ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಧಮ್ಮೂರು ಜಲಪಾತ
ಬಾಗಲಕೋಟೆ, ಅಕ್ಟೋಬರ್ 10 : ಈ ನೀರಲ್ಲಿ ಮಿಂದೆದ್ದರೆ ಕೇವಲ ಮೈ ತಣ್ಣಗಾಗುವುದಿಲ್ಲ. ಈ ನೀರಲ್ಲಿ ದೇಹವನ್ನು ಹಗುರವಾಗಿಸುವ ಮಾಯೆ ಇದೆ. ತನ್ನ ಸೌಂದರ್ಯದಿಂದ ಎಲ್ಲರನ್ನು ಸೆಳೆಯುವ ಆಕರ್ಷಣೆ ಈ ಜಲಪಾತಕ್ಕಿದೆ. ಈ ನೀರಲ್ಲಿ ಖಾಯಿಲೆ ವಾಸಿ ಮಾಡುವ ಔಷಧಿಯ ಗುಣವಿದೆ. ಈ ಜಲಪಾತ ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ಇದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧಮ್ಮೂರು ಗ್ರಾಮದಲ್ಲಿರುವ ಜಲಪಾತ. ಬಾಗಲಕೋಟೆಯಿಂದ ಸುಮಾರು 40 ಕಿ.ಮೀ.ದೂರದಲ್ಲಿರುವ ಈ ಜಲಪಾತ 'ಧಮ್ಮೂರು ಫಾಲ್ಸ್' ಎಂದು ಪ್ರಸಿದ್ಧಿ ಪಡೆದಿದೆ. ಧಮ್ಮೂರಿನ ಬೆಟ್ಟದ ಮೇಲಿಂದ ಧುಮ್ಮುಕ್ಕುವ ನೀರು ಜನರನ್ನು ಸೆಳೆಯುತ್ತದೆ.

ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮರಗಿಡ. ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಮಲೆನಾಡಿನ ಅನುಭವವಾಗುತ್ತದೆ. ಹಚ್ಚ ಹಸಿರಿನ ಸುಂದರ ರಮಣೀಯ ತಾಣದ ಮಧ್ಯೆ ಸುರಿಯುತ್ತಿರುವ ತಂಪೆರೆಯುವ ಜಲಧಾರೆ ಮನಸ್ಸಿಗೆ ಮುದ ನೀಡುತ್ತದೆ. ಪಕ್ಕದಲ್ಲಿ ಬಸವಣ್ಣನ ದೇವಾಲಯವಿದೆ.

ಬಾದಾಮಿ ಚಾಲುಕ್ಯರ ಕಾಲದ ಐತಿಹಾಸಿಕ ಸ್ಥಳ ಐಹೊಳೆಗೆ ಕೇವಲ 10 ಕೀ.ಮಿ. ದೂರದಲ್ಲಿದೆ ಈ ಜಲಪಾತ. ಇಲ್ಲಿಂದ 6 ರಿಂದ 7 ಕಿ.ಮೀ. ಅಂತರದಲ್ಲಿ ಕರದಂಟಿಗೆ ಪ್ರಸಿದ್ಧವಾಗಿರುವ ಅಮೀನಗಡ ಇದೆ. ಬಾಗಲಕೋಟೆಯಿಂದ ಹೆದ್ದಾರಿ ಮೂಲಕ ಅಮೀನಗಡಕ್ಕೆ ಬಂದು 'ಧಮ್ಮೂರ್ ಫಾಲ್ಸ್' ಎಂದು ಕೇಳಿದರೆ ಯಾರಾದರೂ ದಾರಿ ತೋರಿಸುವರು.
ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರಾ ಮಳೆಯಿಂದಾಗಿ ಧಮ್ಮೂರು ಜಲಪಾತ ಮೈದುಂಬಿದೆ. ಬೆಟ್ಟದ ಮೇಲಿಂದ ಧುಮ್ಮುಕ್ಕುತ್ತಿರುವ ಜಲಧಾರೆ ಸಾವಿರಾರು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಜಲಧಾರೆಯನ್ನು ನೋಡಲು ಪ್ರತಿದಿನ ಕುಟುಂಬ ಸಮೇತ ಬರುವ ಪ್ರವಾಸಿಗರು ಜಲಧಾರೆಯಲ್ಲಿ ಮಿಂದು ಸಂತಸ ಪಡುತ್ತಿದ್ದಾರೆ. ನಂತರ ಬಸವಣ್ಣನ ದರ್ಶನ ಮಾಡುತ್ತಾರೆ.

ಪ್ರತಿವರ್ಷ ಮಳೆಗಾಲ ಬಂತೆಂದೆರೆ ಧಮ್ಮೂರು ಫಾಲ್ಸ್ ಪ್ರತಿನಿತ್ಯ ಸಾವಿರಾರು ಜನರನ್ನು ಸೆಳೆಯುತ್ತದೆ. ಯಾವುದೇ ಕೃತಕ ಅಲಂಕಾರಗಳಿಲ್ಲದೇ ಪ್ರಕೃತಿ ದೇವತೆಯ ಮಡಿಲಲ್ಲಿ ಸೃಷ್ಟಿಯಾದ ಸುಂದರ ಜಲಪಾತವಿದು. ಜಲಧಾರೆಯ ಪಕ್ಕ ಸುಂದರವಾದ ಕೆರೆ ಇದ್ದು, ಇದು ಕೂಡಾ ಪ್ರವಾಸಿ ತಾಣಕ್ಕೆ ಮತ್ತಷ್ಟು ಮೆರಗು ನೀಡಿದೆ.
ಈ ಜಲಧಾರೆ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಮರ-ಗಿಡಗಳ ಬೇರುಗಳ ಮಧ್ಯೆ ಹರಿದು ಬರುವ ನೀರಿನಲ್ಲಿ ಔಷಧೀಯ ಗುಣವಿದೆ. ಈ ಜಲಧಾರೆಯಲ್ಲಿ ಸ್ನಾನ ಮಾಡಿದರೆ ಚರ್ಮರೋಗ ಗುಣವಾಗುತ್ತದೆ ಎಂಬ ನಂಬಿಕೆ ಇದೆ.
ಈ ಪ್ರವಾಸಿ ತಾಣವನ್ನು ಅಭಿವೃದ್ದಿ ಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ. ದೂರದ ಜೋಗ ಜಲಪಾತ, ಅಬ್ಬಿ ಜಲಪಾತಗಳನ್ನು ನೋಡಲು ಆಗದ ಜನರು ಇಲ್ಲಿಗೆ ಆಗಮಿಸಿ, ಜಲಪಾತದ ಅಂದ ಸವಿಯುತ್ತಾರೆ. ದಿನದಿಂದ ದಿನಕ್ಕೆ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಹೆಚ್ಚಾಗುತ್ತಿದ್ದಾರೆ. ಜಲಪಾತದ ಸೌಂದರ್ಯವನ್ನು ಇಲ್ಲಿಗೆ ಭೇಟಿ ನೀಡಿಯೇ ಸವಿಯಬೇಕು.












Click it and Unblock the Notifications