ಮೆಡಿಕಲ್ ಕಾಲೇಜು ಸ್ಥಾಪನೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಮಾಹಿತಿ!
ಬೆಳಗಾವಿ ಮಹಾ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಸಮಯದಲ್ಲಿ ಬಿಜೆಪಿ & ಜೆಡಿಎಸ್ ಒಂದಾಗಿ ಕಾಂಗ್ರೆಸ್ ವಿರುದ್ಧ ಗುಡುಗಲು ಸಿದ್ಧತೆ ನಡೆಸಿವೆ. ಆದರೆ ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಹಾಗಾದರೆ ಬಿಜೆಪಿ & ಜೆಡಿಎಸ್ ವಿರುದ್ದ ಡಿಸಿಎಂ ಡಿಕೆಶಿ ಗುಡುಗಿದ್ದು ಹೇಗೆ? ರಾಮನಗರ & ಕನಕಪುರ ಸೇರಿದಂತೆ ಎರಡು ಕಡೆ ಮೆಡಿಕಲ್ ಕಾಲೇಜು ಸ್ಥಾಪನೆ ಬಗ್ಗೆ ಡಿಸಿಎಂ ಡಿಕೆಶಿ ಹೇಳಿದ್ದು ಏನು?
ಅಂದಹಾಗೆ ಇಂದು ಕನಕಪುರದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ & ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಧಿವೇಶನದಲ್ಲಿ ಸರ್ಕಾರವನ್ನ ಕಟ್ಟಿಹಾಕಲು ವಿಪಕ್ಷಗಳ ಸಿದ್ಧತೆಗೆ ಸಂಬಂಧಿಸಿದಂತೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಮ್ಮಲ್ಲಿ ತೆಂಗಿನ ನಾರಿನ ಒಳ್ಳೆಯ ಹಗ್ಗ ಸಿಗುತ್ತದೆ. ಅದನ್ನ ಇದೀಗ ವಿರೋಧ ಪಕ್ಷಕ್ಕೆ ಕಳುಹಿಸುತ್ತೇವೆ. ನಮ್ಮನ್ನು ಅಧಿವೇಶನದಲ್ಲಿ ಅದರಿಂದ ಕಟ್ಟಿಹಾಕಲಿ ಎಂದು ವಿಪಕ್ಷಗಳ ಬಗ್ಗೆ ಡಿಸಿಎಂ ಡಿಕೆಶಿ ವ್ಯಂಗ್ಯ ಮಾಡಿದ್ದಾರೆ.

ಮೆಡಿಕಲ್ ಕಾಲೇಜು ಬಗ್ಗೆ ಬ್ರೇಕಿಂಗ್ ನ್ಯೂಸ್!
ಅಷ್ಟಕ್ಕೂ ರಾಮನಗರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ವಿಚಾರ ಸಾಕಷ್ಟು ಚರ್ಚೆಗೆ ಈಗ ದಾರಿ ಮಾಡಿಕೊಟ್ಟಿದೆ. ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಈಗ ಮೆಡಿಕಲ್ ಕಾಲೇಜು ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಮನಗರ, ಕನಕಪುರ 2 ಕಡೆ ಮೆಡಿಕಲ್ ಕಾಲೇಜು ಕೇಳಿದ್ದೇವೆ. ಈ ಸಂಬಂಧ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕೆಲವು ಕಾನೂನು, ನಿಯಮಗಳು ಇದೆ. ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಅನ್ನುವ ನಿಯಮ ಇದೆ. ಅದನ್ನ ಕನಕಪುರಕ್ಕೆ ಕೊಡಿ ಅಂತ ಕೇಳಿದ್ದೇವೆ ಎಂದಿದ್ದಾರೆ ಡಿಸಿಎಂ.
ಸಿಕ್ಕೇ ಸಿಗುತ್ತದೆ ಮೆಡಿಕಲ್ ಕಾಲೇಜು!
ಹಾಗೇ ರಾಮನಗರ ಜಿಲ್ಲೆಯಲ್ಲಿ ಮತ್ತೊಂದು ಮೆಡಿಕಲ್ ಕಾಲೇಜು ಸ್ಥಾಪನೆ ಬಗ್ಗೆ ಮಾತನ್ನ ಮುಂದುವರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಯೂನಿವರ್ಸಿಟಿ ಪಾಡಿಗೆ ಯೂನಿವರ್ಸಿಟಿ ಆಗುತ್ತೆ. ನಾವು ಮೆಡಿಕಲ್ ಕಾಲೇಜು ವಿಚಾರ ಹೇಳಿದ್ವಿ. ಅದು ಬಜೆಟ್ ವೇಳೆ ಅಪ್ರೂವ್ ಆಗಿದೆ ಆದ್ರೆ ಕಾಗದ ಪತ್ರಗಳ ಕೆಲಸ ಇನ್ನೂ ಮುಗಿಯಬೇಕಿದೆ ಎಂದರು. ಈ ಮೂಲಕ ಬೆಂಗಳೂರು ನಗರದಿಂದ ಕೂಗಳತೆ ದೂರದಲ್ಲಿ ಇರುವ ರಾಮನಗರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜಿನ ಸ್ಥಾಪನೆ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ.

ರಾಮನಗರ ಜಿಲ್ಲೆ ಬೆಂಗಳೂರಿಗೆ ಸೇರ್ಪಡೆ
ಮತ್ತೊಂದು ಕಡೆ ರಾಮನಗರ ಈಗ ಬೆಂಗಳೂರು ಸೇರ್ಪಡೆ ಬಗ್ಗೆ ನಡೆಯುತ್ತಿರುವ ಚರ್ಚೆಯ ಪ್ರಸ್ತಾಪ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾವು ಬೆಂಗಳೂರು ಅಂದ ತಕ್ಷಣ ಎಷ್ಟೆಲ್ಲ ವಿವಾದ ಆಗಿತ್ತು. ಹಲವರು ಇದಕ್ಕೆ ವಿರೋಧ ಕೂಡ ಮಾಡಿದ್ದರು. ಇದ್ಯಾವುದಕ್ಕೂ ನೀವು ತಲೆ ಕೆಡಿಸಿಕೊಳ್ಳಬೇಡಿ, ನಾವು ಬೆಂಗಳೂರು ಜಿಲ್ಲೆಯವರು. ಎಲ್ಲದಕ್ಕೂ ಕಾಲ ಕೂಡಿ ಬರುತ್ತೆ ಎಂದು ಹೇಳುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ವಿರೋಧ ಪಕ್ಷಗಳಿಗೆ ಸವಾಲು ಎಸೆದಿದ್ದಾರೆ.
ರಾಮನಗರ ಜಿಲ್ಲೆಯ ಬೆಂಗಳೂರಿಗೆ ಸೇರಿಸುವ ಕುರಿತು ಡಿಸಿಎಂ ಜನಸಂಪರ್ಕ ಸಭೆಯಲ್ಲಿ ಈ ಮಾತು ಪುನರುಚ್ಚರಿಸಿದ್ದಾರೆ. ಹಾಗೇ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸುತ್ತೇವೆ ಅಂತಾ ಕನಕಪುರದಲ್ಲಿ ಇಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಇನ್ನು, ಇದೇ ಹೇಳಿಕೆ ಮತ್ತೊಮ್ಮೆ ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಬೆಂಗಳೂರಿನ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುವ ಸೂಚನೆ ನೀಡಿದೆ.
ತಾವು ಹೈದರಾಬಾದ್ಗೆ ತೆರಳುತ್ತಿರುವ ವಿಚಾರ ತಿಳಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸಭೆ ಬಳಿಕ ಸಂಜೆ ಹೈದರಾಬಾದ್ಗೆ ತೆರಳುತ್ತಿದ್ದೇನೆ. ತೆಲಂಗಾಣ ಚುನಾವಣೆ ಕೆಲಸ ಸಾಗಿದ್ದು, ಯಾವ ರೆಸಾರ್ಟ್ ಅನ್ನೂ ಬುಕ್ ಮಾಡಿಲ್ಲ ಎಂದಿದ್ದಾರೆ ಡಿಸಿಎಂ ಡಿಕೆಶಿ. ಈ ಮೂಲಕ ನೆರೆ ರಾಜ್ಯ ತೆಲಂಗಾಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹವಾ ಮತ್ತೆ ಮುಂದುವರಿಯಲಿದೆ ಅಂತಿದ್ದಾರೆ ಅವರ ಬೆಂಬಲಿಗರು. ನಾಳೆ ಅಂದರೆ ಡಿಸೆಂಬರ್ 3ಕ್ಕೆ ತೆಲಂಗಾಣ ಸೇರಿದಂತೆ 4 ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬೀಳಿದೆ. ಆದರೆ ಮಿಜೋರಾಂ ರಾಜ್ಯದಲ್ಲಿ ರಿಸಲ್ಟ್ ಡಿಸೆಂಬರ್ 4ರಂದು ಹೊರಬೀಳಲಿದೆ.












Click it and Unblock the Notifications