ಗೃಹ ಸಚಿವ ಅಮಿತ್ ಶಾ ಅಸಮರ್ಥತೆಯಿಂದ ದೆಹಲಿಯಲ್ಲಿ ಸ್ಫೋಟ: ಹರಿಪ್ರಸಾದ್
ದೆಹಲಿಯಲ್ಲಿ ನಡೆದ ಕಾರ್ ಸ್ಫೋಟದ ಕ್ರೂರ ಘಟನೆ ರಾಷ್ಟ್ರದ ಭದ್ರತೆಗೆ ಎದುರಾದ ಗಂಭೀರ ಸವಾಲು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಕಳವಳ ವ್ಯಕ್ತಪಡಿಸಿದ್ದಾರೆ. ಅಮಾಯಕ ನಾಗರಿಕರ ಪ್ರಾಣ ಕಸಿದುಕೊಂಡ ಈ ಭಯಾನಕ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ರಾಷ್ಟ್ರದ ರಾಜಧಾನಿಯಲ್ಲೇ ಇಂತಹ ಕೃತ್ಯ ನಡೆದಿರುವುದು ಸರ್ಕಾರದ ಭದ್ರತಾ ವ್ಯವಸ್ಥೆಯ ವಿಫಲತೆಯ ಸ್ಪಷ್ಟ ನಿದರ್ಶನ ಎಂದು ಆರೋಪಿಸಿದ್ದಾರೆ.
ದೆಹಲಿಯಂತಹ ಉನ್ನತ ಭದ್ರತಾ ವಲಯದಲ್ಲಿ ಸ್ಫೋಟ ಸಂಭವಿಸಿರುವುದು ಕೇವಲ ಕಾನೂನು ಸುವ್ಯವಸ್ಥೆಯ ವಿಷಯವಲ್ಲ, ಇದು ರಾಷ್ಟ್ರದ ಆಂತರಿಕ ಭದ್ರತೆಯ ಮೇಲಿನ ನಂಬಿಕೆಗೆ ಬಿದ್ದ ಭಾರಿ ಹೊಡೆತ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಭದ್ರತಾ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ದೇಶದ ರಾಜಧಾನಿಯೇ ಸುರಕ್ಷಿತವಾಗಿರದಿದ್ದರೆ, ಇಡೀ ಭಾರತವು ಹೇಗೆ ಸುರಕ್ಷಿತವಾಗಿರಲು ಸಾಧ್ಯ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.

ಗೃಹ ಸಚಿವರ ಅಸಮರ್ಥತೆ ಮತ್ತು ನಿರ್ಲಕ್ಷ್ಯದಿಂದಲೇ ಇಂತಹ ದಾರುಣ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದೆ. ಪುಲ್ವಾಮಾ ಬಳಿ 40 ಭಾರತೀಯ ವೀರ ಯೋಧರನ್ನ ಬಲಿ ಪಡೆದುಕೊಂಡಿದ್ದು, ಪಹಲ್ಗಾಮ್ನಲ್ಲಿ ಅಮಾಯಕ 26 ಪ್ರವಾಸಿಗರ ಬಲಿ, ರಾಷ್ಟ್ರ ರಾಜಧಾನಿಯಲ್ಲೇ ಭೀಕರ ಬಾಂಬ್ ಸ್ಪೋಟ ಹೀಗೆ ಸಾಲು ಸಾಲು ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದರು ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗುತ್ತಿದೆ ಎಂದು ದೂರಿದ್ದಾರೆ.
ಅಮಿತ್ ಶಾ ತಕ್ಷಣ ರಾಜೀನಾಮೆ ನೀಡಲಿ
ಅಮಾಯಕ ಜನರ ಪ್ರಾಣಗಳು ರಾಜಕೀಯ ಆಟಗಳಿಗೆ ಬಲಿಯಾಗುತ್ತಿರುವುದು ಅಕ್ಷಮ್ಯ. ಜನರ ಜೀವ ಮತ್ತು ಸುರಕ್ಷತೆಯ ಖಾತ್ರಿ ನೀಡಬೇಕಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗೃಹ ಸಚಿವರ ಮೇಲ್ವಿಚಾರಣೆಯಲ್ಲಿರುವ ಭದ್ರತಾ ವ್ಯವಸ್ಥೆ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿರುವಾಗ, ನೈತಿಕ ಹೊಣೆಹೊತ್ತು ಗೃಹ ಸಚಿವ ಅಮಿತ್ ಶಾ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ದೆಹಲಿಯ ಜನತೆಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರನ್ನು ಕಾನೂನಿನ ಮುಂದೆ ತರಬೇಕು, ಮತ್ತು ಭದ್ರತಾ ವ್ಯವಸ್ಥೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹಲವೆಡೆ ಸ್ಫೋಟಕ್ಕೆ ಸಂಚು ನಡೆದಿತ್ತಾ?
ದೆಹಲಿ-ಎನ್ಸಿಆರ್ ಮತ್ತು ಪುಲ್ವಾಮಾದ ಅನೇಕ ಸ್ಥಳಗಳಲ್ಲಿ ಭದ್ರತಾ ಸಂಸ್ಥೆಗಳು ನಡೆಸಿದ ದಾಳಿಗಳು, ಗಮನಾರ್ಹ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರಿಂದ ಶಂಕಿತನು ಒತ್ತಡದಲ್ಲಿ ಈ ರೀತಿ ವರ್ತಿಸಿರಬಹುದು ಎಂದು ಎಎನ್ಐ ವರದಿ ಮಾಡಿದೆ. ಇದಕ್ಕೂ ಮೊದಲು, ನವೆಂಬರ್ 9 ಮತ್ತು 10ರಂದು ಹರಿಯಾಣದ ಫರಿದಾಬಾದ್ನಲ್ಲಿ ನಡೆಸಿದ ದಾಳಿಗಳ ಸಮಯದಲ್ಲಿ, ಸುಮಾರು 3000 ಕೆಜಿ ಸ್ಫೋಟಕಗಳನ್ನು, ಡಿಟೋನೇಟರ್ಗಳು, ಟೈಮರ್ಗಳು ಮತ್ತು ಇತರ ಬಾಂಬ್ ತಯಾರಿಕೆ ಸಾಮಗ್ರಿಗಳನ್ನು ಹಿಡಿದು ವಶಪಡಿಸಿಕೊಳ್ಳಲಾಯಿತು. ಭದ್ರತಾ ಸಂಸ್ಥೆಗಳು ನಡೆಸಿದ ದಾಳಿಗಳಿಂದಾಗಿ ಭೀತಿ ಮತ್ತು ಹತಾಶೆಯಿಂದ ಸ್ಫೋಟ ಸಂಭವಿಸಿದೆ ಎಂದು ಎಎನ್ಐ ವರದಿ ಮಾಡಿದೆ. ಬಾಂಬ್ ಅಕಾಲಿಕವಾಗಿತ್ತು ಮತ್ತು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲ, ಹೀಗಾಗಿ ಪರಿಣಾಮವನ್ನು ಸೀಮಿತಗೊಳಿಸಿತು ಎಂದು ಹೇಳಿದೆ.












Click it and Unblock the Notifications