ಬಿಜೆಪಿ ರಾಜ್ಯಾಕ್ಷರಾಗಿ ಬಹುತೇಕ ಶೋಭಾ ಕರಂದ್ಲಾಜೆ ಆಯ್ಕೆ?: ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದಿಷ್ಟು!
ಬೆಂಗಳೂರು, ಅಕ್ಟೋಬರ್ 23: ಬಿಜೆಪಿಯಲ್ಲಿ ರಾಜ್ಯಾಕ್ಷರಾಗಿ ಬಹುತೇಕ ಶೋಭಾ ಕರಂದ್ಲಾಜೆ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಅವರು ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಬಹಳ ಸಂತೋಷ ಎಂದು ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಬೇರೆ ಪಕ್ಷದವರು ನಮ್ಮ ಪಕ್ಷದ ಬಗ್ಗೆ ಮಾತನಾಡಬಹುದು. ನಾನು ಮಾತನಾಡಲು ಹೋಗುವುದಿಲ್ಲ. ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷದ ಅಧ್ಯಕ್ಷರ ಆಯ್ಕೆ ಪಕ್ಕಕ್ಕಿರಲಿ, ಆದರೆ ಐದು ತಿಂಗಳಾದರೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ ಎಂದು ಹೇಳಿದರು,

ಇನ್ನೂ ನಳಿನ್ ಕಟೀಲರು ಇನ್ನೂ ಅಧ್ಯಕ್ಷ ಸ್ಥಾನದಲ್ಲಿ ಇದ್ದಾರೆ. ವಿಧಾನಸಭಾ ಟಿಕೆಟ್ ಹಂಚಿಕೆ ವೇಳೆ ವ್ಯಾಪಾರ ನಡೆಯಿತು ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರೇ ದೂರು ನೀಡಿ, ಎಫ್ಐಆರ್ ಆಗಿ, ತನಿಖೆ ಪ್ರಗತಿ ಹಂತದಲ್ಲಿದೆ. ಅಧ್ಯಕ್ಷ ಸ್ಥಾನ ಖಾಲಿಯಾಗಿಲ್ಲ, ಖಾಲಿಯಾದಾಗ ಮಾಡಬಹುದು. ಆದರೆ 65 ಸ್ಥಾನಗಳನ್ನು ಗೆದ್ದಂತಹ ಪಕ್ಷವೊಂದು ಚುನಾವಣೆ ಮುಗಿದು ಐದು ತಿಂಗಳಾದರೂ, ವಿರೋಧ ಪಕ್ಷದ ನಾಯಕನ್ನು ಆಯ್ಕೆ ಮಾಡಿಲ್ಲ ಎಂದರೆ ಪಕ್ಷದ ಒಳಗೆ ದೌರ್ಬಲ್ಯ ಏನಿದೆ ಎಂದು ನಾನು ಮಾತನಾಡಲು ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ಯಾರನ್ನೇ ಅಧ್ಯಕ್ಷರನ್ನಾಗಿ, ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಿ ಅವರಿಗೆ ಶುಭವಾಗಲಿ. ಅವರು ನಮ್ಮ ತಪ್ಪುಗಳನ್ನು ಕಂಡುಹಿಡಿಯಲಿ, ಜಾಗೃತಗೊಳಿಸಲಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನ ಎತ್ತಿಹಿಡಿಯಲಿ ಎಂದು ಶುಭ ಹಾರೈಸುತ್ತೇನೆ.
ಅಣ್ಣ ಮತ್ತು ಅಕ್ಕ ಒಂದಾದರೆ ಕಾಂಗ್ರೆಸ್ ಪಕ್ಷಕ್ಕೆ ಸವಾಲಲ್ಲವೇ ಎಂದಾಗ "ಇರಬೇಕು, ಕುಸ್ತಿಯಲ್ಲಿ ಎದುರಾಳಿ ಸರಿಯಾಗಿ ಇದ್ದಾಗ ಮಾತ್ರ ಕುಸ್ತಿ ಅಖಾಡಕ್ಕೂ ಗೌರವ. ಪಟ್ಟುಗಳು ಸ್ವಲ್ಪ ಬಿಗಿಯಾಗಿರಬೇಕು ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯಲು ಶೋಭ ಕರಂದ್ಲಾಜೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಜಾತಿ ಮೇಲೆ ಅಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ಉತ್ತರಿಸಿದರು.
ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಮಹಿಳೆಯರ ಮನಸ್ಸನ್ನು ಗೆದ್ದು ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಜೆಪಿ ಮಹಿಳಾ ಅಧ್ಯಕ್ಷರನ್ನು ಮಾಡುವುದು ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ಹುನ್ನಾರವೇ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನಗೆ ಉತ್ತರಿಸಿ, ತಪ್ಪೇನಿದೆ, ಮಾಡಲಿ ಬಿಡಿ, ನಮ್ಮ ಅಕ್ಕ ಅಧ್ಯಕ್ಷರಾದರೆ ಒಳ್ಳೆಯದಲ್ಲವೇ? ಹಿರಿಯ ನಾಯಕರು, ಕೆಜೆಪಿ ಕಟ್ಟಿದ್ದಾರೆ, ಬಿಜೆಪಿ ಬೆಳೆಸಿದ್ದಾರೆ, ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ, ಅವರದೇ ಅನುಭವವಿದೆ, ಅವರು ಆದರೆ ಸಂತೋಷ ಎಂದು ಹೇಳಿದರು.












Click it and Unblock the Notifications