ಮೈಸೂರಿಗೆ ಮತ್ತೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗಾಗಿ ಬೇಡಿಕೆ
ಬೆಂಗಳೂರು, ನವೆಂಬರ್ 23; ದೇಶದ ಐದನೇ ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಚಾಲನೆ ನೀಡಿದ್ದರು. ಈ ರೈಲು ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಚೆನ್ನೈ-ಬೆಂಗಳೂರು-ಮೈಸೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. ಇದು ಕರ್ನಾಟಕದ ಮೊದಲ ವಂದೇ ಭಾರತ್ ರೈಲಾಗಿದೆ. ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿಯೂ ರೈಲು ಸಂಚಾರ ಆರಂಭಿಸಲು ಈಗಾಗಲೇ ರೈಲ್ವೆ ಇಲಾಖೆ ಮುಂದಾಗಿದೆ.
ಶತಾಬ್ದಿ, ವಂದೇ ಭಾರತ್ ರೈಲು; ವೇಳಾಪಟ್ಟಿ ಬದಲಿಸಲು ಆಗ್ರಹ
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ, "ಇದು ಕೈಗಾರಿಕಾ ಕೇಂದ್ರ ಚೆನ್ನೈ, ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್ ಕೇಂದ್ರ ಬೆಂಗಳೂರು ಮತ್ತು ಪ್ರಸಿದ್ಧ ಪ್ರವಾಸಿ ನಗರವಾದ ಮೈಸೂರಿನ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ" ಎಂದು ಟ್ವೀಟ್ ಮಾಡಿದ್ದರು.
Vande Bharat; ಹುಬ್ಬಳ್ಳಿ, ಬೆಂಗಳೂರು ನಡುವೆ ಮಾರ್ಚ್ನಲ್ಲಿ ಸಂಚಾರ
ಕರ್ನಾಟಕದ ಪಕ್ಕದ ರಾಜ್ಯವಾದ ತೆಲಂಗಾಣದ ಹೈದರಾಬಾದ್ಗೆ ಏಕೆ ಇನ್ನೂ ವಂದೇ ಭಾರತ್ ರೈಲಿನ ಸಂಪರ್ಕ ಕಲ್ಪಿಸಿಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ಹೈದರಾಬಾದ್-ವಿಜಯವಾಡ ಮಾರ್ಗದಲ್ಲಿ ರೈಲು ಓಡಿಸಲು ಕೇಂದ್ರವೇ ಘೋಷಣೆ ಮಾಡಿತ್ತು. ಆದರೆ ನಾನಾ ಕಾರಣದಿಂದ ಇದು ವಿಳಂಬವಾಗುತ್ತಿದೆ. ಹೈದರಾಬಾದ್ನಿಂದ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು ಬರಬೇಕು ಎಂಬ ಬೇಡಿಕೆ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ಚೆನ್ನೈ-ಮೈಸೂರು ಮಾರ್ಗದ ಸಮಯ, ನಿಲ್ದಾಣಗಳ ವಿವರಗಳು
ಮೈಸೂರಿಗೆ ಮತ್ತೊಂದು ರೈಲು ಬೇಕು
ತಮಿಳುನಾಡು ರಾಜಧಾನಿ ಚೆನ್ನೈನಿಂದ ಬೆಂಗಳೂರು-ಮೈಸೂರು ಮಾರ್ಗವಾಗಿ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಈಗ ತೆಲಂಗಾಣದ ಹೈದರಾಬಾದ್ನಿಂದ ಮೈಸೂರಿಗೆ ಇಂತಹ ರೈಲು ಸೇವೆ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿದೆ. ರೈಲು ಬಳಕೆದಾರರ ಫೇಸ್ಬುಕ್ ಖಾತೆಗಳಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿವೆ.
ಈ ಹಿಂದೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೈದರಾಬಾದ್-ತಿರುಪತಿ ಅಥವ ಹೈದರಾಬಾದ್-ವಿಶಾಖಪಟ್ಟಣಂ ವಯಾ ವಿಜಯವಾಡ ನಡುವೆ ವಂದೇ ಭಾರತ್ ರೈಲು ಆರಂಭಿಸುವ ಭರವಸೆ ನೀಡಿದ್ದರು. ಆದರೆ ಯಾವುದೇ ರೈಲು ಸೇವೆ ಇದುವರೆಗೆ ಆರಂಭವಾಗಿಲ್ಲ.
ಮೈಸೂರು-ಹೈದರಾಬಾದ್ ಏಕೆ?
ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಯಂತೆ ಹೈದರಾಬಾದ್-ಬೆಂಗಳೂರು-ಮೈಸೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆರಂಭಿಸಬೇಕು. ಹೈದರಾಬಾದ್ ಐಟಿ ಉದ್ಯಮ, ಪ್ರವಾಸೋದ್ಯಮಕ್ಕೆ ಪ್ರಸಿದ್ಧಿಯಾಗಿದೆ. ಅದೇ ರೀತಿ ಬೆಂಗಳೂರು ಮತ್ತು ಮೈಸೂರು ಸಹ ಐಟಿ ವಲಯದಲ್ಲಿ ಪ್ರಸಿದ್ಧಿ ಪಡೆದಿವೆ. ಮೈಸೂರು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಮೈಸೂರು-ಹೈದರಾಬಾದ್ ನಡುವೆ ಹಲವಾರು ಜನರು ಸಹ ಸಂಚಾರ ನಡೆಸುತ್ತಾರೆ. ಆದ್ದರಿಂದ ಈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಬೇಕು ಎಂಬುದು ಬೇಡಿಕೆಯಾಗಿದೆ. ಈ ಬೇಡಿಕೆಗೆ ರೈಲ್ವೆ ಇಲಾಖೆ ಒಪ್ಪಿದರೆ ಬೆಂಗಳೂರು, ಮೈಸೂರಿಗೆ ಎರಡನೇ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ.
ಬುಲೆಟ್ ರೈಲು ಘೋಷಣೆ ಮಾಡಿರುವ ಸರ್ಕಾರ
ಕೇಂದ್ರ ಸರ್ಕಾರ ಹೈದರಾಬಾದ್ಗೆ ಬುಲೆಟ್ ರೈಲು ಯೋಜನೆ ಘೋಷಣೆ ಮಾಡಿತ್ತು. ರಾಷ್ಟ್ರೀಯ ರೈಲು ಯೋಜನೆ (ಎನ್ಆರ್ಪಿ) ಅಡಿ ಮುಂಬೈ-ಪುಣೆ-ಹೈದರಾಬಾದ್ ನಡುವಿನ ಬುಲೆಟ್ ರೈಲು ಯೋಜನೆಗೆ ಡಿಪಿಆರ್ ರಚನೆ ಮಾಡಲು ಟೆಂಡರ್ ಸಹ ಕರೆಯಲಾಗಿತ್ತು. ಆದರೆ ಕೆಲವು ದಿನಗಳ ಹಿಂದೆ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ರೈಲ್ವೆ ಸಚಿವರು ಹೈದರಾಬಾದ್ಗೆ ವಂದೇ ಭಾರತ್ 2.0 ರೈಲು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದರು.
ರಾಷ್ಟ್ರೀಯ ರೈಲು ಯೋಜನೆ (ಎನ್ಆರ್ಪಿ) ಅಡಿಯಲ್ಲಿ ಹೈದರಾಬಾದ್-ಬೆಂಗಳೂರು ನಡುವೆ ಕಾರಿಡಾರ್ ನಿರ್ಮಾಣ ಮಾಡುವ ಪ್ರಸ್ತಾವನೆಯೂ ರೈಲ್ವೆ ಇಲಾಖೆ ಮುಂದಿದೆ. ಉಭಯ ನಗರಗಳ ನಡುವೆ ಒಂದು ವೇಳೆ ವಂದೇ ಭಾರತ್ ರೈಲು ಓಡಿಸಲು ಸಹ ಇಲಾಖೆ ಒಪ್ಪಿಗೆ ನೀಡಲಿದೆಯೇ?. ಆ ರೈಲನ್ನು ಮೈಸೂರು ತನಕ ವಿಸ್ತರಣೆ ಮಾಡಲಾಗುತ್ತದೆಯೇ ಎಂದು ಕಾದು ನೋಡಬೇಕಿದೆ.
ಕರ್ನಾಟಕದ 2ನೇ ವಂದೇ ಭಾರತ್ ರೈಲು
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವಾರ ಕರ್ನಾಟಕದ ವಿವಿಧ ರೈಲ್ವೆ ಸಂಬಂಧಿತ ಅಭಿವೃದ್ಧಿ ಯೋಜನೆಗಳ ಪರಿಶೀಲನಾ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಕರ್ನಾಟಕದ 2ನೇ ವಂದೇ ಭಾರತ್ ರೈಲು ಯೋಜನೆ ಬಗ್ಗೆ ಸಚಿವರು ಮಾತನಾಡಿದ್ದಾರೆ.
"ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಜೋಡಿಮಾರ್ಗ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಎರಡು ನಗರಗಳ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ಓಡಿಸಲು ಯೋಜಿಸಲಾಗಿದೆ" ಎಂದು ಸಚಿವರು ತಿಳಿಸಿದರು. ಕೇಂದ್ರ ರೈಲ್ವೆ ಸಚಿವಾಲಯ ಸಹ ನೈಋತ್ಯ ರೈಲ್ವೆಯ ಬಳಿ ಬೆಂಗಳೂರು-ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲು ಸಂಚಾರಕ್ಕೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪಡೆದಿದೆ.
ಮಾರ್ಚ್ 2023ರೊಳಗೆ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಈ ಮಾರ್ಗದಲ್ಲಿ ಓಡಿಸಲು ಅನುಕೂಲವಾಗುವಂತೆ ವಿದ್ಯುದ್ದೀಕರಣ ಸಂಬಂಧಿಸಿದ ಕೆಲವು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೆಪಿಟಿಸಿಎಲ್ಗೆ ಸಹ ಸೂಚಿಸಲಾಗಿದೆ.
ವಂದೇ ಭಾರತ್ 2.0 ಸುಧಾರಿತ ರೈಲು
ಪ್ರಧಾನಮಂತ್ರಿ ನರೇಂದ್ರ ಮೋದಿ ನವೆಂಬರ್ 11ರಂದು ಬೆಂಗಳೂರಿನಲ್ಲಿ ದೇಶದ 5ನೇ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ವಂದೇ ಭಾರತ್ 2.0 ಸುಧಾರಿತ ಅವೃತ್ತಿಯ ರೈಲು ಇದಾಗಿದೆ. ಈ ರೈಲು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 0 ಯಿಂದ 100 ಕಿಲೋಮೀಟರ್ಗಳ ವೇಗವನ್ನು ಮತ್ತು ಗಂಟೆಗೆ 180 ಕಿಲೋಮೀಟರ್ಗಳವರೆಗೆ ಗರಿಷ್ಠ ವೇಗವನ್ನು ತಲುಪುವಂತಹ ಸುಧಾರಿತ ವ್ಯವಸ್ಥೆಗಳನ್ನು ಹೊಂದಿದೆ.
ಹಿಂದಿನ ಮಾದರಿಗಿಂತ ಅತ್ಯಾಧುನಿಕ ಸೌಲಭ್ಯಗಳು ಈ ರೈಲುಗಳಲ್ಲಿ ಇವೆ. ಇದು ವೈ-ಫೈ ಕಂಟೆಂಟ್ ಆನ್ ಡಿಮ್ಯಾಂಡ್ ಸೌಲಭ್ಯವನ್ನೂ ಹೊಂದಿದೆ. ಪ್ರಯಾಣಿಕರಿಗೆ ಮಾಹಿತಿ ಮತ್ತು ಮನರಂಜನೆ ಒದಗಿಸಲು ಪ್ರತಿ ಬೋಗಿಯಲ್ಲಿ 32 ಇಂಚಿನ ಟಿವಿ ಪರದೆಗಳು ಇವೆ. ಹಿಂದಿನ ಆವೃತ್ತಿಯು 24 ಇಂಚು ಪರದೆ ಹೊಂದಿತ್ತು. ಸದ್ಯ ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುತ್ತಿರುವ ರೈಲಿಗೆ ಉತ್ತಮ ಸ್ಪಂದನೆಯೂ ಸಿಕ್ಕಿದೆ.