ಶ್ರೀಲಂಕಾಗೆ ಹೊರಟಿದ್ದ ಹೊಟ್ಟೆ ಕೃಷ್ಣ ಬಂಧಿಸಿದ ಎಸ್ಐಟಿ
ಬೆಂಗಳೂರು, ಆಗಸ್ಟ್ 24 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಟ್ಟೆ ಕೃಷ್ಣ ಎಂಬುವವರನ್ನು ಎಸ್ಐಟಿ ಬಂಧಿಸಿದೆ. ಪ್ರಕರಣದಲ್ಲಿ ಇತರರು ಬಂಧಿತರಾದ ನಂತರ ತಲೆಮರೆಸಿಕೊಂಡಿದ್ದ ಹೊಟ್ಟೆ ಕೃಷ್ಣ ಅವರು ಶ್ರೀಲಂಕಾಗೆ ಹಾರುವ ತಯಾರಿಯಲ್ಲಿದ್ದಾಗ ಬಂಧಿಸಲಾಗಿದೆ.
ಶ್ರೀಲಂಕಾಗೆ ಹೊರಡಲು ಸಿದ್ಧರಾಗುತ್ತಿದ್ದ ಹೊಟ್ಟೆ ಕೃಷ್ಣ ಅವರನ್ನು ಶನಿವಾರ ರಾತ್ರಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಶೇಷ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ಜಿ.ಬೋಪಯ್ಯ ಅವರ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿದ್ದು, ಆ.29ರ ತನಕ ಎಸ್ಐಟಿ ವಶಕ್ಕೆ ಒಪ್ಪಿಸಲಾಗಿದೆ. [ಅಶ್ವಿನ್ ರಾವ್ ಸ್ನೇಹಿತನ ಬಂಧನ]

ಹೊಟ್ಟೆ ಕೃಷ್ಣ ಭ್ರಷ್ಟಚಾರ ಪ್ರಕರಣದಲ್ಲಿ ಬಂಧಿತರಾಗಿರುವ 11ನೇ ಆರೋಪಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಬಂಧಿಸಿರುವ ವಿ.ಭಾಸ್ಕರ್ ಸ್ನೇಹಿತರಾಗಿರುವ ಹೊಟ್ಟೆ ಕೃಷ್ಣ ಅವರು ಇತರ ಆರೋಪಿಗಳು ಬಂಧಿತರಾದ ನಂತರ ತಲೆಮರೆಸಿಕೊಂಡಿದ್ದರು. ಅವರ ಬಂಧನಕ್ಕಾಗಿ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. [ನಿವೃತ್ತ ನ್ಯಾ.ಸಂತೋಷ್ ಹೆಗಡೆ ಸಂದರ್ಶನ]
ಎಸ್ಐಟಿ ಮೂಲಗಳ ಮಾಹಿತಿ ಪ್ರಕಾರ ಹೊಟ್ಟೆ ಕೃಷ್ಣ ಅವರನ್ನು ರಾಮನಗರದ ಲೋಕೋಪಯೋಗಿ ಇಂಜಿನಿಯರ್ ಉದಯ್ ಕುಮಾರ್ ಅವರು ನೀಡಿರುವ ದೂರಿನ ಅನ್ವಯ ಬಂಧಿಸಲಾಗಿದೆ. ಹೊಟ್ಟೆ ಕೃಷ್ಣ ಅವರನ್ನು ವಶಕ್ಕೆ ಪಡೆದುಕೊಂಡಿರುವ ಎಸ್ಐಟಿ ವಿಚಾರಣೆ ಮುಂದುವರೆಸಿದೆ.
11 ಆರೋಪಿಗಳ ಬಂಧನ : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 11 ಆರೋಪಿಗಳನ್ನು ಎಸ್ಐಟಿ ಬಂಧಿಸಿದೆ. ಅಶ್ವಿನ್ ರಾವ್, ಎಚ್.ಎಸ್.ರಾಜಶೇಖರ್, ಸೈಯದ್ ರಿಯಾಜ್, ಅಶೋಕ್ ಕುಮಾರ್, ಶ್ರೀನಿವಾಸ ಗೌಡ, ಶಂಕರೇಗೌಡ, ವಿ. ಭಾಸ್ಕರ್, ಮೊಹಮ್ಮದ್ ಸಾದಿಕ್, ಎನ್. ನರಸಿಂಹಮೂರ್ತಿ, ನರಸಿಂಹರಾವ್, ಹೊಟ್ಟೆ ಕೃಷ್ಣ ಬಂಧಿತ ಆರೋಪಿಗಳು.











Click it and Unblock the Notifications