DK Shivakumar: ಫೆಬ್ರವರಿಯಲ್ಲಿ ಸಂಪುಟ ವಿಸ್ತರಣೆ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 02: ನಾನು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಹೊರತು, ಮುಖ್ಯಮಂತ್ರಿಯಲ್ಲ. ಸಧ್ಯಕ್ಕೆ ಈ ಬಗ್ಗೆ ಚರ್ಚೆ ಇಲ್ಲ. ಅದರ ಅವಶ್ಯಕತೆಯೂ ಇಲ್ಲ. ಸಧ್ಯದಲ್ಲೇ ಅಧಿವೇಶನವಿದೆ. ಒಂದು ಸಚಿವ ಸ್ಥಾನ ಮಾತ್ರ ಬಾಕಿ ಇದೆ. ಈ ಬಗ್ಗೆ ಸಿಎಂ ಉತ್ತರ ನೀಡಿದ್ದಾರೆ. ಬೇರೆ ಯಾವುದೇ ಸ್ಥಾನ ಖಾಲಿ ಇಲ್ಲ ಎನ್ನುವ ಮೂಲಕ ಫೆಬ್ರವರಿಯಲ್ಲಿ ಸಂಪುಟ ವಿಸ್ತರಣೆಯ ಸುಳಿವನ್ನು ಡಿ ಕೆ ಶಿವಕುಮಾರ್ ನೀಡಿದ್ದಾರೆ.
ಕೆಲ ಸಚಿವರು ಈ ಸಮಾವೇಶಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದು, ಈಗ ಸಮಾವೇಶದ ಸ್ವರೂಪ ಬದಲಾಗಿದ್ದು ಏಕೆ ಎನ್ನುವ ಕುರಿತು ಮಾತನಾಡಿ, ಈ ಸಮಾವೇಶದ ಸ್ವರೂಪ ಎಲ್ಲಿ ನಿರ್ಧಾರವಾಗಿತ್ತು? ಪಕ್ಷದ ಅಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳೇ ಹೊರತು ಮೈತ್ರಿ ಪಕ್ಷದ ಸಿಎಂ ಅಲ್ಲ. ಇಲ್ಲಿ ಒಂದೇ ಪಕ್ಷ, ಒಂದೇ ಚಿಹ್ನೆ ಇದೆ. ಕೆಲವರ ವೈಯಕ್ತಿಕ ಅಭಿಪ್ರಾಯವೇ ಬೇರೆ. ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜತೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಕೆಲ ಸಚಿವರು ಮೈಸೂರು ಜಿಲ್ಲಾಧ್ಯಕ್ಷರ ಜತೆ ಪ್ರತ್ಯೇಕ ಸಭೆ ಮಾಡುತ್ತಿರುವ ಕುರಿತು ಮಾತನಾಡಿ, ಕೊನೆ ಘಳಿಗೆಯಲ್ಲಿ ಈ ಸಭೆ ತೀರ್ಮಾನ ಮಾಡಲಾಗಿದೆ. ನಿನ್ನೆ ದೆಹಲಿಯಿಂದ ಆಗಮಿಸಿ ಮಹಾತ್ಮಾ ಗಾಂಧೀಜಿ ಅವರ ಕಾರ್ಯಕ್ರಮದ ಸಭೆ ಮಾಡಿದ್ದೇನೆ. ನಮ್ಮ ಬಳಿ ಅನುಮತಿ ಪಡೆದೆ ಆ ನಾಯಕರು ಮೈಸೂರಿನಲ್ಲಿ ಸಭೆ ಮಾಡುತ್ತಿದ್ದಾರೆ. ನೀವುಗಳು (ಮಾಧ್ಯಮ ಪ್ರತಿನಿಧಿಗಳು) ನಿಮ್ಮ ಮಾಧ್ಯಮ ಸಂಸ್ಥೆಗಳಿಗಿಂತ ಹೇಗೆ ದೊಡ್ಡವರಲ್ಲವೋ, ಹಾಗೆ ನಾವುಗಳು ಪಕ್ಷಕ್ಕಿಂತ ದೊಡ್ಡವರಲ್ಲ. ಎಲ್ಲರಿಗಿಂತ ಪಕ್ಷ ದೊಡ್ಡದು ಎಂದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು.
ಹೈಕಮಾಂಡ್ ಗೆ ಹೋಗಿರುವ ಅನಾಮಧೇಯ ಪತ್ರ ಇಷ್ಟೆಲ್ಲಾ ಕೆಲಸ ಮಾಡಿದೆಯೇ ಎಂದು ಕೇಳಿದಾಗ, "ನನಗೆ ಯಾವ ಪತ್ರದ ಬಗ್ಗೆ ಗೊತ್ತಿಲ್ಲ. ಎಐಸಿಸಿ ಅಧ್ಯಕ್ಷರಿಗೆ ಬರೆಯಯಲಾಗಿದೆ ಎಂಬ ಪತ್ರ ಯಾರ ಸೃಷ್ಟಿಯೋ ಗೊತ್ತಿಲ್ಲ. ಯಾರೂ ಕೂಡ ನನ್ನ ಬಳಿ ಈ ವಿಚಾರವಾಗಿ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.
ಸಚಿವ ಚಲುವರಾಯಸ್ವಾಮಿ ಅವರು ಸಭೆಯಿಂದ ಬೇಗ ನಿರ್ಗಮಿಸಿದರು ಎಂಬ ಕುರಿತು ಮಾತನಾಡಿ, ಅವರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯುತ್ತಿದೆ. ಅವರಿಗೆ ಪೂರ್ವನಿಗದಿತ ಕಾರ್ಯಕ್ರಮ ಇದ್ದ ಕಾರಣ ಅವರು ಬೇಗ ಹೊರಟಿದ್ದಾರೆ. ಈ ಸಭೆಯಲ್ಲಿ ಅವರು ಮೊದಲು ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡು ನಂತರ ತೆರಳಿದ್ದಾರೆ ಎಂದು ತಿಳಿಸಿದರು.
ನಿಮ್ಮ ಮೂಲಕ ಹೈಕಮಾಂಡ್ ಸಚಿವರ ಕಾರ್ಯಗಳ ಬಗ್ಗೆ ವರದಿ ಪಡೆಯುತ್ತಿದೆ ಎಂದು ಕೇಳಿದಾಗ, "ನಾನು ಕಳಿಸುವುದೇನಿಲ್ಲ. ನಮ್ಮ ಹೈಕಮಾಂಡ್ ನಾಯಕರು ಅವರದೇ ಆದ ವ್ಯವಸ್ಥೆ ಹೊಂದಿದ್ದು, ಎಲ್ಲರ ಮಾಹಿತಿ ಪಡೆಯುತ್ತಿದ್ದಾರೆ. ಯಾರು ಯಾವ ಕೆಲಸ ಮಾಡುತ್ತಿದ್ದಾರೆ, ಕಾರ್ಯಕರ್ತರು, ಜನರನ್ನು ಭೇಟಿ ಮಾಡುತ್ತಿದ್ದಾರೆ ಮಾಹಿತಿ ಪಡೆಯುತ್ತಿದ್ದಾರೆ" ಎಂದು ತಿಳಿಸಿದರು.
ಚಂದ್ರಶೇಖರನಾಥ ಸ್ವಾಮೀಜಿ ಅವರ ಮೇಲೆ ಎಫ್ ಐಆರ್ ಆಗಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಉತ್ತರ ನೀಡಿದ್ದಾರೆ. ಸ್ವಾಮೀಜಿಗಳು ಯಾರ ಹಕ್ಕಿನ ಬಗ್ಗೆಯೂ ಪ್ರಶ್ನೆ ಮಾಡುವುದು ಬೇಡ ಎಂದು ಮನವಿ ಮಾಡುತ್ತೇನೆ. ಮಾನವ ಧರ್ಮ ಹಾಗೂ ಸಂವಿಧಾನಕ್ಕೆ ಆದ್ಯತೆ ನೀಡೋಣ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಮೇಲೆ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೋಸ್ಟರ್ ಅಂಟಿಸಿದ್ದಕ್ಕೆ ಕೇಸು ದಾಖಲಿಸಿಲ್ಲವೇ? ಎಂದು ಪ್ರಶ್ನಿಸಿದರು.
ಸ್ವಾಮೀಜಿ ಮೇಲೆ ಕೇಸ್ ದಾಖಲಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಅಶೋಕ ಹೇಳಿದ್ದಾರೆ. ಜೆಡಿಎಸ್ ಸರ್ಕಾರ ಬಾಲಗಂಗಾಧರನಾಥ ಸ್ವಾಮೀಜಿ ಮೇಲೆ ಪ್ರಕರಣ ದಾಖಲಿಸಿದಾಗ ಅಶೋಕ, ಬಿಜೆಪಿ ನಾಯಕರು ಎಲ್ಲಿ ಹೋಗಿದ್ದರು? ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ನಿರ್ಮಲಾನಂದ ಸ್ವಾಮೀಜಿ ಅವರ ಫೋನ್ ಟ್ಯಾಪಿಂಗ್ ಮಾಡಿದಾಗ ಏಕೆ ಮಾತನಾಡಲಿಲ್ಲ? ಈ ಬಗ್ಗೆ ಸಿಬಿಐ ವರದಿ ಇದೆ. ಇದರ ಬಗ್ಗೆ ಗೊತ್ತಿದೆಯೇ? ಅದರ ಬಗ್ಗೆ ಅವರು ಯಾಕೆ ಮಾತನಾಡುತ್ತಿಲ್ಲ. ಸುಮ್ಮನೆ ಒಣ ರಾಜಕಾರಣ ಮಾಡುವುದನ್ನು ನಿಲ್ಲಿಸಲಿ. ಬೆಂಕಿ ಹಚ್ಚಿ ಬೀಡಿ ಸೇದುವ ಪ್ರಯತ್ನ ನಿಲ್ಲಿಸಲಿ ಎಂದು ತಿಳಿಸಿದರು.












Click it and Unblock the Notifications