ಮೃತ ಹೆಣ್ಣು ಮಕ್ಕಳ ವಾರಸುದಾರರಿಗೂ ಆಸ್ತಿಯ ಹಕ್ಕಿದೆ; ಕೋರ್ಟ್
ಬೆಂಗಳೂರು, ಜನವರಿ 07: ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ತರುವ ಮುನ್ನವೇ ಮಗಳು ಮೃತಪಟ್ಟಿದ್ದರೂ ಸಹ ಆಕೆಯ ವಾರಸುದಾರರಿಗೆ ಆಸ್ತಿಯ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಈ ಮಹತ್ವದ ಆದೇಶವನ್ನು ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿ ಸಚಿನ್ ಶಂಕರ್ ಮಗ್ದಮ್ ಅವರಿದ್ದ ಪೀಠ ನೀಡಿದೆ.
ಮಗಳು ಮೃತಪಟ್ಟಿದ್ದಾಳೆ ಎನ್ನುವ ಕಾರಣದಿಂದಾಗಿ ಆಕೆಯ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕು ಇಲ್ಲ ಎಂದು ಹೇಳಲು ಸಾಧ್ಯವಿಲ್ಲ ಹಾಗೂ ಆಕೆಯ ವಾರಸುದಾರರು ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹರು ಎಂದು ಹೈಕೋರ್ಟ್ ಹೇಳಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ನಿವಾಸಿ ಚನ್ನಬಸಪ್ಪ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗ್ದಮ್ ಅವರಿದ್ದ ಪೀಠ ಮೃತ ಹೆಣ್ಣು ಮಕ್ಕಳ ಕಾನೂನು ಉತ್ತರಾಧಿಕಾರಿಗಳು ಆಸ್ತಿಯಲ್ಲಿ ಸಮಾನ ಪಾಲು ಪಡೆಯಹುದು ಎಂದು ಆದೇಶಿಸಿದೆ.

2005ರ ಸೆ. 9ಕ್ಕೆ ಹೆಣ್ಣು ಮಕ್ಕಳಿಗೆ 'ಕೊ-ಪಾರ್ಸೆನರಿ 'ಹಕ್ಕುಗಳನ್ನು ನೀಡಲು ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ಆದರೆ ಅವಧಿಗೂ ಮೊದಲೇ ಮಹಿಳೆ ಮೃತಪಟ್ಟಿದ್ದಾರೆ ಎನ್ನುವ ನೆಪ ಹೇಳಿ ಅವಧಿಗೆ ಮುನ್ನವೇ ಮಹಿಳೆ ಮೃತಪಟ್ಟಿದ್ದಾರೆ ಬಂಬ ಕಾರಣಕ್ಕೆ ಪೂರ್ವಜರ ಆಸ್ತಿಯ ಮೇಲಿನ ಆಸ್ತಿಯ ಹಕ್ಕುಗಳನ್ನು ಆಕೆಯ ಕಾನೂನಾತ್ಮಕ ವಾರಸುದಾರರಿಂದ ಕಸಿದುಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.
2020ರಲ್ಲಿ ವಿನೀತಾ ಶರ್ಮಾ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ವಿಸ್ತೃತ ಪೀಠದ ನಿಲುವನ್ನು ಪ್ರಸ್ತುತ ಪಡಿಸಿತು. ಆ ಪ್ರಕಾರವಾಗಿ 2005ರ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ಅನ್ವಯ ಹೆಣ್ಣು ಮಕ್ಕಳು ಗಂಡು ಮಕ್ಕಳಂತೆ 'ಕೊ-ಪಾರ್ಸೆನರಿ 'ಹಕ್ಕುಗಳನ್ನು ಪಡೆಯುತ್ತಾರೆ. ಅವರು ತಿದ್ದುಪಡಿಗೆ ಮೊದಲು ಜನಿಸಿದ್ದಾರೋ ಇಲ್ಲವೋ ಎನ್ನುವುದನ್ನು ಹೊರತುಪಡಿಸಿ ಎಂದು ತಿಳಿಸಿತ್ತು.
ಅಲ್ಲದೇ, ವ್ಯಕ್ತಿ ಹುಟ್ಟಿನಿಂದಲೇ ಹಕ್ಕು ಹೊಂದಿರುತ್ತಾನೆ ಹೊರತು ಉತ್ತರಾಧಿಕಾರದಿಂದಲ್ಲ. ಇದರ ಅನ್ವಯ ಮಗಳು ಜೀವಂತವಾಗಿದ್ದರೂ ಅಥವಾ ಇಲ್ಲದೇ ಹೋದರು ಅವಳು ಹಕ್ಕುಪಡೆದಿರುತ್ತಾಳೆ ತಿದ್ದುಪಡಿ ಕಾಯ್ದೆಯು ಲಿಂಗ ಸಮಾನತೆಯನ್ನು ಖಾತ್ರಿಪಡಿಸುತ್ತದೆ ಹಾಗೂ ಹೆಣ್ಣುಮಕ್ಕಳು ಮತ್ತು ಅವರ ವಾರಸುದಾರರು ಅವರ ಸರಿಯಾದ ಪಾಲನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ.
ಮಿತಾಕ್ಷರ ಸಹ- ಪಾರ್ಸೆನರಿಯು ಮಗಳನ್ನು ಕೊ-ಪಾರ್ಸೆನರ್ ಎಂದು ಉಲ್ಲೇಖಿಸುತ್ತದೆ. ಪೂರ್ವಜರ ಆಸ್ತಿ, ಮಗಳು ತೀರಿಕೊಂಡಾಗ ಆಕೆಯ ಕಾನೂನು ವಾರಸುದಾರರಿಗೆ ಲಭಿಸಲಿದೆ. ಮೃತ ಮಗನ ವಾರಸುದಾರರು ಆಸ್ತಿಯಲ್ಲಿ ಪಾಲುಪಡೆಯಬಹದುಂತಾದರೆ, ಕಾಯ್ದೆಯ ಅನುಷ್ಠಾನದ ಸಮಯದಲ್ಲಿ ಮಗಳು ಜೀವಂತವಾಗಿಲ್ಲ ಎನ್ನುವ ನಿಟ್ಟಿನಲ್ಲಿ ಆಕೆಯ ವಾರಸದಾರರು ಹಕ್ಕು ಪಡೆಯುವಂತಿಲ್ಲ ಎಂದು ಹೇಳುವುದು ಗಂಡು-ಹೆಣ್ಣು ನಡುವೆ ತಾರತಮ್ಯ ಮಾಡಿದಂತಾಗುತ್ತದೆ. ಇದು ಕಾನೂನಿನ ಉತ್ತಮ ಉದ್ದೇಶವನ್ನು ಮೊಟಕುಗೊಳಿಸುತ್ತದೆ.
ಪ್ರಕರಣದ ಹಿನ್ನೆಲೆ: 2023ರ ಅ. 3ರಂದು ಗದಗ ಪ್ರಧಾನ ಸಿವಿಲ್ ನ್ಯಾಯಾಲಯ ಮೃತ ಪುತ್ರಿಯರ ಕಾನೂನಾತ್ಮಕ ವಾರಸುದಾರರಿಗೆ ಅವರ ಪೂರ್ವಜರ ಆಸ್ತಿಯಲ್ಲಿ ಸಮಪಾಲು ನೀಡಿ ಆದೇಶಿಸಿತ್ತು ಈ ಆದೇಶ ಪ್ರಶ್ನಿಸಿ ಚನ್ನಬಸಪ್ಪ ಹೈಕೋರ್ಟ್ ಮೇಟ್ಟಿಲೇರಿದ್ದರು.
ಅರ್ಜಿದಾರ ಪರ ವಕೀಲರು, 2005ರ ಹಿಂದೂ ಉತ್ತರಾಧಿಕಾರಿ ಕಾಯ್ದೆ ತಿದ್ದುಪಡಿಗೂ ಮೊದಲು ನಾಗವ್ವ ಮತ್ತು ಸಂಗವ್ವ ಹೆಸರಿನ ಎರಡು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದು, ಅವರ ಕಾನೂನು ವಾರಸುದಾರರು ಆಸ್ತಿಯಲ್ಲಿ ಸಮಾನಪಾಲು ಪಡೆಯಲು ಅರ್ಹರಲ್ಲ ಜತೆಗೆ ಕಾಯ್ದೆಯೂ ಹೆಣ್ಣು ಮಕ್ಕಳ ಉತ್ತರಾಧಿಕಾರಿಗಳಿಗೆ ನೂತನ ಹಕ್ಕನ್ನು ಪರಿಚಯಿಸಿದೆ.
ಅದರ ನಿಬಂಧನೆಗಳನ್ನು ಶಾಸಕಾಂಗವು ಸ್ಪಷ್ಟವಾಗಿ ಪೂರ್ವಾವಲೋಕನ ಮಾಡಿಲ್ಲ ಅಲ್ಲದೇ ಈ ಕಾಯ್ದೆಯೂ ಸೆ.2005 ರಲ್ಲಿ ಜಾರಿಗೆ ಬಂದಿದ್ದು ಆವೇಳೆಯಲ್ಲಿ ಜೀವಂತವಾಗಿದ್ದ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯಿಸಲಾಗುತ್ತದೆ. ಅವರು ಯಾವಾಗ ಜನಿಸಿದ್ದಾರೆ ಎನ್ನುವುದನ್ನು ಹೊರತುಪಡಿಸಿ ಎಂದು ವಾದಿಸಿದರು.












Click it and Unblock the Notifications