ಕೋವಿಡ್ ರೂಪಾಂತರದ ಆತಂಕ: ರಾಜ್ಯ ಸರ್ಕಾರ ಕೈಗೊಂಡ ಅಗತ್ಯ ಕ್ರಮಗಳೇನು?
ಬೆಂಗಳೂರು, ಡಿಸೆಂಬರ್ 22: ಚೀನಾದಲ್ಲಿ ಕೋವಿಡ್ನ ಹೊಸ ತಳಿಯಿಂದ ಸೃಷ್ಟಿಯಾಗಿರುವ ಬಿಕ್ಕಟ್ಟು ಭಾರತವನ್ನು ಆತಂಕಕ್ಕೆ ಈಡು ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್ ಅವರು ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ನಡೆಸಿದ್ದಾರೆ.
ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ನೀಡಿರುವ ಸುಧಾಕರ್, 'ಅತೀ ಶೀಘ್ರದಲ್ಲಿ ಶೇ.100 ಜನರಿಗೆ ಮೂರನೇ ಡೋಸ್ ಲಸಿಕೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗುವುದು' ಎಂದು ಸುಧಾಕರ್ ಹೇಳಿದ್ದಾರೆ.
'ಚೀನಾ, ಅಮೆರಿಕಾ, ಬ್ರೆಜಿಲ್ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲಾಯಿತು ಎಂದು' ಕೆ.ಸುಧಾಕರ್ ಅವರು ತಿಳಿಸಿದ್ದಾರೆ.

'ತಾಂತ್ರಿಕ ಸಲಹಾ ಸಮಿತಿಯ ತಜ್ಞರು ಸೋಂಕಿನ ಜಾಗತಿಕ ಪರಿಸ್ಥಿತಿ, ಹೊಸ ಪ್ರಬೇಧಗಳ ಲಕ್ಷಣಗಳ ಕುರಿತಂತೆ ವಿವರಿಸಿದರು. ನಂತರ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಚರ್ಚಿಸಲಾಯಿತು' ಎಂದು ಹೇಳಿದ್ದಾರೆ.
'ILI/SARI ಪ್ರಕರಣಗಳನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರ್ಯಾಂಡಮ್ ಟೆಸ್ಟಿಂಗ್ ನಡೆಸಲಾಗುವುದು. ಎಲ್ಲ ಆಕ್ಸಿಜನ್ ಘಟಕಗಳನ್ನು ಪರಿಶೀಲಿಸಲು ಸಿದ್ಧವಾಗಿ ಇರಸಲಾಗುವುದು. ಜಿಲ್ಲಾಸ್ಪತ್ರೆಗಳಲ್ಲಿ ಸೊಂಕಿತರಿಗೆ ಹಾಸಿಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.
'ಮೂರನೇ ಲಸಿಕೆಯ ಅವಶ್ಯಕತೆ ಹಾಗೂ ಪರಿಣಾಮದ ಕುರಿತಂತೆ ಇರುವ ಸಂಶಯ ಹಾಗೂ ಗಾಳಿಸುದ್ದಿಗಳಿಗೆ ಕಿವಿಗೊಡದೆ ಪ್ರತಿಯೊಬ್ಬರೂ ತಪ್ಪದೇ ಆದಷ್ಟು ಬೇಗ ಮೂರನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ' ಎಂದು ಅವರು ತಿಳಿಸಿದ್ದಾರೆ.

'ಕೊರೊನಾ ಮಹಾಮಾರಿಯನ್ನು ಮಣಿಸಲು ನಮ್ಮ ಸರ್ಕಾರ ಎಲ್ಲ ರೀತಿಯ ಅಗತ್ಯ ಮುಂಜಾಗ್ರತೆ ಹಾಗೂ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸಾರ್ವಜನಿಕರು ಈ ಹೋರಾಟದಲ್ಲಿ ಕೈಜೋಡಿಸಿದರೆ ಕೊರೋನಾದಿಂದ ಯಾವುದೇ ಅಪಾಯವಿಲ್ಲದೆ ನಿಶ್ಚಿತವಾಗಿ ಸುರಕ್ಷಿತವಾಗಿ ಪಾರಾಗಬಹುದು' ಎಂದು ಟ್ವೀಟ್ ಮಾಡಿದ್ದಾರೆ.
ಕೋವಿಡ್ನ ಹೊಸ ರೂಪಾಂತರವನ್ನು ತಡೆಯಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಜಿನೋಮ್ ಸಿಕ್ವಿನ್ಸಿಂಗ್ ಪರೀಕ್ಷೆ ನಡೆಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಟೆಸ್ಟ್ ನಡೆಸಲು ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಕ್ ಮಾಂಡವೀಯ ಲೋಕಸಭೆಗೆ ತಿಳಿಸಿದ್ದಾರೆ.












Click it and Unblock the Notifications