ದಲಿತರಿಗೆ ಮುಖ್ಯಮಂತ್ರಿ ಹುದ್ದೆ, ಮೌನ ಮುರಿದ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 27 : 'ದಲಿತರು ಮುಖ್ಯಮಂತ್ರಿ ಮಾತ್ರವಲ್ಲ ಪ್ರಧಾನಿಯೂ ಆಗಬಹುದು. ರಾಜ್ಯದಲ್ಲಿ ಪ್ರಸ್ತುತ ದಲಿತ ಸಿಎಂ ಬಗ್ಗೆ ಚರ್ಚೆ ಹುಟ್ಟಿಕೊಳ್ಳಲು ಪ್ರತಿಪಕ್ಷಗಳೇ ಕಾರಣ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಕಳುಹಿಸಿದ ಸಂದೇಶದಲ್ಲಿ ಸಿದ್ದರಾಮಯ್ಯ ಅವರು, 'ನಾನು ದಲಿತ ಜನಾಂಗದಲ್ಲಿ ಹುಟ್ಟದೇ ಇರಬಹುದು. ಆದರೆ, ದಲಿತರ ಜೊತೆಯಲ್ಲಿಯೇ ಬೆಳೆದವನು. ಈಗ ಏಕೆ ದಲಿತ ಸಿಎಂ ಚರ್ಚೆಯನ್ನು ಹುಟ್ಟು ಹಾಕಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ' ಎಂದು ಹೇಳಿದ್ದಾರೆ. [ದಲಿತ ನಾಯಕರು ಮುಖ್ಯಮಂತ್ರಿ : ಯಾರು, ಏನು ಹೇಳಿದರು?]

'ದಲಿತ ಸಿಎಂ ಚರ್ಚೆ ಹುಟ್ಟಲು ಪ್ರತಿಪಕ್ಷಗಳೇ ಕಾರಣ ಎಂದು ಹೇಳಿರುವ ಸಿದ್ದರಾಮಯ್ಯ ಅವರು, ವಾಜಪೇಯಿ ಅವರ ಅಧಿಯಲ್ಲಿ ದಲಿತ ಸಮುದಾಯದ ಬಂಗಾರು ಲಕ್ಷ್ಮಣ್ ಅವರು ಬಿಜೆಪಿ ಅಧ್ಯಕ್ಷರಾಗಿದ್ದರು. ಆದರೆ, ಅವರು ಪ್ರಧಾನಿಯಾಗದಂತೆ ಬಿಜೆಪಿಯವರು ತಡೆದರು. ಇಂತವರಿಂದ ದಲಿತರ ಕಾಳಜಿ ಕುರಿತು ಪಾಠ ಕಲಿಯಬೇಕಿಲ್ಲ' ಎಂದು ತಿರುಗೇಟು ನೀಡಿದರು.[ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ ರಮ್ಯಾ?]
'ವಿರೋಧ ಪಕ್ಷಗಳು ಹಿಂದುಳಿದ ಸಮದಾಯದ ವ್ಯಕ್ತಿ ಮುಖ್ಯಮಂತ್ರಿಯಾಗಿರುವುದನ್ನು ಸಹಿಸುತ್ತಿಲ್ಲ ಎಂದು ಆರೋಪಿಸಿದ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರ ದಲಿತ ಸಮುದಾಯಕ್ಕೆ ಎಲ್ಲಾ ರೀತಿಯಿಂದಲೂ ನೆರವು ನೀಡಿದೆ' ಎಂದು ಹೇಳಿದರು. [ವಾಲ್ಮೀಕಿ ವಿರಚಿತ ರಾಮಾಯಣ ಅಂದಿಗೂ-ಇಂದಿಗೂ ಪ್ರಸ್ತುತ]
'ರಾಜ್ಯದಲ್ಲಿ ಪ್ರಸ್ತುತ ದಲಿತ ಸಿಎಂ ವಿಚಾರವನ್ನು ಪ್ರತಿಪಕ್ಷಗಳು ಹುಟ್ಟು ಹಾಕಿವೆ. ದಲಿತ ಸಿಎಂ ಚರ್ಚೆ ಹುಟ್ಟು ಹಾಕಿ ನಮ್ಮ, ನಮ್ಮೊಳಗೆ ಒಡಕು ಮೂಡಿಸುವ ಪಿತೂರಿ ಮಾಡಲಾಗುತ್ತಿದೆ' ಎಂದು ಸಿದ್ದರಾಮಯ್ಯ ಅವರು ದೂರಿದರು.
ಅಂದಹಾಗೆ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಕುರಿತು ಚರ್ಚೆ ನಡೆಸಲು ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದಾರೆ. ಆದ್ದರಿಂದ ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿರಲಿಲ್ಲ.












Click it and Unblock the Notifications