ರಾಜ್ಯದ 7 ಜಿಲ್ಲೆಗಳಲ್ಲಿ ಐಸಿಯು ಹಾಸಿಗೆಗಳೆಲ್ಲಾ ಫುಲ್, ಜನರ ಪರದಾಟ
ಬೆಂಗಳೂರು, ಮೇ 07: ರಾಜ್ಯದ ಏಳು ಜಿಲ್ಲೆಗಳಲ್ಲಿ ಐಸಿಯು ಹಾಸಿಗೆಗಳೆಲ್ಲಾ ಭರ್ತಿಯಾಗಿದೆ ಎಂದು ರಾಜ್ಯದ ಕ್ರಿಟಿಕಲ್ ಕೇರ್ ಸಪೋರ್ಟ್ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ರಾಜ್ಯದ ಹಲವೆಡೆ ಐಸಿಯು ಹಾಸಿಗೆ, ಆಮ್ಲಜನಕತದ ಕೊರತೆ ಎದುರಾಗಿದೆ.
ಹೆಚ್ಚುವರಿ ಹಣ ವಸೂಲಿಗೆ ಕಡಿವಾಣ, ಸಿಟಿ ಸ್ಕ್ಯಾನಿಂಗ್ಗೆ ದರ ನಿಗದಿ ಮಾಡಿದ ಸರ್ಕಾರ
ಗುರುವಾರ ಸಿಸಿಎಸ್ಯು ನೀಡಿರುವ ಮಾಹಿತಿ ಪ್ರಕಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದರೆ ತಪ್ಪಾಗಲಾರದು, ರಾಜ್ಯದ ಇತರೆ ಜಿಲ್ಲೆಗಳಲ್ಲೂ ಮುಂದಿನ ವಾರದಲ್ಲಿ ಐಸಿಯು ಹಾಸಿಗೆ , ವೆಂಟಿಲೇಟರ್ಗಳ ಕೊರತೆ ಮತ್ತಷ್ಟು ತಲೆದೋರುವ ಸಾಧ್ಯತೆಗಳಿವೆ.
ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತಿದಿನ ಬೆಳಗ್ಗೆ ಆಮ್ಲಜನಕ ಸೌಲಭ್ಯದ ಹಾಸಿಗೆ, ಕೊರೊನಾ ಔಷಧಗಳು, ಐಸಿಯು ಹಾಸಿಗೆಗಳ ಸಂಖ್ಯೆ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ವೆಂಟಿಲೇಟರ್ಗಳ ಮಾಹಿತಿಯನ್ನು ತೀವ್ರ ನಿಗಾ ತಜ್ಞರನ್ನು ಒಳಗೊಂಡಿರುವ ಸಿಸಿಎಸ್ಯು ಮಾಹಿತಿಯನ್ನು ಕಲೆ ಹಾಕುತ್ತದೆ.
ಐಸಿಯ ಹಾಸಿಗೆಗಳ ಕೊರತೆ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ, ಇದು ಆತಂಕವನ್ನುಂಟು ಮಾಡಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕಾರವಾರ, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಲಭ್ಯತೆ ಉತ್ತಮವಾಗಿದೆ.
ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರ, ಬಳ್ಳಾರಿ, ಮಂಡ್ಯ, ತುಮಕೂರು, ಚಾಮರಾಜನಗರ, ಉಡುಪಿಯ ಕುಂದಾಪುರ ಜಿಲ್ಲಾಸ್ಪತ್ರೆಗಳಲ್ಲಿ ಆಮ್ಲಜನಕ ಸೌಲಭ್ಯದ ಹಾಸಿಗೆಗಳ ಕೊರತೆ ಹೆಚ್ಚಾಗಿದೆ. ಈ ಆಸ್ಪತ್ರೆಗಳಿಗೆ 20 ರಿಂದ 100 ವೆಂಟಿಲೇಟರ್ಗಳ ಅಗತ್ಯವಿದೆ ಎಂದು ಹೇಳಲಾಗಿದೆ.
ಬೆಂಗಳೂರು, ಮೈಸೂರಿನ ಕೆಆರ್ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳು ಸಂಪೂರ್ಣ ಭರ್ತಿಯಾಗಿವೆ, ಉಳಿದಂತೆ ಧಾರವಾಡ, ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲೆಗಳು ಹಾಸಿಗೆಗಳಲ್ಲಿ ಲಭ್ಯತೆ ಸಮರ್ಪಕವಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ಹಾಗೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಕೇವಲ ಎರಡು ಐಸಿಯು ಹಾಸಿಗೆಗಳು ಲಭ್ಯವಿದೆ ಎಂದು ಹೇಳಲಾಗಿದೆ.