ಕೊರೊನಾ ಉಲ್ಬಣ: ಐತಿಹಾಸಿಕ ಚಿತ್ರದುರ್ಗ ಕೋಟೆ, ಬೇಲೂರು-ಹಳೇಬೀಡು ದೇಗುಲಗಳು ಬಂದ್
ಹಾಸನ, ಏಪ್ರಿಲ್ 16: ಭಾರತದಾದ್ಯಂತ ಕೊರೊನಾ ಸೋಂಕು 2ನೇ ಅಲೆ ಹೆಚ್ಚಳವಾಗುತ್ತಿರುವುದರಿಂದ ಕೇಂದ್ರ ಸರ್ಕಾರ ಮತ್ತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ.
ಈ ಹಿಂದೆ ಕೊರೊನಾ ಲಾಕ್ಡೌನ್ ಮಾಡಿದ್ದಾಗ ಕೆಲವು ತಿಂಗಳುಗಳ ಕಾಲ ಪ್ರವಾಸಿ ತಾಣಗಳು ಹಾಗೂ ದೇವಸ್ಥಾನಗಳನ್ನು ಬಂದ್ ಮಾಡಲಾಗಿತ್ತು.
ಇದೀಗ ಅದೇ ರೀತಿ ದೇಶದ ಎಲ್ಲ ಪ್ರಸಿದ್ಧ ದೇವಸ್ಥಾನಗಳು, ಐತಿಹಾಸಿಕ ಸ್ಮಾರಕಗಳು ಮತ್ತು ವಸ್ತುಸಂಗ್ರಹಾಲಯಗಳಿಗೆ ಸಾರ್ವಜನಿಕರ ಪ್ರವೇಶವನ್ನು ರದ್ದುಗೊಳಿಸಿ ಭಾರತೀಯ ಪುರಾತತ್ವ ಸ್ಮಾರಕ ನಿರ್ದೇಶಕ ಎನ್.ಕೆ ಪಾಠಕ್ ಆದೇಶ ಹೊರಡಿಸಿದ್ದಾರೆ.

ಹಾಸನ ಜಿಲ್ಲೆಯ ಐತಿಹಾಸಿಕ ದೇವಸ್ಥಾನಗಳಾದ ಬೇಲೂರು, ಹಳೇಬೀಡು ಹಾಗೂ ಶ್ರವಣಬೆಳಗೊಳಕ್ಕೆ ಮೇ.15ರವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಗುರುವಾರವಷ್ಟೇ ಬೇಲೂರಿನ ಚನ್ನಕೇಶವ ದೇವಸ್ಥಾನದಲ್ಲಿ ಗರುಡ ಪ್ರತಿಷ್ಠೆ ಮಾಡಿ ಸಾಂಕೇತಿಕ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಇಂದಿನಿಂದ ಒಂದು ತಿಂಗಳ ಕಾಲ ದೇವಸ್ಥಾನ ಬಂದ್ ಆಗಲಿದೆ.

ಚಿತ್ರದುರ್ಗ ಕೋಟೆಗೆ ನಿಷೇಧ
ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆ ಹೆಚ್ಚಾದ ಹಿನ್ನೆಲೆ ಭಾರತೀಯ ಪುರಾತತ್ವ ಇಲಾಖೆ ಸೂಚನೆಯಂತೆ ಐತಿಹಾಸಿಕ ಚಿತ್ರದುರ್ಗ ಕೋಟೆಯನ್ನು ಬಂದ್ ಮಾಡಲಾಗಿದೆ. ಕೊರೊನಾ ಪ್ರಕರಣಗಳ ಹೆಚ್ಚಳದಿಂದ ಪ್ರವಾಸಿಗರಿಗೆ ಚಿತ್ರದುರ್ಗದ ಕೋಟೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.

ಇಂದಿನಿಂದ ಒಂದು ತಿಂಗಳ ಕಾಲ ಚಿತ್ರದುರ್ಗದ ಕಲ್ಲಿನ ಕೋಟೆ ಹಾಗೂ ಪಾಳೇಗಾರರ ಸ್ಮಾರಕಗಳ ಸಾರ್ವಜನಿಕ ವೀಕ್ಷಣೆಗೆ ಮೇ.15ರವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಪ್ರತಿನಿತ್ಯ ಇಲ್ಲಿಗೆ 2ರಿಂದ 3 ಸಾವಿರ ಜನರು ಆಗಮಿಸುತ್ತಿದ್ದರು.












Click it and Unblock the Notifications