ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬಾರದ ಕೋವಿಡ್: ನಾಳೆ ಸರ್ವ ಪಕ್ಷ ಸಭೆ ಕರೆದ ಸಿಎಂ ಬಿಎಸ್ವೈ
ಬೆಂಗಳೂರು, ಜೂ. 25: ಲಾಕ್ಡೌನ್, ಸೀಲ್ಡೌನ್ ಜೊತೆಗೆ ಸರ್ಕಾರದ ಪ್ರಯತ್ನಗಳ ಹೊರತಾಗಿಯೂ ಕೊರೊನಾ ವೈರಸ್ ಹಾವಳಿ ಬೆಂಗಳೂರಿನಲ್ಲಿ ಹಿಡಿತಕ್ಕೆ ಸಿಗುತ್ತಿಲ್ಲ. ಬೆಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳನ್ನು ನಿಭಾಯಿಸುವುದು ಕಷ್ಟವಾಗುವ ಲಕ್ಷಣಗಳು ಕಾಣುತ್ತಿವೆ. ವಿರೋಧ ಪಕ್ಷಗಳ ನಾಯಕರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮತ್ತೆ ಲಾಕ್ಡೌನ್ ಜಾರಿ ಮಾಡಲು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಮುಖ್ಯಮಂತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ವ ಪಕ್ಷ ಸಭೆ ಕರೆದಿದ್ದಾರೆ
ನಮ್ಮ ಎಲ್ಲಾ ರೀತಿಯ ಪ್ರಯತ್ನ ಮಾಡಿದ ಬಳಿಕವೂ, ಬೆಂಗಳೂರಿನಲ್ಲಿ ಕೋವಿಡ್ ಪಿಡುಗು ಹೆಚ್ಚಾಗುತ್ತಿದೆ. ಹೀಗಾಗಿ ಈ ಬಗ್ಗೆ ಚರ್ಚಿಸಲು ನಾಳೆ ಸರ್ವ ಪಕ್ಷ ಸಭೆಯನ್ನು ಕರೆದಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿರುವ ಅವರು, ನಮ್ಮ ಎಲ್ಲಾ ರೀತಿಯ ಪ್ರಯತ್ನಗಳ ಬಳಿಕವೂ, ಬೆಂಗಳೂರಿನ ಕೆಲವು ಪ್ರದೇಶಗಳನ್ನು ಸೀಲ್ಡೌನ್ ಮಾಡಬೇಕಾಗಿ ಬಂದಿದೆ ಎಂದಿದ್ದಾರೆ.
ರಾಜ್ಯಾದ್ಯಂತ ಮತ್ತೆ ಲಾಕ್ಡೌನ್? ಸಂಪುಟ ಸಭೆಯಲ್ಲಿ ನಿರ್ಧಾರ
ಇಡೀ ದೇಶದಲ್ಲಿ ಬೆಂಗಳೂರು ಕೋವಿಡ್ ನಿಯಂತ್ರಣದಲ್ಲಿ ಮಾದರಿಯಾಗಿದೆ. ಆದರೂ ಕಳೆದ ಕೆಲ ದಿನಗಳಿಂದ ಸೋಂಕು ಹೆಚ್ಚುತ್ತಿದೆ. ಜನರಿಗೆ ಎಲ್ಲ ರೀತಿಯ ಸಹಕಾರವನ್ನು ಕೊಡಲಾಗಿದೆ. ಆದರೂ ಬೆಂಗಳೂರಿನ ಕೆಲವು ಸ್ಲಂಗಳು ಸೇರಿದಂತೆ ಹಲವೆಡೆ ಸೋಂಕು ಹರಡುತ್ತಿದೆ. ಸಾಮಾಜಿಕ ಅಂತರ ಕಾಪಾಡಬೇಕಾಗಿರುವುದು ಜನರ ಕರ್ತವ್ಯ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರು ಶಾಸಕರು, ಸಂಸದರು ಹಾಗೂ ಸಚಿವರು, ಅಧಿಕಾರಿಗಳು ಸಭೆ ಕರೆದಿದ್ದೇವೆ. ಕೋವಿಡ್ ತಡೆಯಲು ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಿ, ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನ ಮಾಡುತ್ತೇವೆ.
ನಾಳೆ ಬೆಂಗಳೂರಿನ ಎಲ್ಲಾ ಪಕ್ಷದ ಶಾಸಕರು, ಸಚಿವರು ಜೊತೆ ಸಭೆ ಮಾಡುತ್ತೇವೆ. ನಾಳೆ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ನಗರದ ಸರ್ವ ಪಕ್ಷ ಶಾಸಕರ ಸಭೆ ಕರೆದಿದ್ದೇವೆ ಎಂದು ಸಿಎಂ ಬಿಎಸ್ವೈ ಅವರು ಹೇಳಿಕೆ ಕೊಟ್ಟಿದ್ದಾರೆ.