವ ಸಣ್ಣ ಪುಟ್ಟ ಜಗಳನ್ನು ಸುಲಭವಾಗಿ ಬಗೆಹರಿಸುತ್ತಿದ್ದರು ಎನ್ನಲಾಗಿದೆ.
ಗುಜರಾತಿನ ಸಹಕಾರಿ ಕ್ಷೇತ್ರದಲ್ಲಿ ವಜುಭಾಯಿ ಅವರದ್ದು ದೊಡ್ಡ ಹೆಸರು. ಸೌಮ್ಯ ಸ್ವಭಾವದ ವಜುಭಾಯಿ ಅವರು ಸಮಾಜದ ಎಲ್ಲಾ ವರ್ಗದವರಿಗೂ ಉತ್ತಮ ಬದುಕು ಕಟ್ಟಿಕೊಳ್ಳುವ ಸೌಲಭ್ಯ ಒದಗಿಸುವುದು ಮುಖ್ಯ ಎಂದು ನಂಬಿದವರು.
ಗುಜರಾತಿನಲ್ಲಿ ಕಾಣಲಾಗುವ ಅಭಿವೃದ್ಧಿಪಥ ಸೃಷ್ಟಿಗೆ ಅಗತ್ಯವಾದ ಹಣಕಾಸು ಒದಗಿಸಿ ಆಯವ್ಯಯ ನಿರ್ವಹಣೆ ಮಾಡಿದ್ದು ವಜುಭಾಯಿ ಅವರ ಸಾಧನೆ.

ಶ್ರೇಷ್ಠ ನಾಗರಿಕ ಪ್ರಶಸ್ತಿ ವಿಜೇತ
* 2006ರಲ್ಲಿ ದೆಹಲಿಯಿಂದ ಇಂಟರ್ ನ್ಯಾಷನಲ್ ಪಬ್ಲಿಷಿಂಗ್ ಹೌಸ್ ನಿಂದ 'ಭಾರತದ ಶ್ರೇಷ್ಠ ನಾಗರಿಕ' ಪ್ರಶಸ್ತಿ ಪಡೆದುಕೊಂಡಿದ್ದಾರೆ.
* 2007ರಲ್ಲಿ ಇಂಟರ್ ನ್ಯಾಷನಲ್ ಫ್ರೆಂಡ್ ಶಿಪ್ ಸೊಸೈಟಿಯಿಂದ ಭಾರತ್ ಗೌರವ್ ಪ್ರಶಸ್ತಿ ಗಳಿಸಿದರು.
* ಗುಜರಾತಿನ ಆರ್ಥಿಕ ಭದ್ರತೆ, ಬಿಜೆಪಿ ಪ್ರಣಾಳಿಕೆ ರಚನೆಯಲ್ಲಿ ವಜುಭಾಯಿ ಅವರ ಪಾತ್ರ ಹಿರಿದಾಗಿದೆ.
* ವಜುಭಾಯಿ ಅವರೊಬ್ಬ ಪುಸ್ತಕ ಪ್ರೇಮಿಯಾಗಿರುವುದರಿಂದ ಭಾಷೆ ಮೇಲೆ ಒಳ್ಳೆ ಹಿಡಿತವಿದೆ. ಜನರ ಜೊತೆ ಸ್ನೇಹಪರವಾಗಿ ಮಾತನಾಡುವ ಕಲೆ ಅಭ್ಯಾಸವಾಗಿದೆ.












Click it and Unblock the Notifications