ಕರ್ನಾಟಕ ಕ್ರೈಂ ನ್ಯೂಸ್ ಗಳ ಸಂಗ್ರಹ
ಮೈಸೂರು, ಸೆ.21: ಪ್ರೇಮ ವೈಫಲ್ಯಕ್ಕೆ ಒಳಗಾಗಿ ಬೇಸರಗೊಂಡಿದ್ದ ವ್ಯಕ್ತಿಯೊಬ್ಬ ಮೈಸೂರಿನಲ್ಲಿ ತನ್ನ ಕಾರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ವ್ಯಕ್ತಿಯನ್ನು 32ವರ್ಷದ ಚಂದ್ರಕಾಂತ್ ಎಂದು ಗುರುತಿಸಲಾಗಿದೆ. ಚಂದ್ರಕಾಂತ್ ಅವರು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಹಲವು ವರ್ಷಗಳಿಂದ ಯುವತಿಯೊಬ್ಬಳನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಆದರೆ,ಇದು ಒನ್ ಸೈಡ್ ಲವ್ ಆಗಿದ್ದು ಆ ಯುವತಿ ಚಂದ್ರಕಾಂತ್ ರನ್ನು ಪ್ರೀತಿಸಲು ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದ ತೀವ್ರವಾಗಿ ನೊಂದ ಚಂದ್ರಕಾಂತ್ ಮೊನ್ನೆ ಕೆಲಸಕ್ಕೆ ಎಂದು ಕಾರು ತೆಗೆದುಕೊಂಡು ಹೋದವರು ಮತ್ತೆ ಮನೆಗೆ ಹಿಂತಿರುಗಿಲ್ಲ. ಶುಕ್ರವಾರ ವಿಜಯನಗರ ಠಾಣೆಗೆ ಚಂದ್ರಕಾಂತ್ ಪೋಷಕರು ದೂರು ನೀಡಿದ್ದಾರೆ.
ಶನಿವಾರ ಬೆಳಗ್ಗೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೇ ಕಾರಿನಲ್ಲಿ ಚಂದ್ರಕಾಂತ್ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪೋಷಕರಿಗೆ ನೀಡಲಾಗಿದೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ. ಇನ್ನಷ್ಟು ಕ್ರೈಂ ಸುದ್ದಿಗಳು ಮುಂದೆ ಇದೆ ಓದಿ...

ಚನ್ನಪಟ್ಟಣ
ಚನ್ನಪಟ್ಟಣ : ಚನ್ನಪಟ್ಟಣ ತಾಲೂಕಿನ ವಿಠಲೇಹಳ್ಳಿ ಕೆರೆಯಲ್ಲಿ ಎಮ್ಮೆಗೆ ನೀರು ಕುಡಿಸಲು ಕೆರೆ ಬದಿಗೆ ಹೋಗಿ ತಾಯಿ ಮಗಳು ಆಕಸ್ಮಿಕವಾಗಿ ಕಾಲು ಜಾರಿ ಕೆರೆ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ವಿಠಲೇನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ 40 ವರ್ಷದ ಸವಿತಾ ಹಾಗೂ ಅವರ ಮಗಳು 17 ವರ್ಷ ರಮ್ಯಾ ಮೃತ ದುರ್ದೈವಿಗಳು.
ಎಮ್ಮೆ ಕೆರೆಯ ಮಧ್ಯ ಭಾಗಕ್ಕೆ ಹೋಗುವುದನ್ನು ತಡೆಗಟ್ಟಲು ರಮ್ಯಾ ಕೆರೆಗೆ ಇಳಿಯಳು ಹೋಗಿ ಜಾರಿ ಬಿದ್ದಳು, ಮಗಳನ್ನು ರಕ್ಷಿಸಲು ಕೆರೆಗೆ ಹಾರಿದ ತಾಯಿ ಕೂಡಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯೂ ಇದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

ಉಡುಪಿ: ಅಪರಾಧಿ ಸೆರೆ
ಪೆಜಮಂಗೂರು ಗ್ರಾಮದ ಮೊಗವೀರ ಪೇಟೆಯ ಸತೀಶ್ ಎಂ. ಎಂಬವನಿಗೆ 2005 ರಲ್ಲಿ 12 ವರ್ಷ ಕಠಿಣ ಸಜೆಯನ್ನು ಉಡುಪಿ ಸೆಷನ್ಸ್ ನ್ಯಾಯಾಲಯವು ವಿಧಿಸಿ ಮೈಸೂರಿನಲ್ಲಿ ಶಿಕ್ಷೆ ಅನುಭವಿಸುತ್ತಿರುವಾಗ 2006 ರಲ್ಲಿ ಪೆರೋಲ್ ರಜೆಯ ಮೇಲೆ ಊರಿಗೆ ಬಂದವನು ವಾಪಾಸ್ಸು ಕಾರಾಗೃಹಕ್ಕೆ ಹೋಗದೇ ತಲೆ ಮರೆಸಿಕೊಂಡಿದ್ದು ಆರೋಪಿಗೆ ನ್ಯಾಯಾಲಯವು ಜಾಮೀನು ರಹಿತ ವಾರೆಂಟು ಹೊರಡಿಸಿ ಆರೋಪಿ ದಸ್ತಗಿರಿಗೆ ಸಿಗದೇ ತಲೆಮರೆಸಿ ಕೊಂಡಿದ್ದನು
ಪೊಲೀಸ್ ಅಧೀಕ್ಷಕರಾದ ಡಾ||ಬೋರಲಿಂಗಯ್ಯ ಎಂ.ಬಿ. ಐಪಿಎಸ್, ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕಸಂತೋಷ್ ಕುಮಾರ್ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಪ್ರಭು ಹಾಗೂ ಸಿಬ್ಬಂದಿಗಳು ಶಿವಮೊಗ್ಗ ಜಿಲ್ಲೆ ವಿಜಯನಗರ ಎಂಬಲ್ಲಿ ಸತೀಶ್ ನನ್ನು ದಸ್ತಗಿರಿ ಮಾಡಿ ಉಡುಪಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ಕಾರಾಗೃಹದಲ್ಲಿ ಇರಿಸಲು ಆದೇಶಿಸಿರುತ್ತದೆ.

ಯಲಹಂಕ
ರಾಜಾನುಕುಂಟೆ ಠಾಣೆ ವ್ಯಾಪ್ತಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳೆ.
ಫ್ರೆಂಡ್ ಪಿಯೂ ಕಾಲೇಜಿನಲ್ಲಿ ಓದುತ್ತಿದ್ದ ಶಾನುಭೋಗನಹಳ್ಳಿಯ ಸೌಂದರ್ಯ(18)ಮೃತ ಪಟ್ಟ ವಿದ್ಯಾರ್ಥಿನಿ. ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ. ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.ಇನ್ನೊಂದು ಪ್ರಕರಣದಲ್ಲಿ 34 ವರ್ಷದ ವಿದ್ಯಾ ಎಂಬ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಕೆ. ಆರ್ ಪುರಂ ನ್ಯೂ ಬಜಾರ್ ಸ್ಟ್ರೀಟ್ ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಸೀಮೆಎಣ್ಣೆ ಸುರಿದು ಕೊಂಡು ಐದಾರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಬಸ್ ಅಪಘಾತ ಸಂಭವಿಸಿದ್ದು ಚಾಲಕನ ನಿಯಂತ್ರಣ ತಪ್ಪಿದ ಬಸ್ 15 ಅಡಿ ಆಳದ ಕದಂಕಕ್ಕೆ ಉರುಳಿಬಿದ್ದಿದೆ. ಕಳಸಾದಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಕೆಕೆಬಿ ಖಾಸಗಿ ಬಸ್ ಬಾಳೆಹೊಳೆ ಬಳಿಯ ಕಗ್ಗನ ಹಳ್ಳಿ ಸಮೀಪ ಘಟನೆ ಸಂಭವಿಸಿದೆ.
ಈ ದುರ್ಘಟನೆಯಲ್ಲಿ 20ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕಳಸಾ ಹಾಗೂ ಬಾಳೆಹೊನ್ನೂರು ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ
ಮಂಗಳೂರು: ಅತ್ಯಾಚಾರಿಗಳಿಬ್ಬರಿಗೆ ಇಲ್ಲಿನ 4ನೇ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ನಿಶಿತ್ ಹಾಗೂ ಅಶೋಕ್ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಇನ್ನಿಬ್ಬರಿಗೂ ಖುಲಾಸೆಯಾಗಿದೆ.
2010ರಲ್ಲಿ ಮಂಗಳೂರಿನ ರೈಲು ಬೋಗಿಯೊಳಗೆ ಒಡಿಶಾ ಮೂಲದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದರು. ರೈಲ್ವೆ ಪೊಲೀಸರು ಆರೋಪಿಗಳನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.












Click it and Unblock the Notifications