DKS VS HDK: ಡಿ ಕೆ ಶಿವಕುಮಾರ್ ಮತ್ತೆ ತಿಹಾರ್ ಜೈಲು ಪಾಲು ಎಂದ ಹೆಚ್ಡಿಕೆ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು,ಅಕ್ಟೋಬರ್ 09: ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ, ಮತ್ತೆ ಶಾಶ್ವತವಾಗಿ ಹೋದರೂ ಅಚ್ಚರಿ ಇಲ್ಲ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುಡುಗಿದ್ದಾರೆ.
ಈ ಕುರಿತು ಜ್ಞಾನಜ್ಯೋತಿ ಸಭಾಂಗಣದ ಬಳಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಕುಮಾರಣ್ಣ ಹಿಂದೆ ಏನು ಮಾಡಿದ್ದರು, ಮುಂದೆ ಏನು ಮಾಡಲು ಹೊರಟಿದ್ದಾರೆ ಎಂಬುದನ್ನು ತಮ್ಮ ಹೇಳಿಕೆ ಮೂಲಕ ತಿಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕುಮಾರಸ್ವಾಮಿ ಅವರು ತಮ್ಮ ಪ್ಲಾನ್ ಏನಿದೆ ಎಂಬುದನ್ನು ಹೇಳಿದ್ದಾರೆ. ಅವರು ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಹೇಳಿದ್ದಾರೆ. ಈ ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದಾಗ ನನ್ನ ತಂಗಿ, ತಮ್ಮ ಹಾಗೂ ನನ್ನ ಹೆಂಡತಿ ಮೇಲೆ ಕೇಸ್ ಹಾಕಿದ್ದನ್ನು ಈಗ ನೆನಪಿಸಿಕೊಂಡಿದ್ದಾರೆ. ಮುಂದೆ ಏನು ಮಾಡಬೇಕು ಅಂದುಕೊಂಡಿದ್ದಾರೋ ಅದನ್ನು ಹೇಳಿದ್ದಾರೆ. ಈ ವಿಚಾರವಾಗಿ ಮುಂದೆ ಮಾತನಾಡೋಣ ಎಂದು ತಿಳಿಸಿದರು.
ಮೈತ್ರಿ ಸರ್ಕಾರ ಬೀಳಲು ಡಿ.ಕೆ ಶಿವಕುಮಾರ್ ಅವರೇ ಕಾರಣ, ಈ ಸರಕಾರ ಶೀಘ್ರ ಉರುಳಿ ಹೋಗುತ್ತದೆ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಬಹಳ ದೊಡ್ಡವರು. ಅವರ ನುಡಿಮುತ್ತುಗಳು ಏನಿವೆ? ಅವರು ಏನು ಹೇಳಿದ್ದಾರೆ ಎಂದು ಸಂಪೂರ್ಣವಾಗಿ ಮಾಹಿತಿ ಪಡೆದ ನಂತರ ಪ್ರತಿಕ್ರಿಯಿಸುತ್ತೇನೆ ಎಂದರು.
ಮನೆ ಕಟ್ಟುವಾಗ ಸ್ವಯಂಚಾಲಿತ ನಕ್ಷೆ ಮಂಜೂರಾತಿ ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿ, ಬೆಂಗಳೂರಿನಲ್ಲಿ ಬಿಡಿಎಯಿಂದ ಹಂಚಿಕೆ ಮಾಡುತ್ತಿರುವ ದೊಡ್ಡ ನಿವೇಶನಗಳಲ್ಲಿ 50/ 60 ಅಳತೆಯ ನಿವೇಶನಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತಿದೆ. ಸದಾಶಿವನಗರ ಹಾಗೂ ಎರಡು ಮೂರು ಕಡೆ ಮಾತ್ರ ದೊಡ್ಡ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.

ಪ್ರಮಾಣಿಕೃತ ಯೋಜನಾ ತಜ್ಞರು, ವಿನ್ಯಾಸಕಾರರೇ ಯೋಜನೆ ತಯಾರಿಸಿ ಅಪ್ಲೋಡ್ ಮಾಡಿದರೆ, ಆ ಯೋಜನೆ ಸರಿಯಾಗಿದ್ದರೆ ಕಂಪ್ಯೂಟರ್ ಅದನ್ನು ಪ್ರಮಾಣೀಕರಿಸಿ ಒಪ್ಪಿಗೆ ನೀಡುತ್ತದೆ. ಇದರಿಂದ ಜನರು ಕಚೇರಿಗೆ ಅಲೆಯುವುದು ತಪ್ಪುತ್ತದೆ. ನಿಗಧಿತ ಶುಲ್ಕ ಪಾವತಿ ಮಾಡಿದರೆ ಸಾಕು, ನೇರವಾಗಿ ಯೋಜನೆಯ ನಕ್ಷೆ ಕೈ ಸೇರುತ್ತದೆ. ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಇದು ಅನ್ವಯವಾಗುವುದಿಲ್ಲ, ಸ್ವಂತ ಮನೆ ಕಟ್ಟುವವರಿಗೆ ಇದು ಹೆಚ್ಚು ಉಪಯೋಗವಾಗುತ್ತದೆ. ಎಲ್ಲಾ ಆರ್ಕಿಟೆಕ್ಟ್ಗಳಿಗೆ ಅವಕಾಶವಿಲ್ಲ, ಪ್ರಮಾಣೀಕೃತರಿಗೆ ಮಾತ್ರ ಅವಕಾಶ ಎಂದು ತಿಳಿಸಿದರು.
ಸ್ವಯಂ ಆಸ್ತಿ ತೆರಿಗೆ ಘೋಷಣೆ ಹಳಿ ತಪ್ಪುತ್ತಿದೆಯೇ ಎಂದ ಪ್ರಶ್ನೆಗೆ ಉತ್ತರಿಸಿ, ಹೌದು, ಜನರು ತಮ್ಮ ಸ್ವಂತ ಆಸ್ತಿ ಘೋಷಣೆ ವೇಳೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. 5,000 ಚದರ ಅಡಿ ಕಟ್ಟಡವಿದ್ದರೆ 2,೦೦೦ ಚದರ ಅಡಿ ಮಾತ್ರ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ವಿದ್ಯುತ್, ನೀರಿನ ಬಿಲ್ ಬಳಕೆಯಿಂದ ತಪ್ಪು ಆಸ್ತಿ ಘೋಷಣೆ ಮಾಡುತ್ತಿರುವುದು ತಿಳಿಯುತ್ತಿದೆ. ಶೀಘ್ರ ಈ ಸಮಸ್ಯೆ ನಿವಾರಣೆಗೆ ಯೋಜನೆ ರೂಪಿಸಲಾಗುವುದು. ಮಂಗಳೂರಿನಲ್ಲಿ ಈ ಬಗ್ಗೆ ಯೋಜನೆಯಿದ್ದು, ಎಲ್ಲದರ ಬದಲಾಗಿ ನಾನೇ ಖುದ್ದಾಗಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೊಸ ತಂಡ ಮಾಡುತ್ತಿದ್ದೇನೆ ಎಂದರು.
ರಸ್ತೆಗುಂಡಿ ಸಮಸ್ಯೆಗೆ ಈಗಾಗಲೇ ಆಯಪ್ ಇದ್ದು, ಇಲ್ಲಿ ಬರುವ ದೂರುಗಳನ್ನೇ ನಿರ್ವಹಣೆ ಮಾಡಲು ಆಗುತ್ತಿಲ್ಲ. ಈಗ ಮತ್ತೊಂದು ಡಿಜಿಟಲ್ ವೇದಿಕೆ ಸೃಷ್ಟಿಸುವ ಅಗತ್ಯವಿದೆಯೇ ಎಂದು ಕೇಳಿದಾಗ, "ಹೊಸ ವೇದಿಕೆಯಲ್ಲಿ ಪೊಲೀಸರನ್ನು ಒಳಗೊಂಡು ಯೋಜನೆ ರೂಪಿಸಲಾಗಿದೆ. ಪ್ರತಿ ಏರಿಯಾಗಳ ಸಂಚಾರಿ ಪೊಲೀಸರು ಗಮನ ಹರಿಸಿ ಸಮಸ್ಯೆ ಇರುವ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಅನೇಕ ಕಡೆ ಸಾರ್ವಜನಿಕರು ಮಾಹಿತಿ ನೀಡುತ್ತಿದ್ದಾರೆ. ಕೆಲವು ಕಡೆ ನೀಡುತ್ತಿಲ್ಲ. ಪಾಲಿಕೆ ಹಾಗೂ ಸಂಚಾರಿ ಪೊಲೀಸ್ ಇಲಾಖೆ ಜಂಟಿಯಾಗಿ ಕೆಲಸ ಮಾಡಲಿವೆ ಎಂದು ಹೇಳಿದರು.
ಕೆರೆಗಳ ಒತ್ತುವರಿ ಸೇರಿದಂತೆ ಬೆಂಗಳೂರಿನ ಕೆರೆಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈಗಾಗಲೇ ಕೆರೆ ಅಭಿವೃದ್ಧಿ ಪ್ರಾಧಿಕಾರ ಚಾಲ್ತಿಯಲ್ಲಿದೆ. ಆದ್ಯತೆಯ ಮೇರೆಗೆ ಕೆರೆಗಳನ್ನು ಸ್ವಚ್ಚಗೊಳಿಸುವ, ಒತ್ತುವರಿ ತೆರವು ಮಾಡುವ ಕೆಲಸ ನಡೆಯುತ್ತಿದೆ. ಕೆರಗಳಿಗೆ ಕೊಳಚೆ ನೀರು ಹರಿಯದಂತೆ ಕೆಲಸ ಮಾಡಲಾಗುತ್ತದೆ ಎಂದರು.












Click it and Unblock the Notifications