ಜಲಾಶಯಗಳ ನೀರು ಕುಡಿಯುವ ನೀರಿಗಾಗಿ ಮಾತ್ರ
ಬೆಂಗಳೂರು, ಮಾರ್ಚ್ 14 : ಬೇಸಿಗೆಯಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಕಾಣಿಸಿಕೊಂಡಿರುವ ಕಾರಣ ಜಲಾಶಯಗಳಲ್ಲಿನ ನೀರನ್ನು ಕೃಷಿ ಚಟುವಟಿಕೆಗೆ ಬಂದ್ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸದ್ಯ, ಜಲಾಶಯದಲ್ಲಿರುವ ನೀರನ್ನು ಕುಡಿಯುವ ನೀರು ಪೂರೈಕೆ ಮಾಡಲು ಮಾತ್ರ ಬಳಸಲಾಗುತ್ತದೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರು, 'ಜಲಾಶಯದಲ್ಲಿರುವ ನೀರನ್ನು ಕುಡಿಯಲು ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಕೆ.ಆರ್.ಎಸ್, ಆಲಮಟ್ಟಿ, ತುಂಗಭದ್ರಾ ಸೇರಿ ರಾಜ್ಯದ ಎಲ್ಲ ಜಲಾಶಯಗಳಲ್ಲಿರುವ ನೀರನ್ನು ಕುಡಿಯಲು ಮಾತ್ರವೇ ಒದಗಿಸಬೇಕು' ಎಂದು ಸೂಚಿಸಲಾಗಿದೆ ಎಂದರು. [ಕುಡಿಯುವ ನೀರು ನೀಡಿದವರಿಗೆ ಅನಂತ ಧನ್ಯವಾದ]
'ನಾರಾಯಣಪುರದಂತಹ ಕೆಲ ಜಲಾಶಯಗಳಲ್ಲಿರುವ ನೀರನ್ನು ವಿದ್ಯುತ್ ಉತ್ಪಾದಿಸಿಯೂ ಕುಡಿಯುವ ನೀರಿಗೆ ಒದಗಿಸಬಹುದಾಗಿರುವುದರಿಂದ ಅಂತಲ್ಲಿ ಮಾತ್ರ ವಿದ್ಯುತ್ ಉತ್ಪಾದಿಸಲು ಅವಕಾಶ ಮಾಡಿಕೊಡಲಾಗುತ್ತದೆ' ಎಂದು ಹೇಳಿದರು.[ಬಂಗಾರಪೇಟೆಯ 4 ಗ್ರಾಮಗಳಿಗೆ ನೀರಿನ ತಲೆಬಿಸಿ ಇಲ್ಲ]
'ರಾಜ್ಯದ 5 ಲಕ್ಷ ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸುವ ಕಾರ್ಯ ಆರಂಭವಾಗಿದ್ದು ಉಳಿದ ಕಡೆಯೂ ಈ ಕಾರ್ಯ ತತ್ವರಿತವಾಗಿ ನಡೆಯಲಿದೆ. ಹನಿ ನೀರಾವರಿಯಿಂದಾಗಿ ರಾಜ್ಯದಲ್ಲಿ 186 ಟಿಎಂಸಿ ನೀರು ಉಳಿತಾಯವಾಗಲಿದೆ' ಎಂದು ತಿಳಿಸಿದರು. [ಕೋಲಾರ ಸೇರಿ 4 ಜಿಲ್ಲೆಗಳಿಗೆ 24 ಟಿಎಂಸಿ 'ಜಲಭಾಗ್ಯ' : ಸಿದ್ದರಾಮಯ್ಯ]
'ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಈಗಾಗಲೇ 60 ಕೆರೆಗಳನ್ನು ತುಂಬಿಸುವ ಕಾರ್ಯ ನಡೆದಿದ್ದು ಈ ಪೈಕಿ 14 ಕೆರೆಗಳನ್ನು ಭರ್ತಿ ಮಾಡುವ ಕಾರ್ಯ ಸಂಪೂರ್ಣಗೊಂಡಿದೆ. ನಾವು ಅಧಿಕಾರದಲ್ಲಿರುವುದರ ಒಳಗಾಗಿ ರಾಜ್ಯದ ಬಹುತೇಕ ಕೆರೆಗಳನ್ನು ಭರ್ತಿ ಮಾಡುವುದಾಗಿ' ಸಚಿವರು ವಿವರಣೆ ನೀಡಿದರು.