ಕ್ಯಾಮ್ಸ್ ಶಶಿಕುಮಾರ್ ಕೊಲೆಗೆ ಯತ್ನಿಸಿದ ಕಿಡ್ನಾಪರ್ ಕರಾಳ ಚರಿತ್ರೆ!
ಬೆಂಗಳೂರು, ಆಗಸ್ಟ್, 09: ಆತ ಹೊಟ್ಟೆಪಾಡಿಗಾಗಿ ಕುಲುಮೆ ಕೆಲಸ ಮಾಡುತ್ತಿದ್ದ. ತನ್ನ ಮಗನ ಶಾಲಾ ಶುಲ್ಕ ಕಟ್ಟಲಾಗದ ಸ್ಥಿತಿ. ತನ್ನ ಮಗ ಓದುತ್ತಿದ್ದ ಶಾಲೆಯಲ್ಲಿ ಕಿರಿಕ್ ಮಾಡಿ ವಸೂಲಿ ಮಾಡಿದ್ದೇ ಅದನ್ನೇ ಕಾಯಕ ಮಾಡಿಕೊಂಡ. ಭದ್ರಯ್ಯ ಎಂಬ ಶಿಕ್ಷಕನನ್ನು ಅಪಹರಿಸಿ ಸತ್ಯ ಮಂಗಲ ಕಾಡಿನಲ್ಲಿ ಕೂತು ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದ! ಕೋಕಾ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿ ಜೈಲಿನಿಂದ ಬಂದ ಆತ ಕ್ಯಾಮ್ಸ್ ಶಶಿಕುಮಾರ್ ಹತ್ಯೆಗೆ ಸಂಚು ರೂಪಿಸಿ ಹೊಂಚು ಹಾಕಿ ಕಾಯುತ್ತಿದ್ದ!
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮೇಲೆ ಮಚ್ಚು ಲಾಂಗುಗಳಿಂದ ದಾಳಿ ಮಾಡಿಸಿದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ರವಿಕುಮಾರ್ ನ ಹಿನ್ನೆಲೆಯಿದು. ಪೋಷಕರ ಸಂಘಟನೆಯಲ್ಲಿ ಆಯಕಟ್ಟಿನ ಜಾಗದಲ್ಲಿ ಕೂತು ನ್ಯಾಯದ ಹೆಸರಿನಲ್ಲಿ ವಸೂಲಿಗೆ ಇಳಿದದ್ದ ರವಿಕುಮಾರ್ ನ ಅಸಲಿ ಚಿತ್ರಣವಿದು. ಪೋಷಕರ ಸಂಘಟನೆ ಹೆಸರಿನ ಸದಸ್ಯ ಎಂದುಕೊಂಡು ಶಾಲೆಗಳನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡಿದ ಅನೇಕ ಪ್ರಕರಣಗಳು ದಾಖಲಾಗಿವೆ. ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದರೂ ತನ್ನ ಪಾತಕ ಕೃತ್ಯಗಳನ್ನು ಮಂದುವರೆಸಿರುವುದು ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ.
ಇತ್ತೀಚೆಗೆ ಜಾಲಹಳ್ಳಿಯಲ್ಲಿ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಮೇಲೆ ಲಾಂಗುಗಳಿಂದ ಮಾರಕ ದಾಳಿ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ರವಿಕುಮಾರ್ ತಲೆ ಮರೆಸಿಕೊಂಡಿದ್ದಾನೆ. ಇನ್ನೂ ಬಂಧಿತ ಐವರು ಆರೋಪಿಗಳನ್ನು ವಿಚಾರಣೆ ನಡೆಸಿದಾಗ ರವಿಕುಮಾರ್ ವಸೂಲಿ ದಂಧೆ ವಿರುದ್ಧ ಕಾನೂನು ಸಮರ ಮಾಡಿದ್ದ ಶಶಿಕುಮಾರ್ರನ್ನು ಮುಗಿಸಲು ಸಂಚು ರೂಪಿಸಿದ್ದರು. ಇದಕ್ಕಾಗಿ ಶಶಿಕುಮಾರ್ ಮನೆ ಸಮೀಪ ಆರು ತಿಂಗಳ ಹಿಂದೆಯೇ ಬಾಡಿಗೆ ಮನೆ ಮಾಡಿ ಅಲ್ಲಿ ಮೊಕ್ಕಾಂ ಹೂಡಿದ್ದರು. ಶಶಿಕುಮಾರ್ ಚಲನವಲನ ಗಮನಿಸಿ ದಾಳಿಗೆ ಯತ್ನಿಸುತ್ತಿದ್ದರು.
ಅದರಂತೆ ಶಶಿಕುಮಾರ್ ಕಾರಿನಿಂದ ಇಳಿದು ಹೋಗುವಾಗ ನಾಲ್ವರು ಲಾಂಗುಗಳಿಂದ ಹಲ್ಲೆ ಮಾಡಿದ್ದರು. ಶಶಿಕುಮಾರ್ ಆತ್ಮ ರಕ್ಷಣೆಗೆ ಪಿಸ್ತೂಲು ಹೊರ ತೆಗೆದಾಗ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ ಜಾಲಹಳ್ಳಿ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಐವರು ಅರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಅರೋಪಿ ರವಿಕುಮಾರ್ ತಲೆ ಮರೆಸಿಕೊಂಡಿದ್ದಾನೆ. ಶಶಿಕುಮಾರ್ ಖಾಸಗಿ ಇಂಗ್ಲೀಷ್ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ. ಪೋಷಕರ ಸಂಘಟನೆಯ ಹೋರಾಟ ಮತ್ತು ನ್ಯಾಯ ಕೊಡಿಸುವ ನೆಪದಲ್ಲಿ ಸದಸ್ಯತ್ವ ಪಡೆದಿದ್ದ ರವಿಕುಮಾರ್ ಅಕ್ರಮ ಕಾನೂನು ಮೂಲಕ ನಿರ್ಮೂಲನೆ ಮಾಡಿದ್ದೆ.
ಹೀಗಾಗಿ ನನ್ನ ಮೇಲೆ ದ್ವೇಷ ಕಾರುತ್ತಿದ್ದ. ಪೊಲೀಸರು ಹೇಳಿದಂತೆ ಅವನಿಗೂ ಕ್ಯಾಮ್ಸ್ಗೂ ಯಾವ ಸಂಬಂಧವಿಲ್ಲ. ಅವನು ಪಾಲಕ ಪೋಷಕರ ಸಂಘಟನೆಯ ಸದಸ್ಯ. ಅವನ ಅಕ್ರಮಗಳನ್ನು ಕಾನೂನು ಮೂಲಕ ತಡೆ ಹಾಕಿದ್ದಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದ. ಈ ಹಿಂದೆ ಕಿಮ್ಮನೆ ರತ್ನಾಕರ್ ಸಚಿವರಾಗಿದ್ದಾಗಲೂ ನನ್ನ ಜತೆ ಜಗಳ ಮಾಡಿಕೊಂಡಿದ್ದ. ಖಾಸಗಿ ಶಾಲೆಗಳನ್ನು ಸುಲಿಗೆ ಮಾಡುವ ಅವನ ದಂಧೆಗೆ ಬ್ರೇಕ್ ಬೀಳುತ್ತದೆ ಎನ್ನುವ ಕಾರಣಕ್ಕೆ ನನ್ನ ಹತ್ಯೆಗೆ ಯತ್ನಿಸಿದ್ದಾನೆ. ಅವನಿಗೂ ಕ್ಯಾಮ್ಸ್ ಸಂಘಟನೆಗೂ ಯಾವ ಸಂಬಂಧವೂ ಇಲ್ಲ ಎಂದು ಶಶಿಕುಮಾರ್ ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನಾಪತ್ತೆಯಾದವನ ಹಿನ್ನೆಲೆ ಏನು?: ರವಿಕುಮಾರ್ ಅರ್ಟಿಐ ಅಸ್ತ್ರ ಬಳಸಿ ಅಧಿಕಾರಿಗಳನ್ನು ಹೆದರಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಅಧಿಕಾರಿಗಳು ಕೂಡ ರವಿಕುಮಾರ್ನನ್ನು ನೋಡಿದರೆ ಭಯ ಬೀಳುತ್ತಿದ್ದರು. ಅವನಿಗೆ ರಾಜ ಮಾರ್ಯದೆ ಕೊಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ಸಣ್ಣ ಪುಟ್ಟ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಶಾಲೆಗಳ ಬಳಿ ಸುಲಿಗೆ ಮಾಡಲು ಯತ್ನಿಸುತ್ತಿದ್ದ. ಆಟೋ ಚಾಲಕರನ್ನು ಗುಂಪು ಕಟ್ಟಿಕೊಂಡು ಶಾಲೆಗಳ ಮುಂದೆ ಪ್ರತಿಭಟನೆ ಮಾಡುವ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ.
ಈತನ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣ ದಾಖಲಾಗಿವೆ. ಹೀಗೆ ಸಣ್ಣ ಪುಟ್ಟ ಹೋರಾಟದ ಹೆಸರಿನಲ್ಲಿ ಶಾಲೆಗಳಿಂದ ವಸೂಲಿ ಮಾಡುತ್ತಿದ್ದ. ಕೆಲವು ವರ್ಷಗಳ ಹಿಂದೆ ಭದ್ರಯ್ಯ ಎಂಬ ಮುಖ್ಯ ಶಿಕ್ಷಕನನ್ನು ಅಪಹರಣ ಮಾಡಿ ಸತ್ಯ ಮಂಗಲ ಕಾಡಿಗೆ ಕರೆದೊಯ್ದಿದ್ದ. ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಎರಡು ಬೇಡಿಕೆಗಳನ್ನು ಈಡೇರಿಸುವಂತೆ ಪೊಲೀಸರಿಗೆ ಸೂಚಿಸಿದ್ದ. ಕ್ಯಾಮ್ಸ್ ಶಶಿಕುಮಾರ್ರನ್ನು ಒಪ್ಪಿಸಬೇಕು. ಮೂರು ಕೋಟಿ ರೂ. ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದ. ಆಗ ಪೊಲೀಸರು ಚಾಣಾಕ್ಷತೆ ಮರೆದು ರವಿಕುಮಾರ್ನ ಮಗನನ್ನು ವಶಕ್ಕೆ ಪಡೆದು ಪ್ರಕರಣಕ್ಕೆ ಸುಖಾಂತ್ಯವಾಡಿದ್ದರು. ಈ ಪ್ರಕರಣದಲ್ಲಿ ರವಿಕುಮಾರ್ ಜೈಲಿಗೆ ಹೋಗಿದ್ದ. ಕೋಕಾ ಕಾಯ್ದೆ ಅಡಿ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದ್ದರು.
ಜೈಲಿನಿಂದ ಬಂದ ಬಳಿಕ ಖಾಸಗಿ ಶಾಲಾ ಶುಲ್ಕ ವಿಚಾರವಾಗಿ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ತಿಕ್ಕಾಟ ಶುರುವಾಯಿತು. ಈ ಪರಿಸ್ಥಿತಿ ಲಾಭ ಪಡೆಯಲು ಯತ್ನಿಸಿದ ರವಿಕುಮಾರ್ ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ರಕ್ಷಣೆ ಕಾರ್ಯದಲ್ಲಿ ತೊಡಗಿರುವ ರಾಜ್ಯದ ಬಹುದೊಡ್ಡ ಸಂಘಟನೆ ಕ್ಯಾಮ್ಸ್ ಮೇಲೆ ಕಣ್ಣು ಹಾಕಿದ. ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹತ್ಯೆ ಮಾಡಿದರೆ ಪೋಷಕರ ಸಂಘಟನೆಯನ್ನು ಪ್ರಭಾವಿಯಾಗಿ ಬೆಳೆಸಬಹುದು. ಮಾತ್ರವಲ್ಲದೇ, ಪೋಷಕರ ಸಂಘಟನೆಯಲ್ಲಿ ಉನ್ನತ ಸ್ಥಾನ ಗಳಿಸಿ ಶಿಕ್ಷಣ ಸಂಸ್ಥೆಗಳಿಂದ ಸುಲಿಗೆ ಮಾಡಬಹುದು ಎಂಬ ದುರುದ್ದೇಶದಿಂದಲೇ ಹತ್ಯೆಗೆ ಸಂಚು ರೂಪಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅಪಹರಣ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ರವಿಕುಮಾರ್ ಜೈಲಿನಿಂದ ಬಂದರೂ ಅದೇ ಅಪರಾಧ ಕೃತ್ಯಗಳನ್ನು ಮಾಡುತ್ತಿರುವುದು ಪೊಲೀಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ರವಿಕುಮಾರ್ಗಾಗಿ ಜಾಲಹಳ್ಳಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Recommended Video
ಗೃಹ ಸಚಿವರ ಭೇಟಿ: ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಶಾಲೆಗಳನ್ನು ನೋ ಟಾಲರೆನ್ಸ್ ಜೋನ್ ಮಾಡಿ ಆದೇಶ ಹೊರಡಿಸುವಂತೆ ಮನವಿ ಮಾಡಿದ್ದಾರೆ. ಆಸ್ಪತ್ರೆಗಳು ಹಾಗೂ ವೈದ್ಯರಿಗೆ ಕೊಟ್ಟಿರುವ ಭದ್ರತೆ ಮಾದರಿಯಲ್ಲಿ ಶಾಲಾ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರಿಗೆ ಭದ್ರತೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಮನವಿಗೆ ಸಕಾರಾತ್ಮಕವಾಗಿ ಗೃಹ ಸಚಿವರು ಸ್ಪಂದಿಸಿದ್ದಾರೆ.