'ಸೈಕ್ಲೋನ್' ತೀವ್ರತೆ ಹೆಚ್ಚಳ: ಕರ್ನಾಟಕದ 11 ಜಿಲ್ಲೆಗೆ 'ಯೆಲ್ಲೋ ಅಲರ್ಟ್' IMD
ಬೆಂಗಳೂರು, ಅಕ್ಟೋಬರ್ 20: ಬಂಗಾಳಕೊಲ್ಲಿಯ ಅಂಡಮಾನ್ ಸಮುದ್ರ ಸಮೀಪ ಸೃಷ್ಟಿಯಾಗಿರುವ ಮೇಲ್ಮೈ ಸುಳಿಗಾಳಿ ಗಂಟೆ ಗಂಟೆಗೂ ತೀವ್ರಗೊಳ್ಳುತ್ತಿದೆ. ಮುಂದಿನ ಹಂತದಲ್ಲಿ ಇದು ವಾಯುಭಾರತ ಕುಸಿತವಾಗಿ ಬದಲಾಗಿ ನಂತರ ಸೈಕ್ಲೋನ್ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತಿವೆ. ಕಳೆದ ಮೂರು ದಿನದ ಹಿಂದೆ ಸಮುದ್ರ ಮಟ್ಟದಲ್ಲಿ ಉಂಟಾದ ಮೇಲ್ಮೈ ಸುಳಿಗಾಳಿಯು ದುರ್ಬಲಗೊಂಡಿಲ್ಲ. ಅದರ ತೀವ್ರತೆ ಹಂತ ಹಂತವಾಗಿ ಹೆಚ್ಚುತ್ತಿದೆ. ಈಗಾಗಲೇ ಅಂಡಮಾನ್ ನಿಕೋಬಾರ್ ಪ್ರದೇಶದಲ್ಲಿ ಗಾಳಿಯ ಸುತ್ತುವಿಕೆ ಪ್ರಮಾಣ ಏರಿದೆ. ಇದು ಮುಂದೆ ಬೃಹತ್ ವಾಯುಭಾರ ಕುಸಿತವಾಗಿ ಹೊರಹೊಮ್ಮಿ ಇನ್ನಷ್ಟು ಪ್ರಬಲಗೊಂಡರೆ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ.
ಈ ವೈಪರಿತ್ಯವು ಈಗಾಗಲೇ ನಿಧಾನವಾಗಿ ಚಲಿಸಲು ಆರಂಭಿಸಿದೆ. ಮುಂದಿನ ಅಕ್ಟೋಬರ್ 23, 24 ಹಾಗೂ 25ರ ವೇಳೆಗೆ ಭೂಮಿ ಸಮೀಪಿಸಿ ಒಡಿಶಾ ಮತ್ತು ಪಶ್ಚಿಮ ಬಂಗಾಳದತ್ತ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಸದ್ಯದ ಮುನ್ಸೂಚನಾ ವರದಿ ತಿಳಿಸಿದೆ.

ಕರ್ನಾಟಕದ 11 ಜಿಲ್ಲೆಗಳಿಗೆ 'ಹಳದಿ' ಅಲರ್ಟ್
ಕರ್ನಾಟಕಕ್ಕೆ ಬಂಗಾಳಕೊಲ್ಲಿಯಲ್ಲಿನ ಹವಾಮಾನ ಬದಲಾವಣೆ ಅಷ್ಟಾಗಿ ಪ್ರಭಾವ ಬೀರುವದಿಲ್ಲವಾದರೂ ಅರಬ್ಬಿ ಸಮುದ್ರದಲ್ಲಿ ಉಂಟಾದ ಸ್ಟ್ರಫ್ನಿಂದಾಗಿ ರಾಜ್ಯ ಹಲವೆಡೆ ಮಹಾಮಳೆ ಆಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಭಾಗದ 11 ಜಿಲ್ಲೆಗಳಲ್ಲಿ ಶುಕ್ರವಾರ ಅಕ್ಟೊಬರ್ 21ಕ್ಕೆ ಅತ್ಯಧಿಕ ಮಳೆ ದಾಖಲಾಗುವ ನಿರೀಕ್ಷೆ ಇದೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳ ಬಹಳಷ್ಟು ಕಡೆಗಳಲ್ಲಿ ಸುಮಾರು 6 ಸೆಂ.ಮೀ.ಗೂ ಹೆಚ್ಚು ಮಳೆ ಬೀಳಲಿದೆ. ಹೀಗಾಗಿ ಅಷ್ಟು ಜಿಲ್ಲೆಗಳಿಗೆ ಒಂದು ದಿನ 'ಹಳದಿ' ಎಚ್ಚರಿಕೆ ನೀಡಲಾಗಿದೆ.

ಅದೇ ರೀತಿ ಉತ್ತರ ಒಳನಾಡು ಹಾಗೂ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಮಾನ್ಯವಾಗಿ, ಕೆಲವೊಮ್ಮೆ ಧಾಕಾರಾರವಾಗಿ ಗುಡುಗು ಮಿಂಚು ಸಹಿತ ಮಳೆ ಆಗಲಿದೆ. ಇದರ ಹೊರತು ಯಾವುದೇ ಗಮನಾರ್ಹ ಬದಲಾವಣೆಗಳು ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.












Click it and Unblock the Notifications