ಕೊಡಗಿನಲ್ಲಿ ಹಾಕಿ, ಡಿಫೆನ್ಸ್ ಅಕಾಡೆಮಿ ಸ್ಥಾಪನೆ?
ಮಡಿಕೇರಿ, ಮೇ 09: ಭಾರತದ ಹಾಕಿ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡಿರುವ ಕೊಡಗು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಾಕಿ ಅಕಾಡೆಮಿಯನ್ನು ಸ್ಥಾಪಿಸುವ ಉದ್ದೇಶವಿದ್ದು, ಇದಕ್ಕಾಗಿ ಕೇಂದ್ರ ಕ್ರೀಡಾ ಸಚಿವಾಲಯದೊಂದಿಗೆ ಸಮಾಲೋಚಿಸುವುದಾಗಿ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಆಶ್ವಾಸನೆ ನೀಡಿದರು.
ಇದಲ್ಲದೆ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ ಡಿಎ) ಯ ಶಾಖೆಯೊಂದನ್ನು ಕೊಡಗಿನಲ್ಲಿ ಸ್ಥಾಪಿಸಲು ಮನವಿ ಬಂದಿದ್ದು, ಈ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ಹೇಳಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ಮೈದಾನದಲ್ಲಿ ನಡೆದ ಶಾಂತೆಯಂಡ ಕೌಟುಂಬಿಕ ಹಾಕಿ ನಮ್ಮೆ -2016 ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಕ್ರೀಡಾ ಪ್ರೇಮಿಗಳನ್ನುದ್ದೇಶಿಸಿ ಮಾತನಾಡಿದರು.
ಶಾಂತೆಯಂಡ ಹಾಕಿ ನಮ್ಮೆಯ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅವರು, ಆರಂಭದಲ್ಲಿ ಪ್ರಾಸ್ತಾವಿಕ ನುಡಿಯಾಡುತ್ತ, ಕೊಡಗು ಜಿಲ್ಲೆಯಲ್ಲಿ ಹಾಕಿ ಅಕಾಡೆಮಿ ಸ್ಥಾಪನೆ ಸಹಿತ ಕೆಲವಾರು ಪ್ರಮುಖ ಬೇಡಿಕೆಗಳನ್ನು ಮಂಡಿಸಿದ್ದನ್ನು ಉಲ್ಲೇಖಿಸಿದ ಪರಿಕರ್ ಅವರು ಈ ಮೇಲಿನ ಭರವಸೆ ನೀಡಿದರು.
ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಭಾಷಣ: "ನಮಸ್ಕಾರ್" ಎಂಬುದಾಗಿ ಉದ್ಘರಿಸುತ್ತ ಭಾಷಣ ಆರಂಭಿಸಿದ ಅವರು ಭಾರತೀಯ ಸೇನೆಗೆ ಆಧುನಿಕ ಸ್ಪರ್ಶ ನೀಡಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಜನ್ಮ ಭೂಮಿಗೆ ಭೇಟಿ ನೀಡಿರುವುದು ನನ್ನ ಸೌಭಾಗ್ಯ ಎಂದು ಮನದಾಳದಿಂದ ನುಡಿದರು.

ಕೊಡಗು ಭೌಗೋಳಿಕವಾಗಿ ಪುಟ್ಟ ಜಿಲ್ಲೆಯಾದರೂ ಭಾರತೀಯ ಸೇನೆಗೆ ಇಬ್ಬರು ಜನರಲ್ ಅಲ್ಲದೆ ನೂರಾರು ಸಂಖ್ಯೆಯ ಯೋಧರನ್ನು ಮತ್ತು ಅಸಂಖ್ಯ ದೇಶಾಭಿಮಾನಿಗಳನ್ನು ನೀಡಿದೆ. ಅದರಂತೆಯೇ ಭಾರತೀಯ ಹಾಕಿ ಕ್ಷೇತ್ರಕ್ಕೆ 50ಕ್ಕೂ ಅಧಿಕ ಅಂತರರಾಷ್ಟ್ರೀಯ ಆಟಗಾರರನ್ನು ನೀಡುವ ಮೂಲಕ ದೊಡ್ಡ ಪ್ರಮಾಣದ ಪಾರಮ್ಯವನ್ನು ಮೆರೆದಿದೆಂಬುದಾಗಿ ಹೆಮ್ಮೆಪಟ್ಟರು.
ಗೋವದಿಂದ ಬಂದಿರುವ ತಾನು, ತಮ್ಮ ಗೋವಾ ರಾಜ್ಯ ಹಾಡುಗಾರರು ಹಾಗೂ ಸಂಗೀತಗಾರರ ತವರೂರಿನಂತೆ ಕೊಡಗು ಹಾಕಿ ಮತ್ತು ಸೇನೆಯ ತವರೂರಾಗಿದೆಂದು ಪರಿಕ್ಕರ್ ಬಣ್ಣಿಸಿದರು, ಕೊಡಗಿನಂತಹ ಸಂಸ್ಕೃತಿ ಇತರ ಜಿಲ್ಲೆ ಹಾಗೂ ರಾಜ್ಯಗಳಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರಲ್ಲದೆ, ಸಲ್ಲಿಸಿದ ಬೇಡಿಕೆಗಳನ್ನು ಪರಿಶೀಲಿಸುವ ಭರವಸೆ ನೀಡಿದರು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ : ಕೊಡವ ಕುಟುಂಬಗಳ ಸಾಮರ್ಥ್ಯವನ್ನು ಇನ್ನಷ್ಟು ಬಲಿಷ್ಟಗೊಳಿಸುವ ಉದ್ದೇಶದಿಂದ ಕಳೆದ 20 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ವರ್ಷದಿಂದ ವರ್ಷಕ್ಕೆ ಹೆಸರು ವಾಸಿಯಾಗಿದ್ದು ಇಂಥ ಕ್ರೀಡಾಕೂಟಗಳು ದೇಶದ ಯಾವ ಭಾಗದಲ್ಲಿಯೂ ನಡೆಯುತ್ತಿಲ್ಲ ಹಾಗೂ ಕಂಡು ಬರುತ್ತಿಲ್ಲ ಎಂದರು.

ಉತ್ಸವ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅವರು ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗು ಜಿಲ್ಲೆಗೆ "ರಾಷ್ಟ್ರೀಯ ರಕ್ಷಣಾ ಅಕಾಡೆಮಿ" ಮತ್ತು ಕಾಲೇಜನ್ನು ಮಂಜೂರು ಮಾಡಬೇಕು, ಫೀ.ಮಾ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಅವರಿಬ್ಬರಿಗೆ ಮರಣೋತ್ತರ ಗೌರವವಾದ "ಭಾರತರತ್ನ" ನೀಡಬೇಕು, ಡಿಎಫ್ ಆರ್ ಎಲ್ ರಕ್ಷಣಾ ಘಟಕವನ್ನು ಸ್ಥಾಪಿಸಿ ನಿವೃತ್ತ ಯೋಧರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು ಎಂದು ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಮನವಿ ಸಲ್ಲಿಸಿದರು.
ಹೆಲಿಕಾಪ್ಟರ್ ನಲ್ಲಿ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಗಾಲ್ಫ್ ಮೈದಾನದ ಹೆಲಿಪ್ಯಾಡಿಗೆ ಬಂದಿಳಿದ ಕೇಂದ್ರ ಸಚಿವ ಪರಿಕ್ಕರ್ ಅವರನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಾಂತೆಯಂಡ ಕುಟುಂಬಸ್ಥರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು, ಆ ನಂತರ ಫೀ. ಮಾ.ಕಾರ್ಯಪ್ಪ ಕಾಲೇಜಿನ ಆವರಣದಿಂದ ಭಾಜಾಭಜಂತ್ರಿಗಳೊಂದಿಗೆ ಮೈದಾನದ ವೇದಿಕೆಯವರೆಗೆ ಕರೆತರಲಾಯಿತು.

ಶಾಂತೆಯಂಡ ಕುಟುಂಬದ ಪಟ್ಟೆದಾರ ಶಾಂತೆಯಂಡ ಬಿ.ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ ಬೋಪಯ್ಯ, ಸುನಿಲ್ ಸುಬ್ರಮಣಿ, ಕನಾಟಕ ಸರಕಾರದ ಕಾನೂನು ಸಲಹೆಗಾರ ಮತ್ತು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಮಂಗಳೂರು ವಿವಿ ಕುಲಪತಿ ಡಾ. ಕೆ. ಬೈರಪ್ಪ, ಫೀ.ಮಾ. ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ, ಉದ್ಯಮಿಗಳಾದ ಕೃಷ್ಣ ನಾರಾಯಣ ಮುಳಿಯ, ಮಿಟ್ಟು ಚಂಗಪ್ಪ, ಇನ್ನಿತರರು ಇದ್ದರು.












Click it and Unblock the Notifications