ನಾನು ಸಸ್ಯಾಹಾರಿ, ಮಾಂಸ ತಿನ್ನುವುದನ್ನು ಬಿಟ್ಟಿದ್ದೇನೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಕೋಳಿ ಉದ್ಯಮ ಸಂಕಷ್ಟದಲ್ಲಿದ್ದು, ಮೊಟ್ಟೆ ಹಾಗೂ ಕೋಳಿ ಬೆಲೆ ಸಾಕಷ್ಟು ಏರಿಳಿತ ಕಾಣುತ್ತಿದೆ. ಜೊತೆಗೆ ಪಶುವೈದ್ಯಕೀಯ ಕಾಲೇಜುಗಳ ಸಮಸ್ಯೆಯನ್ನ ಕೂಡ ಪರಿಹಾರ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಅಲ್ಲದೆ ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಆಹಾರ ಪದ್ಧತಿ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ.
ಬೆಂಗಳೂರಿನ ಹೆಬ್ಬಾಳ ಪಶುವೈದ್ಯಕೀಯ ಪರಿಷತ್ನಲ್ಲಿ ನಡೆದ ವಿಶ್ವ ಮೊಟ್ಟೆ ದಿನಾಚರಣೆಯ ಉದ್ಘಾಟಿಸಿ ಮಾತನಾಡಿದ ಡಿಸಿಎಂ, ನಮ್ಮ ರಾಜ್ಯದಲ್ಲಿ ಪಶು ವೈದ್ಯರ ಸಂಖ್ಯೆ ಕಡಿಮೆ ಇದೆ. ಆದ ಕಾರಣ ಪಶುವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿ ಎಂದು ಖಾಸಗಿಯವರ ಬಳಿ ಮನವಿ ಮಾಡಿದ್ದೆ, ಅವ್ರು ನೂರಾರು ಕೋಟಿ ಬೇಕಾಗುತ್ತೆ ಅಂದ್ರು. ಸಮಸ್ಯೆಯನ್ನ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು. ಪಶು ವೈದ್ಯರಿಗೆ ಸಾಕಷ್ಟು ಬೇಡಿಕೆಯೂ ಇದ್ದು, ನೀವು ಭರವಸೆ ಕಳೆದುಕೊಳ್ಳಬಾರದು ಎಂದು ಇದೇ ವೇಳೆ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು.

ರೈತರ ಜೊತೆ ನಾನು ಮಾತನಾಡಿದೆ
ಇಲ್ಲಿಗೆ ಬಂದ ಒಂದಷ್ಟು ರೈತರನ್ನು ಮಾತನಾಡಿಸಿದೆ. ಅನೇಕರು 20,000 ದಿಂದ 50,000 ರೂ. ತನಕ ಕೋಳಿ ಸಾಕಾಣಿಕೆ ಮಾಡುತ್ತಿರುವುದಾಗಿ ತಿಳಿಸಿದರು. ಕೋಳಿ ಆಹಾರದ ಬೆಲೆಯು ಹೆಚ್ಚಳವಾಗುತ್ತಿದೆ, ಒಂದೆರಡು ದಿನ ಆರೈಕೆ ಕಡಿಮೆಯಾದರೆ ತೂಕದಲ್ಲಿ ವ್ಯತ್ಯಾಸವಾಗುತ್ತದೆ, ಈ ಕ್ಷೇತ್ರದ ಬಗ್ಗೆ ನನಗೆ ಅರಿವಿರುವ ಕಾರಣ ಇಷ್ಟೆಲ್ಲಾ ಅಂಶವನ್ನ ನಾನು ಉಲ್ಲೇಖಿಸುತ್ತಿದ್ದೇನೆ. ರೈತರಿಗೆ ಕೃಷಿ ಜೊತೆ ಉಪ ಕಸುಬಾಗಿ ಇದು ಬೆಳೆಯುವ ರೀತಿ ಯೋಜನೆ ರೂಪಿಸೋಣ ಎಂದು ಇದೇ ವೇಳೆ ಸಲಹೆ ನೀಡಿದರು ಡಿಸಿಎಂ ಡಿ.ಕೆ.ಶಿವಕುಮಾರ್.
ಡಿಸಿಎಂ ಡಿ.ಕೆ.ಶಿವಕುಮಾರ್ ಸಂಪೂರ್ಣ ಸಸ್ಯಾಹಾರಿ!
ನಾನು ನಂಬಿದ ದೈವ ಸಸ್ಯಹಾರಿ ಆಗಿರಬೇಕು ಎಂದು ಹೇಳಿದ ಕಾರಣ ಮಾಂಸ ತಿನ್ನುವುದನ್ನು ಬಿಟ್ಟಿದ್ದೇನೆ. ಆದರೆ ಈ ದೇಶದ ಬಹುತೇಕ ಜನರ ಆಹಾರ ಕ್ರಮ ಗೌರವಿಸುತ್ತೇನೆ ಎಂದು ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಅಲ್ಲದೆ ನನ್ನ ವ್ಯವಹಾರಿಕ ಜೀವನ ಆರಂಭ ಆಗಿದೇ ಕೋಳಿ ಫಾರಂನಿಂದ. ಪಿಯುಸಿ ರಜೆ ವೇಳೆಯಲ್ಲಿ ಇದೇ ಸಂಸ್ಥೆಯಲ್ಲಿ 15 ದಿನಗಳ ಕಾಲ ಕೋಳಿ ಸಾಕಾಣಿಕೆಯ ಬಗ್ಗೆ ತರಬೇತಿ ಪಡೆದಿದ್ದೆ ಎಂದು ತಮ್ಮ ಹಳೆಯ ನೆನಪಿಗೆ ಜಾರಿದರು.
ನನಗೂ, ಕೋಳಿ ವ್ಯವಹಾರಕ್ಕೂ ಸಂಬಂಧ!
ತರಬೇತಿ ನಂತರ ಬ್ಯಾಂಕ್ನಲ್ಲಿ ಸಾಲ ಪಡೆದು ಸುಂಕದಕಟ್ಟೆ ಮತ್ತು ಹೆಗ್ಗನಹಳ್ಳಿಯಲ್ಲಿ ಕೋಳಿ ಫಾರಂ ಸ್ಥಾಪಿಸಿದೆ. ನಷ್ಟವಾಯಿತು ಅದಕ್ಕೆ ಆ ವ್ಯವಹಾರ ಬಿಟ್ಟುಬಿಟ್ಟೆ. ನಂತರ ನಮ್ಮ ತಂದೆ ಮತ್ತು ತಾಯಿ ಊರಿನ ಜಮೀನಿನಲ್ಲಿ ಐದು ಶೆಡ್ ನಿರ್ಮಾಣ ಮಾಡಿದ್ದರು ನಾನು ನನ್ನ ತಮ್ಮ ಕೆಲಸದ ಒತ್ತಡದ ನಡುವೆ ನೋಡಿಕೊಳ್ಳಲು ಹೋಗಲಿಲ್ಲ. ನನಗೂ & ಕೋಳಿ ವ್ಯವಹಾರಕ್ಕೂ ಅವಿನಾಭಾವ ಸಂಬಂಧವಿದೆ ಎನ್ನುವ ಮೂಲಕ ಜೀವನದ ಘಟನೆಗಳನ್ನು ಸ್ಮರಿಸಿಕೊಂಡರು.

ಮಾಂಸಹಾರಕ್ಕೂ ಪ್ರೋತ್ಸಾಹ ಇದ್ದೇ ಇರುತ್ತದೆ
ಹಿಟ್ಟನ್ನು (ಮುದ್ದೆ) ಉಂಬುವನು ಬೆಟ್ಟವನು ಎತ್ತುವನು, ಜೋಳವನು ತಿನ್ನುವವನು ತೋಳದಂತಾಗುವನು ಅದೇ ರೀತಿ ಮೊಟ್ಟೆಯನು ತಿನ್ನುವವನು ಜಟ್ಟಿಯಂತಾಗುವನು ಎಂದು ಹಿರಿಯರು ಹೇಳುತ್ತಾ ಇದ್ದರು. ಅಂದರೆ ನಮ್ಮ ಆಹಾರದಂತೆ ಆರೋಗ್ಯ ಇರುತ್ತದೆ. ಒಂದೇ ನಾಣ್ಯದ ಎರಡು ಮುಖ ಇವು, ಯಾವುದನ್ನು ಕಡೆಗಣನೆ ಮಾಡಬಾರದು ಎಂದರು. ಕೋಳಿ, ಕುರಿ, ಮೇಕೆ ಸೇರಿದಂತೆ ಮಾಂಸಹಾರಕ್ಕೆ ನಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ. ಇದೆಲ್ಲಾ ಇರದೆ ಇದ್ದರೆ ಸಮೂಹತನ ಇರುವುದಕ್ಕೆ ಸಾಧ್ಯವೇ ಇಲ್ಲ ಎಂದು ಡಿಸಿಎಂ ಅಭಿಪ್ರಾಯಪಟ್ಟರು.
ಸಣ್ಣ ರೋಗದ ಸುದ್ದಿ ಹಬ್ಬಿದರೂ ಮೊದಲು ನಾಶ ಮಾಡುವುದೇ ಕೋಳಿಗಳನ್ನ, ಸರ್ಕಾರಕ್ಕೆ ಇದರ ಬಗ್ಗೆ ಅರಿವಿದೆ, ಎಲ್ಲರ ಜೊತೆ ಚರ್ಚೆ ಮಾಡಿ ಪರಿಹಾರ ಸೂತ್ರ ಕಂಡುಹಿಡಿಯುತ್ತೇವೆ ಎಂದು ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದ ರೈತರಿಗೆ ಭರವಸೆ ನೀಡಿದರು.
ಮನುಷ್ಯ ಪ್ರಕೃತಿ ವಿರುದ್ಧ ಹೋಗ್ತಿದ್ದಾನೆ!
ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಕೊಬ್ಬು ಹೆಚ್ಚಿಲ್ಲದ ಮೊಟ್ಟೆ ಪ್ರಯೋಗ ನಡೆದಿತ್ತು ಅದನ್ನ ಪರಿಚಯಿಸುವ ಸಭೆ ಕರೆಯಲಾಗಿತ್ತು, ಆದರೆ ನನಗೆ ಆಗ ಅದರ ಬಗ್ಗೆ ಹೆಚ್ಚು ಜ್ಞಾನವಿರಲಿಲ್ಲ. ಇತ್ತೀಚೆಗೆ ನನ್ನ ಮಕ್ಕಳು ಗಿಡದಲ್ಲಿ ಮೊಟ್ಟೆ ಬೆಳೆಯುತ್ತಿದ್ದಾರೆ ಎಂದು ವಿಡಿಯೋ ತೋರಿಸಿದರು. ಅದನ್ನ ನೋಡಿ ನನಗೆ ಮನುಷ್ಯ ಪ್ರಕೃತಿ ವಿರುದ್ದ ಹೋಗ್ತಿದಾನಲ್ಲ ಎಂದು ಆಶ್ಚರ್ಯವೂ ಆಯಿತು. ಅದು ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ ಅಂದ್ರು ಡಿಸಿಎಂ ಡಿಕೆ ಶಿವಕುಮಾರ್.
ಅಶ್ವಂ ನೈವ ಗಜಂ ನೈವ, ವ್ಯಾಘ್ರಂ ನೈವ ಚ ನೈವ ಚ. ಅಜಾ ಪುತ್ರಂ ಬಲಿಂ ದದ್ಯಾತ್, ದೇವೋ ದುರ್ಬಲ ಘಾತಕಃ ಅಂದರೆ ನಮ್ಮ ಊರಿನಲ್ಲಿ ಕಬ್ಬಾಳಮ್ಮ, ಬೇರೆ ಕಡೆ ಮಾರಮ್ಮ ದೇವರಿದ್ದಾವೆ. ಈ ದೇವರುಗಳು ಬಲಿ ತೆಗೆದುಕೊಳ್ಳುವಾಗ, ಹೆಚ್ಚು ದುರ್ಬಲ ಪ್ರಾಣಿಗಳನ್ನ ತೆಗೆದುಕೊಳ್ಳುತ್ತದೆಯೇ ಹೊರತು, ಆನೆಯಂತಹ ಶಕ್ತಿಶಾಲಿ ಪ್ರಾಣಿಗಳನ್ನು ಮುಟ್ಟುವುದಿಲ್ಲ ಎಂಬುದು ಇದರ ಅರ್ಥ ಎಂದು ತಿಳಿಸಿದರು.












Click it and Unblock the Notifications