ಲೋಕಾಯುಕ್ತದಲ್ಲಿ ಭ್ರಷ್ಟಾಚಾರ 4 ಪ್ರಮುಖ ಬೆಳವಣಿಗೆಗಳು
ಬೆಂಗಳೂರು, ಆಗಸ್ಟ್ 19 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಮುಖ ಬೆಳವಣಿಗೆಗಳಾಗಿವೆ. ಲೋಕಾಯುಕ್ತ ಮಾಜಿ ಜಂಟಿ ಆಯುಕ್ತ ಸೈಯದ್ ರಿಯಾಜ್ ಜಾಮೀನು ಪಡೆಯಲು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಜ್ಯಪಾಲರು ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ -2015ಕ್ಕೆ ಅಂಕಿತ ಹಾಕುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಪದಚ್ಯುತಿಗೆ ಪ್ರಕ್ರಿಯೆಗಳನ್ನು ಆರಂಭಿಸಿದೆ. ಸೆಪ್ಟೆಂಬರ್ನಲ್ಲಿ ವಿಶೇಷ ವಿಧಾನ ಮಂಡಲ ಅಧಿವೇಶನ ನಡೆಸಿ, ಲೋಕಾಯುಕ್ತರನ್ನು ಪದಚ್ಯತಿಗೊಳಿಸುವ ಸಾಧ್ಯತೆ ಇದೆ. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರ ವಿರುದ್ಧ ಎಸ್ಐಟಿ 4ನೇ ಎಫ್ಐಆರ್ ದಾಖಲು ಮಾಡಿದೆ. ಅಶ್ವಿನ್ ರಾವ್ ಅವರನ್ನು ಎಸ್ಐಟಿ ಈಗಾಗಲೇ ಬಂಧಿಸಿದ್ದು, ಅವರ ಜಾಮೀನು ಅರ್ಜಿಯೂ ವಜಾಗೊಂಡಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಎಚ್.ಎಸ್.ರಾಜಶೇಖರ ಅವರನ್ನು ತಿಪಟೂರಿನಲ್ಲಿ ಸೋಮವಾರ ರಾತ್ರಿ ಬಂಧಿಸಿದೆ. ನಾಲ್ಕು ಬೆಳಗವಣಿಗೆಗಳೇನು ಚಿತ್ರಗಳಲ್ಲಿ ನೋಡಿ...
ಲೋಕಾಯುಕ್ತರ ಪದಚ್ಯುತಿಗೆ ಪ್ರಕ್ರಿಯೆ ಆರಂಭ
ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಪದಚ್ಯುತಿಗೆ ಬಿಜೆಪಿ ಪ್ರಕ್ರಿಯೆ ಆರಂಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಕಾರ್ಯದ ಸಮನ್ವಯಕಾರರಾಗಿ ಶಾಸಕರಾದ ಸಿ.ಟಿ.ರವಿ ಹಾಗೂ ಲಕ್ಷ್ಮಣ ಸವದಿ ಅವರನ್ನು ನೇಮಿಸಲಾಗಿದೆ. ವಿಚಾರದಲ್ಲಿ ಪಕ್ಷಾತೀತವಾಗಿ ಎಲ್ಲರೂ ಕೆಲಸ ಮಾಡಬೇಕಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೂ ಸಹಿ ಮಾಡಲು ಮನವಿ ಮಾಡುತ್ತೇವೆ ಎಂದು ಜೋಶಿ ತಿಳಿಸಿದ್ದಾರೆ.
ಅಶ್ವಿನ್ ರಾವ್ ವಿರುದ್ಧ 4ನೇ ಎಫ್ಐಆರ್
ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರ ವಿರುದ್ಧ 4ನೇ ಎಫ್ಐಆರ್ ದಾಖಲಾಗಿದೆ. ಲೋಕೋಪಯೋಗಿ ಇಲಾಖೆಯ ಮಾಗಡಿ ಉಪ ವಿಭಾಗದಲ್ಲಿ ಮುಖ್ಯ ಇಂಜಿನಿಯರ್ ಆಗಿರುವ ಉದಯ ಶಂಕರ್ ಅವರು ಸಲ್ಲಿಸಿರುವ ದೂರಿನ ಅನ್ವಯ ಮಂಗಳವಾರ ಎಸ್ಐಟಿ ಎಫ್ಐಆರ್ ದಾಖಲು ಮಾಡಿದೆ. ಅಶ್ವಿನ್ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಲೋಕಾಯುಕ್ತ ಕೋರ್ಟ್ ವಜಾಗೊಳಿಸಿದ್ದು, ಆ.27ರ ತನಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಹೈಕೋರ್ಟ್ ಮೆಟ್ಟಿಲೇರಿದ ಸೈಯದ್ ರಿಯಾಜ್
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಲೋಕಾಯುಕ್ತ ಜಂಟಿ ಆಯುಕ್ತ ಸೈಯದ್ ರಿಜಾಯ್ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರ ಏಕಸದಸ್ಯ ಪೀಠ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ)ಗೆ ಆಕ್ಷೇಪಣೆ ಸಲ್ಲಿಸಲು ಒಂದು ವಾರಗಳ ಕಾಲಾವಕಾಶ ನೀಡಿ, ವಿಚಾರಣೆಯನ್ನು ಮುಂದೂಡಿದೆ.
ಭ್ರಷ್ಟಾಚಾರ ಪ್ರಕರಣ 8ನೇ ಆರೋಪಿ ಬಂಧನ
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಎಚ್.ಎಸ್.ರಾಜಶೇಖರ ಅವರನ್ನು ತಿಪಟೂರಿನಲ್ಲಿ ಸೋಮವಾರ ರಾತ್ರಿ ಬಂಧಿಸಿದೆ. ಲೋಕಾಯುಕ್ತ ಕೋರ್ಟ್ ಆ.26ರ ತನಕ ರಾಜಶೇಖರ ಅವರನ್ನು ಎಸ್ಐಟಿ ವಶಕ್ಕೆ ಒಪ್ಪಿಸಿದೆ.
ಇದುವರೆಗೂ ಬಂಧಿತರಾದವರು
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 8 ಜನರನ್ನು ಬಂಧಿಸಲಾಗಿದೆ. ಎಚ್.ಎಸ್.ರಾಜಶೇಖರ್. ಅಶ್ವಿನ್ ರಾವ್, ಸೈಯದ್ ರಿಯಾಜ್, ಅಶೋಕ್ ಕುಮಾರ್, ಶ್ರೀನಿವಾಸ ಗೌಡ, ಶಂಕರೇಗೌಡ, ವಿ. ಭಾಸ್ಕರ್, ಮೊಹಮ್ಮದ್ ಸಾದಿಕ್ ಬಂಧಿತರು.