ದಾವಣಗೆರೆ : ಹಳಿಯ ಬಿರುಕು ನೋಡಿ ರೈಲು ನಿಲ್ಲಿಸಿದ ಬಾಲಕ
ದಾವಣಗೆರೆ, ಮಾ. 16 : ಹನ್ನೆರಡು ವರ್ಷದ ಬಾಲಕನೊಬ್ಬ ಬಿರುಕು ಬಿಟ್ಟಿದ್ದ ರೈಲ್ವೆ ಹಳಿಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ದಾವಣಗೆರೆಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಸುಮಾರು 20 ನಿಮಿಷಗಳ ನಂತರ ರೈಲು ಮುಂದೆ ಸಾಗಿದೆ.
ದಾವಣಗೆರೆ ಡಿಸಿಎಂ ಟೌನ್ಷಿಪ್ ಬಳಿ ಭಾನುವಾರ ಈ ಘಟನೆ ನಡೆದಿದೆ. ಆವರಗೆರೆಯ ಸಿದ್ದೇಶ್ ಎಂಬ ಬಾಲಕ ಹಳಿ ಬಿರುಕು ಬಿಟ್ಟಿರುವ ಕುರಿತು ಮಾಹಿತಿ ನೀಡಿ, ಅದೇ ಮಾರ್ಗದಲ್ಲಿ ಬರುತ್ತಿದ್ದ ಹರಿಹರ-ಚಿತ್ರದುರ್ಗ ಪ್ಯಾಸೆಂಜರ್ ರೈಲನ್ನು ನಿಲ್ಲಿಸಿದ್ದಾನೆ. [ರೈಲ್ವೆ ಬಜೆಟ್ 2015ರ ಮುಖ್ಯಾಂಶಗಳು]

ಘಟನೆಯ ವಿವರ : ಡಿಸಿಎಂ ಟೌನ್ಷಿಪ್ ರೈಲ್ವೆ ಹಳಿಯ ಸಮೀಪ ಸಿದ್ದೇಶ್ ತಂದೆ ಮಂಜುನಾಥ್ ಹೋಟೆಲ್ ಇಟ್ಟುಕೊಂಡಿದ್ದಾರೆ. ಬೆಳಗ್ಗೆ 7 ಗಂಟೆಗೂ ಮೊದಲು ಆ ಮಾರ್ಗದಲ್ಲಿ ರೈಲು ಹೋಗುವಾಗ ವಿಭಿನ್ನ ರೀತಿಯ ಶಬ್ದ ಕೇಳಿಬಂದಿತ್ತು. ಇದನ್ನು ಗಮನಿಸಿದ್ದ ಮಂಜುನಾಥ್ ಬೆಳಗ್ಗೆ 7 ಗಂಟೆಗೆ ಹೋಟೆಲ್ಗೆ ಬಂದ ಸಿದ್ದೇಶ್ನನ್ನು ಅದೇನು ಶಬ್ದ ನೋಡಿಕೊಂಡು ಬಾ ಎಂದು ಕಳಿಸಿದ್ದಾರೆ.
ರೈಲ್ವೆ ಹಳಿಯ ಸಮೀಪ ಬಂದ ಸಿದ್ದೇಶ್ ಹಳಿಯ ನಡುವೆ ಚಿಕ್ಕ ಬಿರುಕು ಉಂಟಾಗಿರುವುದನ್ನು ನೋಡಿದ್ದಾನೆ ತಕ್ಷಣ ಅದನ್ನು ತಂದೆಗೆ ತಿಳಿಸಿದ್ದಾನೆ. ಹೋಟೆಲ್ನಲ್ಲಿದ್ದ ಜನರು ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಧಾವಿಸಿದ್ದಾರೆ. [ಆನೇಕಲ್ ರೈಲು ದುರಂತಕ್ಕೆ ಅಧಿಕಾರಿಗಳು ಕಾರಣ?]
ಇದೇ ಸಮಯದಲ್ಲಿ ಹರಿಹರ-ಚಿತ್ರದುರ್ಗ ಪ್ಯಾಸೆಂಜರ್ ರೈಲು ಅದೇ ಮಾರ್ಗದಲ್ಲಿ ಬಂದಿದೆ. ಆಗ ತನ್ನ ಅಂಗಿಯನ್ನು ಬಿಚ್ಚಿ ಬೀಸುತ್ತ ರೈಲು ಚಾಲಕನ ಗಮನ ಸೆಳೆದ ಸಿದ್ದೇಶ್ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ. ರೈಲಿನಿಂದ ಇಳಿದು ಸ್ಥಳಕ್ಕೆ ಬಂದ ಚಾಲಕರು ಹಳಿಯ ಬಿರುಕು ಗಮನಿಸಿ, ದಾವಣಗೆರೆ ರೈಲ್ವೆ ಎಂಜಿನಿಯರ್ ಮತ್ತು ಪೊಲೀಸರಿಗೆ ಮಾಹಿತಿ ಕಳುಹಿಸಿದ್ದಾರೆ.
ಸುಮಾರು 20 ನಿಮಿಷಗಳ ರಿಪೇರಿ ನಂತರ ರೈಲು ಮುಂದೆ ಚಲಿಸಿದೆ. ಬಾಲಕನ ಸಮಯ ಪ್ರಜ್ಞೆ ಮೆಚ್ಚುಗೆಗೆ ಪಾತ್ರವಾಗಿದೆ. ಬೇಸಿಗೆಯಲ್ಲಿ ಹಳಿಯಲ್ಲಿ ಸಣ್ಣ ಬಿರುಕು ಮೂಡುವುದು ಸಾಮಾನ್ಯ ಇದರಿಂದ ಯಾವುದೇ ಅಪಾಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications