ಕೊರೊನಾ ಗಂಡಾಂತರ, ಮಕ್ಕಳಿಗೆ ರಜೆ: ಹಾಗಾದ್ರೆ ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ?
ಕರ್ನಾಟಕ, ಮಾರ್ಚ್ 09: ವಿಶ್ವದಾದ್ಯಂತ ಸಾವಿರಾರು ಜನರನ್ನು ಬಲಿ ಪಡೆದಿರುವ ಡೆಡ್ಲಿ ಕೊರೊನಾ ವೈರಸ್ ಭಾರತಕ್ಕೂ ವಕ್ಕರಿಸಿದೆ. ಮಾರಣಾಂತಿಕ ಕೊರೊನಾ ವೈರಸ್ ಭೀತಿಯಿಂದಾಗಿ ಕರ್ನಾಟಕದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಪೂರ್ವ ಪ್ರಾಥಮಿಕ ಶಾಲೆ (ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ) ಗಳಿಗೆ ಇಂದಿನಿಂದ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹಾಗಾದ್ರೆ, ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಏನಾದರೂ ಬಂದಿದೆಯಾ.? ಉಳಿದ ಶಾಲಾ ಮಕ್ಕಳಿಗೆ ರಜೆ ಏಕೆ ಘೋಷಿಸಿಲ್ಲ.? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಉದ್ಭವಿಸಿದೆ. ಇದೇ ವಿಚಾರದ ಕುರಿತು ಇಂದು ವಿಧಾನಸಭೆಯ ಕಲಾಪದಲ್ಲೂ ಚರ್ಚೆ ನಡೆಯಿತು. ವಿಧಾನಸಭೆಯಲ್ಲೂ ಕೊರೊನಾ ವೈರಸ್ ಆತಂಕ ಸದ್ದು ಮಾಡಿತು.

ಭಾರತದಲ್ಲಿ ಹರಡಿದರೆ ಕಷ್ಟ
ವಿಧಾನಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಕೊರೊನಾ ಬಗ್ಗೆ ಬಿಜೆಪಿ ಶಾಸಕ ಭರತ್ ಶೆಟ್ಟಿ ಮಾತಿಗಿಳಿದರು. ''ಆರು ಖಂಡಗಳಲ್ಲಿ ಕೊರೊನಾ ವೈರಸ್ ಹರಡಿದೆ. ಭಾರತದಲ್ಲಿ ಈ ವೈರಸ್ ಹರಡಿದ್ರೆ ಕಷ್ಟ. ಜನ ಆತಂಕಕ್ಕೆ ಒಳಗಾಗಿದ್ದಾರೆ. ಏರ್ ಪೋರ್ಟ್ ಮತ್ತಿತರ ಕಡೆ ಮಾಸ್ಕ್ ಹಾಕಿಕೊಂಡು ಜನ ಓಡಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿಗಳು ಹರಿದಾಡುತ್ತಿವೆ. ಹೀಗಾಗಿ, ಸರ್ಕಾರ ಸರಿಯಾದ ಮಾಹಿತಿ ಕೊಡಬೇಕು'' ಎಂದು ಭರತ್ ಶೆಟ್ಟಿ ಒತ್ತಾಯಿಸಿದರು.

ಹೆಲ್ತ್ ಎಮರ್ಜೆನ್ಸಿ ಬಂದಿದೆಯಾ?
''ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳನ್ನು ಸರ್ಕಾರ ನೇಮಿಸಿದೆ. ಆದರೆ ಸರ್ಕಾರ ಹೆಸರಿಸಿರುವ ಅಧಿಕಾರಿಗಳು ಸಚಿವರ ಕಚೇರಿಯಲ್ಲಿ ಡೆಪ್ಟೇಷನ್ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಎಷ್ಟು ಜನ ಬರುತ್ತಿದ್ದಾರೆ.? ಅವರಲ್ಲಿ ಎಷ್ಟು ಜನರನ್ನು ತಪಾಸಣೆ ಮಾಡಲಾಗುತ್ತಿದೆ.? ಎಲ್ಲಿ ಮಾಡುತ್ತಿದ್ದಾರೆ.? ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ಪ್ರಯಾಣಿಕರು ತಮ್ಮ ರಾಷ್ಡ್ರ ಪ್ರವೇಶಿಸದಂತೆ ನಿರ್ಬಂಧಿಸಿವೆ. ನಾವು ತಪಾಸಣೆಯನ್ನೇ ಮಾಡದೇ ಇದ್ದರೆ ಹೇಗೆ.? ಮಾಸ್ಕ್ ಗಳ ಬೆಲೆ 100 ರೂಪಾಯಿ ಆಗಿದೆ. ಎಲ್.ಕೆ.ಜಿ, ಯು.ಕೆ.ಜಿ ನರ್ಸರಿ ಮಕ್ಕಳಿಗೆ ರಜೆ ಕೊಟ್ಟಿದ್ದಾರೆ ಎಂದರೆ ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಏನಾದರೂ ಬಂದಿದೆಯಾ.? ಉಳಿದ ಶಾಲಾ ಮಕ್ಕಳಿಗೆ ರಜೆ ಏಕೆ ಘೋಷಿಸಿಲ್ಲ.? ಪ್ರಧಾನಿಯವರೇ ಶೇಕ್ ಹ್ಯಾಂಡ್ ಮಾಡುವುದು ಬೇಡ ಎಂದಿದ್ದಾರೆ ಎಂದರೆ ಪ್ರಕರಣದ ಗಂಭೀರತೆ ಅರ್ಥ ಮಾಡಿಕೊಳ್ಳಬೇಕು'' ಎಂದು ಹೆಚ್.ಕೆ.ಪಾಟೀಲ್ ಹೇಳಿದರು.

ಕೊರೊನಾ ಸೋಂಕು ಹರಡಿದ್ರೆ ಮುಂದೇನು.?
''ನಾವೀಗ ಮೊಬೈಲ್ ಆನ್ ಮಾಡಿದ್ರೆ ಸಾಕು ಕೆಮ್ಮುವ ರಿಂಗ್ ಟೋನ್ ಕೇಳಿಸುತ್ತದೆ. ಸರ್ಕಾರ ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡಿರಬಹುದು. ಇಂದಿನಿಂದ ಬೆಂಗಳೂರಿನಲ್ಲಿ ಎಲ್.ಕೆ.ಜಿ, ಯು.ಕೆ.ಜಿ, ನರ್ಸರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಒಂದು ವೇಳೆ ಕೊರೊನಾ ವೈರಸ್ ಸೋಂಕು ಹರಡಿದ್ರೆ ಮುಂದೇನು.?'' ಎಂದು ಹ್ಯಾರಿಸ್ ಪ್ರಶ್ನಿಸಿದರು.

ದೇವನಹಳ್ಳಿಯಲ್ಲಿ ರಜೆ ನೀಡಿ
''ದೇವನಹಳ್ಳಿ ಅಂತಾರಾಷ್ಡ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಕಾರ್ಮಿಕರು ದೇವನಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ವಾಸ ಮಾಡುತ್ತಿದ್ದಾರೆ. ನೀವು ರಜೆ ನೀಡುವುದಾರೆ ಬೆಂಗಳೂರಲ್ಲಿ ಅಲ್ಲ, ದೇವನಹಳ್ಳಿಯಲ್ಲಿ ರಜೆ ನೀಡಿ, ಮುಂಜಾಗ್ರತಾ ಕ್ರಮಗಳನ್ನು ಹೆಚ್ಚು ಮಾಡದೇ ಇದ್ದರೆ ಕೊರೊನಾ ವೈರಸ್ ನಿಯಂತ್ರಣ ಸಾಧ್ಯವಿಲ್ಲ'' ಎಂದು ನಿಸರ್ಗ ನಾರಾಯಣಸ್ವಾಮಿ ನುಡಿದರು.












Click it and Unblock the Notifications