BREAKING: ಕೇಜ್ರಿವಾಲ್ ಮತ್ತೆ ಸಿಎಂ ಆಗಬೇಕೆಂದು ಮತ ನೀಡಿದ್ದಾರೆ: ಕರ್ನಾಟಕ ಬಿಜೆಪಿ
ಬೆಂಗಳೂರು, ಫೆ. 12: ದೆಹಲಿಯಲ್ಲಿ ಕೇಜ್ರಿವಾಲ್ ಮತ್ತೆ ಸಿಎಂ ಆಗಬೇಕು ಎಂದು ಜನ ಮತ ನೀಡಿದ್ದಾರೆ ಎಂದು ಕರ್ನಾಟಕ ಬಿಜೆಪಿ ಅಭಿಪ್ರಾಯ ಪಟ್ಟಿದೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ದೆಹಲಿ ವಿಧಾನಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ದೆಹಲಿಯಲ್ಲಿ ಕೇಜ್ರಿವಾಲ್ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಜನ ಮತ ನೀಡಿದ್ದಾರೆ. ಅವರು ಒಳ್ಳೆಯ ಸರ್ಕಾರ ನೀಡಲಿ. ಸಿದ್ದರಾಮಯ್ಯ ಅವರು ಬಹಳ ಖುಷಿ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಅವರಿಬ್ಬರಿಗೂ ಹೇಳುತ್ತೇನೆ, ನಮ್ಮ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಯುವಕರನ್ನು ನಾಚಿಸುವಂತೆ ಕೆಲಸ ಮಾಡುತ್ತಿದ್ದಾರೆ' ಎಂದು ರವಿಕುಮಾರ್ ಹೇಳಿದ್ದಾರೆ.
''ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರವನ್ನು 'ದಾರಿದ್ರ್ಯದ ಸರ್ಕಾರ' ಎಂದಿದ್ದಾರೆ. ಯಡಿಯೂರಪ್ಪ ಅವರದ್ದು ದಾರಿದ್ರ್ಯ ಸರ್ಕಾರ ಅಲ್ಲ, ರೈತ ಪರ ಸರ್ಕಾರ. ಸಿದ್ದರಾಮಯ್ಯರ ಮಾತು ಅವರ ಮಾನಸಿಕ ಸ್ಥಿತಿ ತೋರಿಸುತ್ತೆ. ದೆಹಲಿಯಲ್ಲಿ ಒಂದೂ ಸ್ಥಾನ ಗೆಲ್ಲದ ಕಾಂಗ್ರೆಸ್ ನಾಯಕರು ಖುಷಿಯಿಂದ ಇದ್ದಾರೆ. ಅದಕ್ಕೆ ಹೇಳೋದು ಅವರ ಸ್ವಾಭಿಮಾನ ಶೂನ್ಯ ಎಂದು. ದೆಹಲಿಯಲ್ಲಿ ಕಳೆದ ಬಾರಿಗಿಂತ ಶೇಕಡಾವಾರು ಹೆಚ್ಚು ಮತಗಳು ಬಿಜೆಪಿಗೆ ಬಂದಿವೆ. ಕಳೆದ ಬಾರಿ ಬಿಜೆಪಿಗೆ ಶೇಕಡಾ 32.3ರಷ್ಟು ಮತಗಳು ಬಂದಿದ್ದವು, ಈ ಬಾರಿ ಶೇಕಡಾ 38.41 ರಷ್ಟು ಮಗತಳು ಬಂದಿವೆ. ದೆಹಲಿಯಲ್ಲಿ ಸತತ ಮೂರು ಚುನಾವಣೆಗಳಲ್ಲಿ ಬಿಜೆಪಿ ಮತ ಗಳಿಕೆ ಹೆಚ್ಚುತ್ತಲೆ ಇದೆ',

''ಕಾಂಗ್ರೆಸ್ ಅಧಃಪತನಕ್ಕೆ ಹೋಗುತ್ತಿದೆ, 130 ವರ್ಷಗಳ ಇತಿಹಾಸವಿರುವ ಪಕ್ಷ ದಿವಾಳಿ ಅಂಚಿಗೆ ಸಾಗುತ್ತಿದೆ. ಕಾಂಗ್ರೆಸ್ ದೆಹಲಿಯಲ್ಲಿ ಒಂದೇ ಒಂದು ಸ್ಥಾನವನ್ನು ಗೆದ್ದಿಲ್ಲ 67 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಬಿಟ್ಟು ಕಾಂಗ್ರೆಸ್ ನಾಯಕರು ಸಂತೋಷ ಪಡುತ್ತಿದ್ದಾರೆ.ಇದು ಕಾಂಗ್ರೆಸ್ ಪಕ್ಷದವರ ಮಾನಸಿಕ ದಾರಿದ್ರ್ಯದ ದ್ಯೋತಕ'' ಎಂದು ಎನ್. ರವಿಕುಮಾರ್ ಲೇವಡಿ ಮಾಡಿದ್ದಾರೆ.












Click it and Unblock the Notifications