ಶಾಲೆಯಲ್ಲಿ ಸುರಕ್ಷೆ: ಗಡುವು ಮುಗಿದರೂ ಮಾಹಿತಿ ಸಿಕ್ಕಿಲ್ಲ
ಬೆಂಗಳೂರು, ಡಿ. 1: ರಾಜ್ಯಾದ್ಯಂತ ಶಾಲೆಗಳಲ್ಲಿ ಮಕ್ಕಳ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಉಂಟುಮಾಡಿತ್ತು. ಆದರೆ, ಸರ್ಕಾರ ನೀಡಿದ್ದ ಗಡುವು ಶನಿವಾರವೇ ಅಂತ್ಯವಾಗಿದ್ದರೂ ಶಾಲೆಗಳಲ್ಲಿ ಕೈಗೊಳ್ಳಲು ಸೂಚಿಸಿದ್ದ ಸುರಕ್ಷತಾ ಕ್ರಮಗಳ ಜಾರಿ ಮಾತ್ರ ಆಮೆ ವೇಗದಲ್ಲಿ ಸಾಗಿದೆ. [ಬಾಲಕಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ]
ಸರ್ಕಾರ ಸೂಚಿಸಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು ವೆಬ್ಸೈಟ್ನಲ್ಲಿ ಅಳವಡಿಸಿದ ಶಾಲೆಗಳ ಸಂಖ್ಯೆ ಶೇ. 10 ಮಾತ್ರ. ಇಲಾಖೆಯ ಮಾಹಿತಿಯಂತೆ ರಾಜ್ಯಾದ್ಯಂತ ಅನುದಾನಿತ ಹಾಗೂ ಅನುದಾನ ರಹಿತ ಸೇರಿ 21, 893 ಶಾಲೆಗಳಿವೆ. ಆದರೆ ಸುರಕ್ಷತಾ ಕ್ರಮಗಳ ಕುರಿತು ವಿವರಣೆ ನೀಡಿರುವ ಶಾಲೆಗಳ ಸಂಖ್ಯೆ 2,300.
ಆದರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳುವ ಪ್ರಕಾರ ಸರ್ವರ್ನ ವೇಗ ಅತ್ಯಂತ ದುರ್ಬಲಗೊಂಡಿರುವುದೇ ಮಾಹಿತಿ ಅಳವಡಿಕೆ ನಿಧಾನವಾಗಲು ಕಾರಣ. [ಚನ್ನಮ್ಮ ಶಾಲೆಯಲ್ಲಿ ಅಡುಗೆ ಭಟ್ಟನಿಂದ ಲೈಂಗಿಕ ದೌರ್ಜನ್ಯ]
ಸರ್ಕಾರದ ಸೂಚನೆಯಂತೆ ಮೂವರು ಸದಸ್ಯರ ಸಮಿತಿ ಸಾಕಷ್ಟು ಶಾಲೆಗಳಿಗೆ ಭೇಟಿ ನೀಡಿವೆ. ಪ್ರತಿ ಶಾಲೆಗೆ 2 ಗಂಟೆಗಳಂತೆ ಸಮಯ ತಗಲುತ್ತದೆ. ಆದರೆ, ಕೆಲವು ಶಾಲೆಗಳಲ್ಲಿ ಆಡಳಿತ ಮಂಡಳಿ ಸದಸ್ಯರು ಗೈರಾಗಿದ್ದ ಕಾರಣ ವಾಪಸ್ ಬಂದಿದ್ದಾರೆ. ಈಗ ಸಂಗ್ರಹಿಸಿರುವ ಮಾಹಿತಿಯನ್ನು ಅಂತರ್ಜಾಲದಲ್ಲಿ ಅಳವಡಿಸಲು ಇನ್ನೂ ಕನಿಷ್ಠ ಒಂದು ವಾರ ಬೇಕಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
- ರಾಜ್ಯದಲ್ಲಿರುವ ಶಾಲೆಗಳ ಸಂಖ್ಯೆ 21,893
- ಅಂತರ್ಜಾಲದಲ್ಲಿ ದತ್ತಾಂಶ ಅಳವಡಿಸಿದ ಶಾಲೆಗಳು 2,300
- ಸಮಿತಿ ಸದಸ್ಯರು ಭೇಟಿ ನೀಡಿದಾಗ ಪಾಲಕರ ಹಾಜರಿ ಅತ್ಯಂತ ಕಡಿಮೆ
- ಅಂತರ್ಜಾಲದಲ್ಲಿ ಮಾಹಿತಿ ಅಳವಡಿಸಲು ಒನ್ನೊಂದು ವಾರ ಬೇಕು [ಲೈಂಗಿಕ ದೌರ್ಜನ್ಯ: ಶಿಕ್ಷಕ ಪೊಲೀಸ್ ವಶಕ್ಕೆ]
ಪಾಲಕರಲ್ಲಿನ್ನೂ ಜಾಗೃತಿ ಬಂದಿಲ್ಲ: ಇಲಾಖೆ ಪ್ರತಿನಿಧಿಗಳು ಶಾಲೆಗೆ ಭೇಟಿ ನೀಡಿದ್ದಾಗ ಪಾಲಕರೂ ಹಾಜರಾಗುವಂತೆ ನೋಡಿಕೊಳ್ಳಲು ಸೂಚಿಸಲಾಗಿತ್ತು. ಪಾಲಕರೇ ಇರುವಂತಹ ಎಸ್ಡಿಎಂಸಿ ರಚನೆ ವ್ಯವಸ್ಥೆ ಇದ್ದರೂ ಅವರ ಹಾಜರಾತಿ ಅತ್ಯಂತ ಕಡಿಮೆಯಾಗಿತ್ತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. [ಕೇಂಬ್ರಿಡ್ಜ್ ಶಾಲೆ ಎದುರು ಪಾಲಕರ ಪ್ರತಿಭಟನೆ]
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಹ್ಸಿನ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಈಗಾಗಲೇ ದತ್ತಾಂಶವನ್ನು ಸಂಗ್ರಹಿಸಿದ್ದಾರೆ. ಅವರು ಶೀಘ್ರ ಅಂತರ್ಜಾಲಕ್ಕೆ ಅಪ್ಲೋಡ್ ಮಾಡಬೇಕು ಎಂದಿದ್ದಾರೆ.