ಗೆಲ್ಲಿಸಿದ ಜನತೆಗೆ ಮಂಡಿಯೂರಿ ನಮಸ್ಕರಿಸಿದ ಸಿ.ಟಿ. ರವಿ
ಚಿಕ್ಕಮಗಳೂರು, ಜೂನ್ 18: ತಮ್ಮನ್ನು ನಾಲ್ಕನೇ ಬಾರಿ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ ಚಿಕ್ಕಮಗಳೂರು ಜನತೆಗೆ ಬಿಜೆಪಿ ನಾಯಕ ಸಿ.ಟಿ. ರವಿ ಮಂಡಿಯೂರಿ ನಮಸ್ಕರಿಸಿದ್ದಾರೆ.
ಚಿಕ್ಕಮಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇಂದು ವಿಧಾನಸಭಾ ಚುನಾವಣೆ ಅವಲೋಕನ ಹಾಗೂ ಕೃತಜ್ಞತಾ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಮ್ಮನ್ನು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ ಕ್ಷೇತ್ರದ ಜನತೆಗೆ ರವಿ ಮಂಡಿಯೂರಿ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಕುರಿತು ಫೇಸ್ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರವಿ, "ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಹಾಗೂ ಯಾವುದೇ ರಾಜಕೀಯ ಹಿನ್ನೆಲೆ ಇರದ ನನ್ನನ್ನು 4 ಬಾರಿ ಶಾಸಕರನ್ನಾಗಿಸಿದ್ದೀರಿ. ನನ್ನನ್ನು ಈ ಮಟ್ಟಕ್ಕೆ ಕೊಂಡೊಯ್ದಿದ್ದು ಚಿಕ್ಕಮಗಳೂರಿನ ಜನತೆ, ನಮ್ಮ ಕಾರ್ಯಕರ್ತರು ಹಾಗೂ ಬಿಜೆಪಿ," ಎಂದಿದ್ದಾರೆ.
"ಇತ್ತೀಚೆಗಷ್ಟೇ ಮುಗಿದ ಚುನಾವಣೆಯಲ್ಲಿ ಚಿಕ್ಕಮಗಳೂರಿನ ಜನತೆ ಎಂದಿನಂತೆ ನನಗೆ ಹರಸಿ ಗೆಲ್ಲಿಸಿದ್ದಾರೆ. ಜನರಿಗೆ ನನ್ನ ಕಾರ್ಯ ವೈಖರಿ, ನನ್ನ ಆಡಳಿತದಲ್ಲಿ ಚಿಕ್ಕಮಗಳೂರು ಕಂಡ ಪ್ರಗತಿ ಹಾಗೂ ಎಲ್ಲಾ ಸಾಧನೆಗಳನ್ನು ತಿಳಿಸುವಲ್ಲಿ, ನನ್ನ ಗೆಲುವುಗಾಗಿ ಶ್ರಮಿಸುವಲ್ಲಿ ನಮ್ಮ ಕಾರ್ಯಕರ್ತರ ಬಹು ದೊಡ್ಡ ಪಾತ್ರ ಇದೆ. ಅವರಿಗೆ ನಾನೆಂದೂ ಚಿರಋಣಿ," ಎಂದು ಹೇಳಿಕೆ ನೀಡಿದ್ದಾರೆ.












Click it and Unblock the Notifications