ಕಾಂಗ್ರೆಸ್ ಸಚಿವರಿಗೆ ಪರಮೇಶ್ವರ್ ಉಪಹಾರ ಕೂಟ: ಏನಿದರ ಮರ್ಮ?
Recommended Video

ಬೆಂಗಳೂರು, ಸೆಪ್ಟೆಂಬರ್ 07: ಉಪಮುಖ್ಯಮಂತ್ರಿ ಪರಮೇಶ್ವರ್ ಇಂದು ಹಠಾತ್ತನೆ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಸಚಿವರಿಗೂ ಉಪಹಾರ ಕೂಟ ಆಯೋಜಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿರುವ ಕಾರಣ ಈ ಉಪಹಾರ ಕೂಟ ಮಹತ್ವ ಪಡೆದುಕೊಂಡಿದೆ.
ಮೈತ್ರಿ ಸರ್ಕಾರದ ಕಾವಲುಗಾರ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರು ಯೂರೋಪ್ ಪ್ರವಾಸದಲ್ಲಿರುವಾಗಲೇ ಈ ರೀತಿ ಪರಮೇಶ್ವರ್ ಅವರು ಸಚಿವರಿಗೆ ಉಪಹಾರ ಏರ್ಪಡಿಸಿರುವುದು ಆ ನೆವದಲ್ಲಿ ಸಭೆ ಕೂಡ ನಡೆಸಲಿರುವುದು ಭಾರಿ ಕುತೂಹಲ ಉಂಟು ಮಾಡಿದೆ.
ಸಿದ್ದರಾಮಯ್ಯ ಅವರ ಆಪ್ತರೂ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದು, ಸರ್ಕಾರದ ವಿರುದ್ಧ ಕೆಂಪು ಬಾವುಟ ಹಾರಿಸುವ ಮುನ್ಸೂಚನೆ ತೋರಿರುವ ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ಸೆಳೆಯಲು ಕೂಟ ಆಯೋಜಿತವಾಗಿರುವ ಸಾಧ್ಯತೆ ದಟ್ಟವಾಗಿದೆ.

ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಭಾಗಿ
ಉಪಹಾರ ಕೂಟದಲ್ಲಿ ಕಾಂಗ್ರೆಸ್ ಸಚಿವರ ಜೊತೆಗೆ ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಭಾಗಿಯಾಗಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ. ಇವರು ಹಾಜರಿಯಿಂದ ಕೂಟಕ್ಕೆ ರಾಜಕೀಯ ಆಯಾಮ ದೊರೆತಿದೆ. ಕೆಪಿಜೆಪಿಯಿಂದ ಆಯ್ಕೆಯಾಗಿದ್ದ ಶಂಕರ್ ಅವರೂ ಸಹ ಭೋಜನಕೂಟದಲ್ಲಿ ಭಾಗಿಯಾಗಿದ್ದಾರೆ.

ಅನುಮಾನಕ್ಕೆ ಪುಷ್ಠಿ ನೀಡುವ ಬೆಳವಣಿಗೆ
ಮೊನ್ನೆಯಷ್ಟೆ ಕುಮಾರಸ್ವಾಮಿ ಮಾತನಾಡುತ್ತಾ, 'ಯಡಿಯೂರಪ್ಪ ಅವರು ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ, ನನಗೆ ಮಾಹಿತಿ ದೊರೆತಿದೆ' ಎಂದು ಸಾಕ್ಷ್ಯಗಳನ್ನೂ ಮುಂದಿಟ್ಟಿದ್ದರು. ಹಾಗಾಗಿ ಎಚ್ಚರಿಕೆ ದೃಷ್ಠಿಯಿಂದ ಕುಮಾರಸ್ವಾಮಿ ಅವರ ಸೂಚನೆಯ ಮೇರೆಗೆ ಈ ಉಪಹಾರ ಕೂಟ ಆಯೋಜಿತವಾಗಿದೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಬೆಂಬಲಿಗರ ವಿಶ್ವಾಸ ಸಂಪಾದಿಸಲು ಯತ್ನ
ಯಡಿಯೂರಪ್ಪ ಅವರು, 'ನನ್ನ ಮತ್ತು ಸಿದ್ದರಾಮಯ್ಯ ಅವರ ಫೋನ್ ಟ್ಯಾಪ್ ಮಾಡಲಾಗುತ್ತಿದೆ' ಎಂದು ಇತ್ತೀಚೆಗೆ ಹೇಳಿದ್ದರು. ಇದು ಕಾಂಗ್ರೆಸ್ನಲ್ಲಿ ಆತಂಕ ಮೂಡಿಸಿತ್ತು. ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಗುಪ್ತ ಮಾತುಕತೆ ನಡೆಸಿದ್ದಾರೆ ಎಂಬ ಗುಮಾನಿ ಹಬ್ಬಸಿತ್ತು. ರಾಜ್ಯ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಅವರ ಮೇಲೆ ಅನುಮಾನ ಹೆಚ್ಚಿಸಿಕೊಂಡಿದ್ದು, ಅವರ ಬೆಂಬಲಿಗರ ವಿಶ್ವಾಸ ಸಂಪಾದನೆಗೆ ಈ ಉಪಹಾರ ಕೂಟವನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ.

ಹೊಸ ಮುಖ್ಯಮಂತ್ರಿಯ ಆಯ್ಕೆ?
ಕೇವಲ ಕಾಂಗ್ರೆಸ್ ಸಚಿವರನ್ನು ಮಾತ್ರವೇ ಉಪಹಾರ ಕೂಟಕ್ಕೆ ಕರೆದಿರುವ ಹಿಂದೆ ಕಾಂಗ್ರೆಸ್ ನ ಯಾರನ್ನಾದರೂ ಸಿಎಂ ಮಾಡುವ ಆಲೋಚನೆ ಇರಬಹುದೆಂಬ ಆತಂಕ ಜೆಡಿಎಸ್ಗೆ ಉಂಟಾಗಿದೆ. ಇತ್ತೀಚೆಗಷ್ಟೆ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತೇನೆಂದು ಹೇಳಿ ಈ ಬಗ್ಗೆ ಚರ್ಚೆಯನ್ನೂ ಹುಟ್ಟು ಹಾಕಿದ್ದರು. ಹಾಗಾಗಿ ಈ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.












Click it and Unblock the Notifications