ಹೊಸ ಹುದ್ದೆ ಸೃಷ್ಟಿ; ವಿವಾದ ಹುಟ್ಟು ಹಾಕಿದ ಕೆಐಎಡಿಬಿ
ಬೆಂಗಳೂರು, ಅಕ್ಟೋಬರ್ 07: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹೊಸ ಹುದ್ದೆಯನ್ನು ಸೃಷ್ಟಿ ಮಾಡುವ ಮೂಲಕ ವಿವಾದ ಹುಟ್ಟು ಹಾಕಿದೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ವೆಚ್ಚಗಳನ್ನು ಕಡಿತಗೊಳಿಸಲು ಮುಂದಾಗಿದೆ.
ಸರ್ಕಾರ ವೆಚ್ಚ ಕಡಿತ ಮಾಡಲು ದಾರಿ ಹುಡುಕುತ್ತಿದ್ದರೆ ಕೆಐಎಡಿಬಿ ಮುಖ್ಯ ತಾಂತ್ರಿಕ ಸಲಹೆಗಾರ ಎಂಬ ಹುದ್ದೆಯನ್ನು ಸೃಷ್ಟಿ ಮಾಡಲು ಮುಂದಾಗಿದೆ. ಮುಖ್ಯ ಅಭಿವೃದ್ಧಿ ಅಧಿಕಾರಿ ಹುದ್ದೆಯಿಂದ ಕೆಲವು ದಿನಗಳ ಹಿಂದೆ ನಿವೃತ್ತರಾದವರನ್ನು ಈ ಹುದ್ದೆಗೆ ತರಲಾಗುತ್ತಿದೆ.
ಕೆಐಎಡಿಬಿಯಲ್ಲಿ ಹಿಂದೆ ಒಂದೇ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ-ಸಿಇ) ಹುದ್ದೆ ಇತ್ತು. ಅದನ್ನು 2ಕ್ಕೆ ಹೆಚ್ಚಳ ಮಾಡಲಾಗಿತ್ತು. ಈಗ ಈ ಹುದ್ದೆಗಳ ಮೇಲೆ ಮುಖ್ಯ ತಾಂತ್ರಿಕ ಸಲಹೆಗಾರ ಹುದ್ದೆ ಸೃಷ್ಟಿ ಮಾಡಲಾಗುತ್ತಿದೆ.

ಮಂಡಳಿಯ ಹಿರಿಯ ಅಧಿಕಾರಿಗಳೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ವೆಚ್ಚ ಕಡಿತ ಮಾಡಲು ನೋಡುತ್ತಿದ್ದರೆ. ಹೊಸ ಹುದ್ದೆ ಸೃಷ್ಟಿ ಮಾಡುವುದು ಏಕೆ? ಎಂಬುದು ಅಧಿಕಾರಿಗಳ ಪ್ರಶ್ನೆ.
ನಿವೃತ್ತರಾದವರು ವಾಪಸ್ : ಕೆಲವು ದಿನಗಳ ಹಿಂದೆ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಹುದ್ದೆಯಿಂದ ಎಂ. ರಾಮು ಎಂಬುವವರು ನಿವೃತ್ತರಾಗಿದ್ದಾರೆ. ಅವರನ್ನು ಹೊಸದಾಗಿ ಸೃಷ್ಟಿ ಮಾಡುತ್ತಿರುವ ಮುಖ್ಯ ತಾಂತ್ರಿಕ ಸಲಹೆಗಾರ ಹುದ್ದೆಗೆ ನಿಯೋಜನೆ ಮಾಡಲು ತೀರ್ಮಾನಿಸಲಾಗಿದೆ.
ಎಂ. ರಾಮು ಅವರ ಅವಧಿಯಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿ ಅನೇಕ ಟೆಂಡರ್ಗಳನ್ನು ನೀಡಲಾಗಿದೆ. ಅವುಗಳನ್ನು ಸಕ್ರಮಗೊಳಿಸಲು ಮತ್ತೊಂದು ಹುದ್ದೆಯಲ್ಲಿ ಅವರನ್ನು ತಂದು ಕೂರಿಸಲಾಗುತ್ತದೆ ಎಂಬ ಆರೋಪಗಳಿವೆ.
ಶಿರಾದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಸಂಬಂಧಿಸಿದಂತೆ 100 ಕೋಟಿ ಕಾಮಗಾರಿಯನ್ನು ತಾಂತ್ರಿಕ ಪರಿಣಿತಿ ಇಲ್ಲದ ಗುತ್ತಿಗೆದಾರರಿಗೆ ನೀಡಲಾಗಿದೆ. ಇಂತಹ ಹಲವು ಆರೋಪಗಳು ರಾಮು ಅವರ ವಿರುದ್ಧ ಕೇಳಿ ಬರುತ್ತಿವೆ. ಅವರನ್ನು ಪುನಃ ಮುಖ್ಯ ತಾಂತ್ರಿಕ ಸಲಹೆಗಾರ ಹುದ್ದೆಗೆ ಕರೆತರುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.












Click it and Unblock the Notifications