ಅಲ್ಪಸಂಖ್ಯಾತರ ಪಟ್ಟಿಗೆ ವೀರಶೈವರನ್ನು ಸೇರಿಸಿ
ನವದೆಹಲಿ, ಸೆ.27: ವೀರಶೈವ ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮ ಎಂದು ಪರಿಗಣಿಸಬೇಕು ಮತ್ತು ವಿಶೇಷ ಸ್ಥಾನ ಮಾನ ನೀಡಬೇಕು ಎಂದು ರಾಜ್ಯ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ನೇತೃತ್ವದ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮತ್ತು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ರೆಹಮಾನ್ ಖಾನ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ನಿಯೋಗ ತಮ್ಮ ಅರ್ಜಿ ಸಲ್ಲಿಸಿದೆ.
ವೀರಶೈವ ಪ್ರತ್ಯೇಕ ಧರ್ಮವಾಗಿದ್ದು, ಅದಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಮತ್ತು ಅಲ್ಪಸಂಖ್ಯಾತರ ಪಟ್ಟಿಗೆ ವೀರಶೈವರನ್ನು ಸೇರಿಸಬೇಕು ಎಂದು ಮನವಿ ಮಾಡಿದೆ.
ಶೈಕ್ಷಣಿಕ, ಉದ್ಯೋಗ ಮೀಸಲಾತಿ ಸೇರಿ ಅಲ್ಪಸಂಖ್ಯಾತರಿಗೆ ನೀಡುವ ಸೌಲಭ್ಯ ಒದಗಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೋರಿದೆ. ನಿಯೋಗವು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡಿದೆ. ಕಾಂಗ್ರೆಸ್ ಮುಖಂಡರಾದ ಭೀಮಣ್ಣ ಖಂಡ್ರೆ, ಕೆ.ಸಿ. ಕೊಂಡಯ್ಯ, ಆರ್.ಎಸ್. ಪಾಟೀಲ್, ಈಶ್ವರ ಖಂಡ್ರೆ ಮತ್ತಿತರರು ಇದ್ದರು ಎಂದು ತಿಳಿದು ಬಂದಿದೆ.

ವೀರಶೈವರು ಹಿಂದೂಗಳಲ್ಲ: ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳಂತೆ ವೀರಶೈವವೂ ಒಂದು ಧರ್ಮವಾಗಿದ್ದು, ಹಿಂದೂ ಸಮಾಜದ ಭಾಗವಾಗಿಲ್ಲ ಎಂಉ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಎನ್ ತಿಪ್ಪಣ್ಣ ಪ್ರತಿಪಾದಿಸಿದ್ದಾರೆ.
ವೀರಶೈವ ಧರ್ಮ ಹಿಂದೂ ಧರ್ಮವನ್ನು ವಿರೋಧಿಸಿ ಹುಟ್ಟಿದ ಧರ್ಮ, ಸಮಾಜದ ನಾಲ್ಕು ವರ್ಣಗಳಲ್ಲಿ ಕಡೆಯ ವರ್ಣಕ್ಕೆ ನಮ್ಮನ್ನು ಸೇರಿಸಲಾಗಿತ್ತು. ಇದನ್ನು ವಿರೋಧಿಸಿದ ಬಸವಣ್ಣ ಅವರು ಪ್ರತ್ಯೇಕವಾಗಿ ವೀರಶೈವ ಧರ್ಮ ಸ್ಥಾಪಿಸಿದರು.
ವೀರಶೈವ-ಲಿಂಗಾಯತ ಎಂಬ ಭಿನ್ನ ಮಾಡಬೇಡಿ, ಗುರು-ವಿರಕ್ತರಲ್ಲಿ ಭೇದ ಮಾದಬೇಡಿ. ನಮ್ಮಲ್ಲಿನ ಒಳಪಂಗಡಗಳು ಒಂದಾಗುವ ಅಗತ್ಯವಿದೆ. ಒಳಪಂಗಡಗಳು ಹೆಚ್ಚಿರುವುದರಿಂದ ಗೊಂದಲ ಹೆಚ್ಚಾಗಿದೆ ಅಷ್ಟೇ ಎಂದು ತಿಪ್ಪಣ್ಣ ಹೇಳಿದ್ದಾರೆ.
'ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸುಮಾರು 4 ಕೋಟಿಗೂ ಹೆಚ್ಚು ವೀರಶೈವ ಸಮುದಾಯದವರಿದ್ದಾರೆ. ರಾಷ್ಟ್ರದ ಇತರೆ 6 ಧರ್ಮಗಳಂತೆಯೇ ವೀರಶೈವ-ಲಿಂಗಾಯತ ಧರ್ಮವನ್ನೂ ಪ್ರತ್ಯೇಕ ಸ್ವತಂತ್ರ ಧರ್ಮವೆಂದು ಘೋಷಣೆ ಮಾಡಬೇಕು. ಅಲ್ಲದೆ ಜನಗಣತಿಯ ಫಾರಂನಲ್ಲಿ ಒಂದು ಪ್ರತ್ಯೇಕ ಕೋಡ್ ನಂಬರ್ ನೀಡಬೇಕು' ಎಂದು ಕಳೆದ ಜುಲೈನಲ್ಲಿ ನಡೆದ ವೀರಶೈವ-ಲಿಂಗಾಯತ ಸಮುದಾಯದ ಮಹಾಸಭೆಯಲ್ಲಿ ಸರ್ವಾನುಮತದ ಅಂಗೀಕಾರ ಸ್ವೀಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications